
ಮೈಸೂರು: ‘ಬುಡಕಟ್ಟು ಜನರು ಶಿಕ್ಷಣ, ಆರೋಗ್ಯ, ಆರ್ಥಿಕವಾಗಿ ಸಬಲರಾಗಲು ಸರ್ಕಾರದ ನೀತಿಗಳಲ್ಲಿ ಆದ್ಯತೆ ನೀಡಬೇಕು’ ಎಂದು ಮೈಸೂರು ವಿ.ವಿ.ಯ ಡಾ.ಬಿ.ಆರ್. ಅಂಬೇಡ್ಕರ್ ಸಂಶೋಧನಾ ಕೇಂದ್ರದ ಹಿರಿಯ ಪ್ರಾಧ್ಯಾಪಕ ಜೆ. ಸೋಮಶೇಖರ್ ಹೇಳಿದರು.
ಇಲ್ಲಿನ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ, ರಾಜ್ಯ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ‘ಬುಡಕಟ್ಟು ಸಮುದಾಯದ ಸಮಸ್ಯೆಗಳು’ ಕುರಿತ ರಾಷ್ಟ್ರೀಯ ವಿಚಾರಣಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
‘ಅಭಿವೃದ್ಧಿಯ ಹೆಸರಿನಲ್ಲಿ ಬುಡಕಟ್ಟು ಜನರನ್ನು ಪೈಪೋಟಿಯಿಂದ ಒಕ್ಕಲೆಬ್ಬಿಸುತ್ತಿರುವುದೇ ದೊಡ್ಡ ಸವಾಲಾಗಿದೆ. ಈ ಜನರು ವನ್ಯಸಂಪತ್ತು ರಕ್ಷಿಸುತ್ತಿದ್ದಾರೆ. ಸಂವಿಧಾನದಲ್ಲಿ ಅವರಿಗೆ ವಿಶೇಷವಾದ ಯೋಜನೆ ರೂಪಿಸಲು ಅವಕಾಶವಿದೆ. ಆದರೆ, ಕಾಡಿನ ಬದುಕಿಗೆ ಒಗ್ಗಿರುವವರನ್ನು ನಾಡಿನ ಬದುಕಿಗೆ ಒಗ್ಗಿಸುವುದೇ ದೊಡ್ಡ ಸವಾಲು. ಅವರನ್ನು ಕಾಡಿನಿಂದ ಹೊರಹಾಕಿದಾಗ ಅವರು, ಅನುಭವಿಸುವ ತೊಂದರೆಗಳು ಹಾಗೂ ಕಾಡಿನ ಮಕ್ಕಳಿಗೂ –ನಾಡಿನ ಮಕ್ಕಳಿಗೂ ಇರುವ ವ್ಯತ್ಯಾಸವನ್ನು ನೋಡಬೇಕಾಗಿದೆ’ ಎಂದರು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಎಚ್.ಎಸ್. ಗಿರಿಜಾಂಬ, ‘ಬುಡಕಟ್ಟು ಸಮುದಾಯಗಳು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿ ಹೊಂದುವ ನಿಟ್ಟಿನಲ್ಲಿ ವಿಸ್ತ್ರೃತವಾದ ಚರ್ಚೆಯಾಗಬೇಕು. ನೈಜ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಬೇಕು’ ಎಂದರು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಸಂಶೋಧನಾಧಿಕಾರಿ ಶಿವಕುಮಾರ್ ಸಿ. ಮಾತನಾಡಿದರು. ಸಂಶೋಧನಾಧಿಕಾರಿಗಳಾದ ಕೃಷ್ಣಮೂರ್ತಿ ಕೆ.ವಿ., ಮೋಹನ್ಕುಮಾರ್, ಕಲಾವತಿ, ಲೆಕ್ಕಾಧಿಕಾರಿ, ಬಿ.ಆರ್. ಭವ್ಯಾ, ಸೂಪರಿಂಟೆಂಡೆಂಟ್ ಎಂ.ವಿ. ನಾಗರತ್ನಾ, ರಮೇಶ್ ಕೆ., ರವಿಕುಮಾರ್, ಎಸ್.ಎಂ. ಮುತ್ತಯ್ಯ, ವೇಣುಕಾಂತ ಎಂ.ಸಿ., ಭರತ್ಕುಮಾರ್, ಮನೋಜ್ ಎಂ., ಮಮತಾ ಆರ್., ಪುಷ್ಪಲತಾ, ಮನೋಜ್ಕುಮಾರ್, ಸಿದ್ದರಾಜು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.