
ಅಂಗಡಿಯಲ್ಲಿ ಸಂಗ್ರಹಿಸಿ ಇಡಲಾದ ನೊಟ್ಟೆಗಳು
ರಾಯಚೂರು: ಜಿಲ್ಲೆಯಲ್ಲಿ ವಾರದಿಂದ ವಿಪರೀತ ಚಳಿ ಆವರಿಸಿದೆ. ಇದರಿಂದ ಮೊಟ್ಟೆ ದರ ಏರಿಕೆಯಾಗಿದ್ದು, ಗ್ರಾಹಕರಿಗೆ ಬಿಸಿ ಮುಟ್ಟಿಸಿದೆ. ಇಳುವರಿ ಪ್ರಮಾಣ ಸರಾಸರಿ ಇದ್ದರೂ ಮೊಟ್ಟೆಗೆ ಬೇಡಿಕೆ ಹೆಚ್ಚಿದ್ದು, ದರ ಹೆಚ್ಚಾಗಿದೆ.
ಬೇಸಿಗೆಯಲ್ಲಿ ₹4 ಇದ್ದ ಮೊಟ್ಟೆ ಬೆಲೆ ಈಗ ₹9ಕ್ಕೆ ಏರಿದೆ. ಗ್ರಾಹಕರು ದೇಹದ ಉಷ್ಣತೆ ಕಾಯ್ದುಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆ ಖರೀದಿಸುತ್ತಿರುವುದರಿಂದ ಸಹಜವಾಗಿಯೇ ಬೇಡಿಕೆ ಹೆಚ್ಚಿದೆ. ಅಂಗನವಾಡಿ ಕೇಂದ್ರಗಳು ಹಾಗೂ ಹೋಟೆಲ್ ಉದ್ಯಮ ಮೇಲೂ ಪರಿಣಾಮ ಬೀರುತ್ತಿದೆ. ಆಮ್ಲೆಟ್ ಅಂಗಡಿಗಳ ಮಾಲೀಕರಿಗೂ ದರ ಹೆಚ್ಚಳದ ಬಿಸಿ ತಟ್ಟಿದೆ.
ರಾಷ್ಟ್ರೀಯ ಮೊಟ್ಟೆ ಸಂಯೋಜನಾ ಸಮಿತಿ(ಎನ್ಇಸಿಸಿ) ಪ್ರಕಾರ ಸಗಟು ಮಾರುಕಟ್ಟೆಯಲ್ಲಿ ಬೆಂಗಳೂರಿನಲ್ಲಿ ಪ್ರಸ್ತುತ ಒಂದು ಮೊಟ್ಟೆಯ ದರ ₹6.85 ಹಾಗೂ 100 ಮೊಟ್ಟೆಗಳಿಗೆ ₹685 ಆಗಿದೆ. ಚಿಲ್ಲರೆ ಮೊಟ್ಟೆ ದರ ₹7.16 ಇದೆ. ಹೈದರಾಬಾದ್ನಲ್ಲಿ ಒಂದು ಮೊಟ್ಟೆಗೆ ₹ 6.56 ಹಾಗೂ ನೂರು ಮೊಟ್ಟೆಗೆ ₹ 656 ಇದೆ.
ಹೊಸಪೇಟೆಯಲ್ಲಿ ಒಂದು ಮೊಟ್ಟೆಗೆ ₹ 6.25 ಹಾಗೂ ನೂರು ಮೊಟ್ಟೆಗೆ ₹ 625 ಇದೆ. ಹೀಗಾಗಿ ರಾಯಚೂರು ಜಿಲ್ಲೆಗೆ ಬಹುತೇಕ ಹೊಸಪೇಟೆ ಹಾಗೂ ಕೊಪ್ಪಳದಿಂದಲೇ ಮೊಟ್ಟೆ ಪೂರೈಕೆಯಾಗುತ್ತಿವೆ.
ರಾಯಚೂರಿನ ಸಗಟು ಮೊಟ್ಟೆ ಮಾರುಕಟ್ಟೆಯಲ್ಲಿ ಪ್ರತಿ ಮೊಟ್ಟೆಗೆ ₹6.85, ಪ್ರತಿ ಟ್ರೇಗೆ ₹205.5 ಇದೆ. ಆದರೆ ಚಿಲ್ಲರೆ ಮಾರುಕಟ್ಟೆಯಲ್ಲಿ ಮಧ್ಯಮ ಗಾತ್ರದ ಮೊಟ್ಟೆ ದರ ₹8 ಇದ್ದರೆ, ದೊಡ್ಡ ಗಾತ್ರದ ಮೊಟ್ಟೆ ಬೆಲೆ ₹ 9 ಇದೆ. ಹೋಟೆಲ್ಗಳು ಮಧ್ಯಮ ಗಾತ್ರದ ಹಾಗೂ ಬೇಕರಿ ಉದ್ಯಮಿಗಳು ದೊಡ್ಡ ಗಾತ್ರದ ಮೊಟ್ಟೆ ಖರೀದಿಸುತ್ತಾರೆ. ಹೀಗಾಗಿ ದರಗಳಲ್ಲೂ ವ್ಯತ್ಯಾಸವಿದೆ.
‘ಚಳಿಗಾಲ ಆರಂಭ ಆಗುತ್ತಿದ್ದಂತೆಯೇ ಮೊಟ್ಟೆ ದರ ಏರಿಕೆಯಾಗಿದೆ. ಫೆಬ್ರುವರಿವರೆಗೂ ಮೊಟ್ಟೆಗೆ ಬೇಡಿಕೆ ಇರುತ್ತದೆ. ಬೆಲೆ ಹೆಚ್ಚಾದರೂ ಕೊಳ್ಳುವವರು ಕಡಿಮೆಯಾಗಿಲ್ಲ’ ಎಂದು ಮೊಟ್ಟೆ ವ್ಯಾಪಾರಿ ಅಬ್ದುಲ್ ರೌಫ್ ಹೇಳುತ್ತಾರೆ.
ಜಿಲ್ಲೆಯಲ್ಲಿ ಮೊಟ್ಟೆ ಇಡುವ ಕೋಳಿ ಸಾಕಾಣಿಕೆ ಕೇಂದ್ರಗಳು ಕೇವಲ ಮೂರು ಇವೆ. ಹೊಸಪೇಟೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆಗಳು ರಾಯಚೂರು ಜಿಲ್ಲೆಗೆ ಪೂರೈಕೆಯಾಗುತ್ತವೆ. ಸಾಗಣೆ ವೆಚ್ಚವೂ ಸೇರಿಕೊಳ್ಳುವ ಕಾರಣ ಬೆಲೆ ಹೆಚ್ಚಳವಾಗುತ್ತದೆ ಎನ್ನುತ್ತಾರೆ ಕೋಳಿ ಸಾಕಾಣಿಕೆ ಕೇಂದ್ರದ ಸಿಬ್ಬಂದಿ.
‘ರಾಯಚೂರು ಜಿಲ್ಲೆಯಲ್ಲಿ ಬಾಲ ವಿಕಾಸ ಸಮಿತಿ ಮೂಲಕ ಅಂಗನವಾಗಿ ಕೇಂದ್ರಗಳಿಗೆ ಮೊಟ್ಟೆ ವಿತರಿಸಲಾಗುತ್ತಿದೆ. ಮೊಟ್ಟೆ ದರದಲ್ಲಿ ಹೆಚ್ಚಳವಾದರೂ ಅಂಗನವಾಡಿ ಕಾರ್ಯಕರ್ತರು ಖರೀದಿಸಿ ಮಕ್ಕಳಿಗೆ ಕೊಡುತ್ತಿದ್ದಾರೆ. ಸರ್ಕಾರ ಮೊಟ್ಟೆ ಬೆಲೆಯಲ್ಲಿ ಆದ ವ್ಯತ್ಯಾಸ ಪರಿಗಣಿಸಿ ಬಾಕಿ ಮೊತ್ತ ಪಾವತಿಸಬೇಕು‘ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಪದ್ಮಾ ಮನವಿ ಮಾಡಿದ್ದಾರೆ.
ರಾಯಚೂರು ಜಿಲ್ಲೆಯಲ್ಲಿ ಮೂರೇ ಕೋಳಿ ಫಾರ್ಮಗಳಿವೆ. ರಾಯಚೂರು ತಾಲ್ಲೂಕಿನ ಬಿಜನಗೇರಾದಲ್ಲಿ ತಲಾ 80 ಸಾವಿರ, 40 ಸಾವಿರ ಹಾಗೂ 75 ಸಾವಿರ ಮೊಟ್ಟೆ ಇಡುವ ಕೋಳಿ ಫಾರ್ಮಗಳಿವೆ ಎಂದು ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಬಿ.ಎಸ್.ಪಾಟೀಲ ಹೇಳುತ್ತಾರೆ.
‘ರಾಯಚೂರು ಜಿಲ್ಲೆಗೆ ಹೊರ ಜಿಲ್ಲೆ ಹಾಗೂ ನೆರೆಯ ರಾಜ್ಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಮೊಟ್ಟೆಗಳು ಬರುತ್ತಿವೆ. ಸಾಗಣೆ ವೆಚ್ಚದಿಂದಾಗಿ ಮೊಟ್ಟೆಗಳ ಬೆಲೆ ಸಹಜವಾಗಿ ಹೆಚ್ಚಾಗಿರುತ್ತದೆ ಎನ್ನುತ್ತಾರೆ.
‘ಜಿಲ್ಲೆ ಮೊಟ್ಟೆ ವಿತರಕರ ಸಂಘಟನೆ ಇಲ್ಲ. ಹೀಗಾಗಿ ಜಿಲ್ಲೆಗೆ ಎಷ್ಟು ಮೊಟ್ಟೆಗಳು ವಿತರಣೆಯಾಗುತ್ತವೆ ಎನ್ನುವ ನಿಖರ ಮಾಹಿತಿ ಪಡೆಯುವುದು ಕಷ್ಟ ಸಾಧ್ಯ’ ಎಂದುಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.