ಚನ್ನಪಟ್ಟಣ (ರಾಮನಗರ): ‘ಚನ್ನಪಟ್ಟಣದಲ್ಲಿ ಜೆಡಿಎಸ್ಗೆ ಸೋಲಿನ ಭಯ ಕಾಡುತ್ತಿದೆ. ಅದಕ್ಕೆ ಅಪ್ಪ–ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಅಳುವುದೇ ಅವರ ಪರಂಪರೆ. ಅದಕ್ಕೆ ನೀನು ಅಳೋಕೆ ಶುರು ಮಾಡು ಎಂದು ನಿಖಿಲ್ಗೆ ಹೇಳಿ ಕೊಟ್ಟಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಂಗ್ಯವಾಡಿದರು.
ಉಪ ಚುನಾವಣೆ ಕಾಂಗ್ರೆಸ್ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಪರ ತಾಲ್ಲೂಕಿನ ಕೂಡ್ಲೂರು ಸೇರಿದಂತೆ ವಿವಿಧೆಡೆ ಬುಧವಾರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಅಳುವ ಗಂಡಸನ್ನು ನಂಬಬಾರದು ಅಂತ ಗಾದೆಯೇ ಇದೆ. ಅಳುವ ಗಂಡಸು ಕುಮಾರಸ್ವಾಮಿಯನ್ನು ಯಾವತ್ತೂ ನಂಬಬೇಡಿ’ ಎಂದರು’.
‘ದೇವೇಗೌಡರು ಕಟುಕರಿಗೆ ಕಣ್ಣೀರು ಬರಲ್ಲ ಅಂದಿದ್ದಾರೆ. ಹಾಸನದಲ್ಲಿ ಅವರ ಮೊಮ್ಮಗನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ಅಲ್ಲಿ ಹೋಗಿ ಅಳ್ರಿ ಗೌಡ್ರೆ. ಇಲ್ಲಿ ಅತ್ತರೆ ಏನು ಪ್ರಯೋಜನ?’ ಎಂದರು.
‘ಮಂಡ್ಯ ಮತ್ತು ರಾಮನಗರದಲ್ಲಿ ಸೋತಿದ್ದ ನಿಖಿಲ್ನನ್ನು ಇಲ್ಲಿಗೆ ಕರೆ ತಂದು ನಿಲ್ಲಿಸಿದ್ದಾರೆ. ಏನಾದರು ಮಾಡಿ ಮೊಮ್ಮಗನನ್ನು ಗೆಲ್ಲಿಸಲೇಬೇಕೆಂದು ಮಾಜಿ ಪ್ರಧಾನಿ ಇಲ್ಲೇ ಠಿಕಾಣಿ ಹೂಡಿದ್ದಾರೆ. ಅವರೇನೇ ಮಾಡಿದರೂ ಯೋಗೇಶ್ವರ್ ಗೆಲ್ಲುವುದು ಖಚಿತ’ ಎಂದು ಪಕ್ಕದಲ್ಲಿದ್ದ ಯೋಗೇಶ್ವರ್ ಬೆನ್ನು ತಟ್ಟಿ ವಿಶ್ವಾಸ ವ್ಯಕ್ತಪಡಿಸಿದರು.
‘ಯೋಗೇಶ್ವರ್ಗೆ ಜನರ ಕಷ್ಟ ಸುಖ ಗೊತ್ತು. ದೇವೇಗೌಡರ ಕುಟುಂಬಕ್ಕೆ ಭಾವನಾತ್ಮಕವಾಗಿ ಮಾತನಾಡಿ ಅಳೋದು ಮಾತ್ರ ಗೊತ್ತು. ಅತ್ತರೆ ಜನರ ಸಮಸ್ಯೆ ಬಗೆಹರಿಯುತ್ತಾ? ಕೆರೆಗಳು ತುಂಬಿ, ಜಮೀನಿಗೆ ನೀರು ಹರಿಯುತ್ತಾ? ಕ್ಷೇತ್ರದ ಅಭಿವೃದ್ಧಿಗೆ ಈಗಾಗಲೇ ₹500 ಕೋಟಿಗೂ ಹೆಚ್ಚು ಹಣ ಕೊಟ್ಟಿದ್ದೇನೆ. ಯೋಗೇಶ್ವರ್ ಗೆದ್ದ ಮೇಲೆ ಮತ್ತಷ್ಟು ಕೊಡುವೆ. ಇನ್ನೂ ಮೂರೂವರೆ ವರ್ಷ ನಮ್ಮ ಸರ್ಕಾರ ಇರುತ್ತದೆಯೇ ಹೊರತು, ಕುಮಾರಸ್ವಾಮಿ ಸರ್ಕಾರ ಬರಲ್ಲ’ ಎಂದು ಹೇಳಿದರು.
ಸಚಿವರಾದ ಎಚ್.ಸಿ.ಮಹದೇವಪ್ಪ, ಚಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಕೆ.ವೆಂಕಟೇಶ್, ಡಾ.ಎಂ.ಸಿ.ಸುಧಾಕರ್, ಶಾಸಕರಾದ ಎಚ್.ಸಿ.ಬಾಲಕೃಷ್ಣ, ಕೆ.ಎಂ.ಉದಯ್, ಡಾ.ಎಚ್.ಡಿ.ರಂಗನಾಥ್, ವಿಧಾನ ಪರಿಷತ್ ಸದಸ್ಯ ಎಸ್.ರವಿ, ಮಾಜಿ ಸಂಸದ ಡಿ.ಕೆ.ಸುರೇಶ್, ಶಿವರಾಮೇಗೌಡ, ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಸೇರಿದಂತೆ ಹಲವರು ಮುಖ್ಯಮಂತ್ರಿ ಪ್ರಚಾರಕ್ಕೆ ಸಾಥ್ ನೀಡಿದರು.
ಸಿ.ಡಿ ಸಹೋದರರಿಗೆ ಸಿ.ಡಿ ವಿಡಿಯೊ ಆಡಿಯೊ ಮಾಡುವುದೇ ಕೆಲಸ. ಹಾಸನದಲ್ಲಿ ಮಾಡಿದ ಷಡ್ಯಂತ್ರವನ್ನು ಇಲ್ಲೂ ಮಾಡುತ್ತಿದ್ದಾರೆ. ಯೋಗೇಶ್ವರ್ ಸಂಸ್ಕೃತಿ ಗೊತ್ತಿದೆ. ಇವರೆಲ್ಲ ಸಿ.ಡಿ ಪ್ಲೇಯರ್ಸ್ ಸಂತತಿಯವರುಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸಚಿವ
ರಾಜ್ಯದ ಕಾಂಗ್ರೆಸ್ ಸರ್ಕಾರ ನಿರಂತರವಾಗಿ ಭ್ರಷ್ಟಾಚಾರದಲ್ಲಿ ಮುಳುಗಿದ್ದು ಜನರ ಹಿತವನ್ನು ಮರೆತಿದೆ. ಉಪ ಚುನಾವಣೆಯಲ್ಲಿ ನಿಖಿಲ್ ಅವರನ್ನು ಗೆಲ್ಲಿಸಿ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಶಾಸ್ತಿ ಮಾಡಬೇಕುಬಿ.ಎಸ್.ಯಡಿಯೂರಪ್ಪ ಮಾಜಿ ಮುಖ್ಯಮಂತ್ರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.