ಹಾರೋಹಳ್ಳಿ: ಉರುಗನದೊಡ್ಡಿ ಗ್ರಾಮಸ್ಥರ ಮನೆಗಳಿಗೆ ಹಕ್ಕು ಪತ್ರವಿಲ್ಲ. ತಮಿಳುನಾಡು ಮೂಲದ ವ್ಯಕ್ತಿಯೊಬ್ಬ ಜಾಗವನ್ನು ತಮ್ಮದು ಎಂದು ತೊಂದರೆ ನೀಡುತ್ತಿದ್ದಾನೆ ಎಂದು ಗ್ರಾಮಸ್ಥರು ಶಾಸಕ ಇಕ್ಬಾಲ್ ಹುಸೇನ್ ಬಳಿ ಅವಲತ್ತುಕೊಂಡರು.
ಗ್ರಾಮದಲ್ಲಿ 50 ಕುಟುಂಬಗಳು ವಾಸಿಸುತ್ತಿವೆ. ಯಾರಿಗೂ ಹಕ್ಕುಪತ್ರ ನೀಡಿಲ್ಲ. ಖಾಸಗಿ ವ್ಯಕ್ತಿಯೊಬ್ಬ ಗ್ರಾಮಸ್ಥರಿಗೆ ಇನ್ನಿಲ್ಲದ ತೊಂದರೆ ನೀಡುತ್ತಿದ್ದಾನೆ. ಶಾಸಕರು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಅವಲತ್ತುಕೊಂಡರು.
ಗ್ರಾಮದಲ್ಲಿ ತಂಗುದಾಣ ನಿರ್ಮಿಸುವ ಕೆಲಸ ಮಾಡಬೇಕು. ಸರ್ಕಾರ ಅನ್ನ ಭಾಗ್ಯದಡಿ ಅಕ್ಕಿ ವಿತರಿಸುತ್ತಿದೆ. ಅಕ್ಕಿ ಪಡೆಯಲು 6 ಕಿ.ಮೀ ಸಾಗಬೇಕು. ಮತ ಹಾಕಲೂ ತಟ್ಟೆಕೆರೆಗೆ ಹೋಗಬೇಕು. ಗಡಿ ಗ್ರಾಮವಾದ್ದರಿಂದ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಲಾಗಿದೆ. ಗ್ರಾಮದಲ್ಲಿ ಸ್ಮಶಾನ ವ್ಯವಸ್ಥೆಯೂ ಇಲ್ಲ ಎಂದು ಗ್ರಾಮಸ್ಥರು ಕಷ್ಟ ಹೇಳಿಕೊಂಡರು.
ಇದೇ ವೇಳೆ ಶಾಸಕ ಇಕ್ಬಾಲ್ ಹುಸೇನ್ ಮಾತನಾಡಿ, ಈಗಾಗಲೇ ಅಧಿಕಾರಿಗಳಿಗೆ ಸ್ಮಶಾನಕ್ಕೆ ಜಾಗ ಗುರುತಿಸುವಂತೆ ನಿರ್ದೇಶನ ನೀಡಲಾಗಿದೆ. ಗ್ರಾಮಸ್ಥರು ಯಾರೂ ಸಹ ಮನೆ ಖಾಲಿ ಮಾಡಬೇಕಾದ ಅವಶ್ಯವಿಲ್ಲ. ಹಕ್ಕುಪತ್ರ ವಿಚಾರದಲ್ಲೂ ಹೆದರುವ ಅವಶ್ಯವಿಲ್ಲ ಎಂದರು.
ಗ್ರಾಮಸ್ಥರಾದ ಲಕ್ಕಪ್ಪ, ತಾ.ಪಂ ಮಾಜಿ ಸದಸ್ಯ ಶಿವನಯ್ಯ, ಪಿಡಿಒ ರಘು ಸೇರಿದಂತೆ ಗ್ರಾಮಸ್ಥರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.