ಹೊಸಪೇಟೆ: ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ನೆನಪಿಸುವ ಹಂಪಿ ಉತ್ಸವಕ್ಕೆ ಬಯಲು ವಸ್ತುಸಂಗ್ರಹಾಲಯ ಎಂದೇ ಖ್ಯಾತವಾಗಿರುವ ಹಂಪಿ ಸಜ್ಜಾಗಿದ್ದು, ಬಿಸಿಲಿನ ಝಳ ಹೆಚ್ಚುತ್ತಿದ್ದರೂ, ಸಂಜೆ ತಂಗಾಳಿ ಬೀಸುತ್ತಿದೆ, ಅದೇ ಹೊತ್ತಲ್ಲಿ ಹಲವು ಸಿನಿ ತಾರೆಯರು, ಗಾಯಕರು ಪ್ರೇಕ್ಷಕರನ್ನು ಮುದಗೊಳಿಸಲಿದ್ದಾರೆ.
ಫೆ.28, ಮಾರ್ಚ್ 1 ಮತ್ತು 2ರಂದು ಹಂಪಿ ಉತ್ಸವ ನಡೆಯಲಿದ್ದು, ಗಾಯತ್ರಿ ಪೀಠದ ಸಮೀಪ ಎಂ.ಪಿ.ಪ್ರಕಾಶ್ ಹೆಸರಿನ ಪ್ರಧಾನ ವೇದಿಕೆಯ ನಿರ್ಮಾಣ ಕಾರ್ಯ ಕೊನೆಯ ಹಂತಕ್ಕೆ ಬಂದಿದೆ. ಅದು ಹಂಪಿಯ ಹಲವು ಸ್ಮಾರಕಗಳ ಗುಚ್ಛವನ್ನು ಒಳಗೊಂಡು ರಚನೆಯಾದಂತಹ ವೇದಿಕೆಯಾಗಿದ್ದು, ಕಣ್ಮನ ಸೆಳೆಯುತ್ತಿದೆ.
28ರಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹಿತ ಹಲವು ಸಚಿವರು ಪಾಲ್ಗೊಳ್ಳಲಿದ್ದಾರೆ. ನಟ ರಮೇಶ್ ಅರವಿಂದ್, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ಕುಮಾರ್, ನಿರ್ದೇಶಕ ತರುಣ್ ಸುಧೀರ್, ಸಿನಿತಾರೆಯರಾದ ಪ್ರೇಮ, ವೈಷ್ಣವಿ ಗೌಡ, ಬೇಬಿಸಿಹಿ, ಸೋನಲ್ ಮೊಂಥೆರೊ, ಗಾಯಕರಾದ ರಾಜೇಶ್ ಕೃಷ್ಣನ್, ಹನುಮಂತ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
ಮಾರ್ಚ್ 1ರಂದು ನಟರಾದ ಉಪೇಂದ್ರ, ಪ್ರಿಯಾಂಕಾ ಉಪೇಂದ್ರ, ವಸಿಷ್ಠ ಸಿಂಹ, ರ್ಯಾಪರ್ ಬಿಚ್ಚು, ಶರಣ್ಯ ಶೆಟ್ಟಿ, ಮೋಕ್ಷ ಕುನಾಲ್, ವಿದ್ಯಾ ಆಲೂರ್, ರಜನಿ ಬೀಟ್ಗುರು, ಅನುಶ್ರೀ ರಂಜಿಸಲಿದ್ದಾರೆ. ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಪ್ರಮುಖ ಆಕರ್ಷಣೆಯಾಗಿರಲಿದ್ದು, ಗಾಯಕ ಬಾಳು ಬೆಳಗುಂದಿ ಸುಮಧುರ ಕಂಠಸಿರಿ ತೋರಿಸಲಿದ್ದಾರೆ.
ಮಾರ್ಚ್ 2ರಂದು ನಟ ವಿಜಯ್ ರಾಘವೇಂದ್ರ, ತಾರೆಯರಾದ ರಮ್ಯಾ, ದಿಗಂತ್, ಐಂದ್ರಿತಾ ರೈ, ಅನು ಪ್ರಭಾಕರ್, ರಾಗಿಣಿ ದ್ವಿವೇದಿ, ಶೃತಿ ಹರಿಹರನ್, ಭಾವನಾ ರಾವ್ ಮೋಡಿ ಮಾಡಲಿದ್ದಾರೆ. ಗಾಯಕ ಗುರುಕಿರಣ್ ಸಂಗೀತ ರಸಮಂಜರಿ ನಡೆಸಿಕೊಡಲಿದ್ದಾರೆ. ಮಾಳು ನಿಪನಾಳ ಅವರಿಂದ ಗೀತ ಗಾಯನವೂ ಇರಲಿದೆ. ಗಿಚ್ಚಿ ಗಿಲಿಗಿಲಿ ತಂಡದಿಂದ ಹಾಸ್ಯಸಂಜೆ, ಮಾರ್ಚ್ 1ರಂದು ಕಾಮಿಡಿ ಕಿಲಾಡಿ ತಂಡದಿಂದ ಹಾಸ್ಯಸಂಜೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ತಿಳಿಸಿದ್ದಾರೆ.
ತುಂಗಾರತಿ: ಫೆ.26ರಂದು ಸಂಜೆ ತುಂಗಾರತಿ, 27ರಂದು ಕಮಲಾಪುರ ಕೆರೆಯಲ್ಲಿ ಬೆಳಿಗ್ಗೆ ದೋಣಿ ವಿಹಾರ, ಸಂಜೆ ಹೊಸಪೇಟೆಯಲ್ಲಿ ವಸಂತ ವೈಭವ ಮೆರವಣಿಗೆ ಹಾಗೂ ಫೆ.28ರಿಂದ ಹೆಲಿಕಾಪ್ಟರ್ ಮೂಲಕ ಹಂಪಿಯ ದರ್ಶನ ಮಾಡಿಸುವ ‘ಹಂಪಿ ಬೈ ಸ್ಕೈ’, ವಿಜಯನಗರ ವೈಭವ ಬಿಂಬಿಸುವ ಧ್ವನಿ ಬೆಳಕು ಆರಂಭವಾಗಲಿದೆ. ಮಾರ್ಚ್ 1ರಂದು ವಿಜಯ ವಿಠ್ಠಲ ದೇವಸ್ಥಾನದ ಆವರಣದಲ್ಲಿ ಯೋಗ ಶಿಬಿರ ನಡೆಯಲಿದ್ದು, ಇದು ಈ ವರ್ಷದ ಹೊಸ ಸೇರ್ಪಡೆ. ಉಳಿದಂತೆ ಆಹಾರ ಮೇಳ, ಗ್ರಾಮೀಣ ಕ್ರೀಡೆಗಳು, ಕುರಿ, ಶ್ವಾನ ಪ್ರದರ್ಶನ ನಡೆಯಲಿದ್ದು, ಮಾರ್ಚ್ 2ರಂದು ಮಧ್ಯಾಹ್ನ 3ರಿಂದ ಉದ್ಧಾನ ವೀರಭಧ್ರೇಶ್ವರ ದೇವಸ್ಥಾನದಿಂದ ಜಾನಪದ ವಾಹಿನಿ ನಡೆಯಲಿದೆ ಎಂದು ಹೇಳಿದ್ದಾರೆ.
ಗಾಯತ್ರಿ ಪೀಠ ಸಮೀಪದ ಎಂ.ಪಿ.ಪ್ರಕಾಶ್ ವೇದಿಕೆ ಪ್ರಧಾನ ವೇದಿಕೆಯಾಗಿರಲಿದ್ದು, ಎದುರು ಬಸವಣ್ಣ, ಸಾಸಿವೆ ಕಾಳು ಗಣಪ, ವಿರೂಪಾಕ್ಷ ದೇವಸ್ಥಾನ ಹಾಗೂ ಮಹಾನವಮಿ ದಿಬ್ಬದಲ್ಲಿ ಇತರ ವೇದಿಕೆಗಳು ಇರಲಿವೆ. ಧ್ವನಿ ಬೆಳಕು ಕಾರ್ಯಕ್ರಮ ಆನೆಲಾಯ ಪ್ರದೇಶದಲ್ಲಿ ನಡೆಯಲಿದೆ.
ಇತಿಹಾಸದ ಮೇಲೆ ಬೆಳಕು: ವಿರೂಪಾಕ್ಷ ದೇವಸ್ಥಾನದ ಆವರಣದಲ್ಲಿ ವಿಜಯನಗರ ಸಾಮ್ರಾಜ್ಯದ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಕಾರ್ಯಕ್ರಮಗಳು ನಡೆಯಲಿವೆ. ಫೆ.28ರಂದು ಬೆಳಿಗ್ಗೆ 10ಕ್ಕೆ ಇದೇ ವೇದಿಕೆಯಲ್ಲಿ ಮಹಿಳಾ ಕವಿಗೋಷ್ಠಿ, ಮಾರ್ಚ್ 1ರಂದು ಬಹುಭಾಷಾ ಕವಿಗೋಷ್ಠಿ ಹಾಗೂ 2ರಂದು ಹಂಪಿ ಇತಿಹಾಸ ಕುರಿತು ವಿಚಾರ ಸಂಕಿರಣ ನಡೆಯಲಿದೆ.
ಬೋಟಿಂಗ್: ಕಳೆದ ವರ್ಷ ಮಳೆ ಕಡಿಮೆ ಇದ್ದ ಕಾರಣ ಕಮಲಾಪುರ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇತ್ತು. ಹೀಗಾಗಿ ದೋಣಿ ವಿಹಾರ ಇರಲಿಲ್ಲ. ಈ ಬಾರಿ ಈ ಆಕರ್ಷಣೆ ಇರಲಿದ್ದು, ಫೆ.27ರಿಂದಲೇ ಇದು ಆರಂಭವಾಗಲಿದೆ. ‘ಹಂಪಿ ಬೈ ಸ್ಕೈ’ ಹೆಲಿಕಾಪ್ಟರ್ ಹಾರಾಟ ಫೆ.28ರಂದು ನಡೆಯಲಿದ್ದು, 7 ನಿಮಿಷದ ಸವಾರಿಗೆ ಒಬ್ಬರಿಗೆ ₹4 ಸಾವಿರ ನಿಗದಿಪಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.