ADVERTISEMENT

ಕನ್ನಡ ವಿ.ವಿ.ಯಿಂದ ಆದಾಯ, ಉದ್ಯೋಗ ಸೃಷ್ಟಿ: ಪ್ರೊ.ಸ.ಚಿ. ರಮೇಶ

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2022, 13:23 IST
Last Updated 23 ಸೆಪ್ಟೆಂಬರ್ 2022, 13:23 IST
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಸ.ಚಿ. ರಮೇಶ ಮಾತನಾಡಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಸ.ಚಿ. ರಮೇಶ ಮಾತನಾಡಿದರು   

ಹೊಸಪೇಟೆ (ವಿಜಯನಗರ): ‘ಹಂಪಿ ಕನ್ನಡ ವಿಶ್ವವಿದ್ಯಾಲಯದ ವ್ಯಾಪ್ತಿ ವಿಸ್ತಾರವಾಗಿರುವುದರಿಂದ ಮುಂದಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಪ್ರಕೃತಿ ಚಿಕಿತ್ಸಾ ಕೇಂದ್ರ ಮತ್ತು ಪತ್ರಿಕೋದ್ಯಮ ವಿಭಾಗದ ಸಮುದಾಯ ಬಾನುಲಿ ಕೇಂದ್ರ ವಿಶ್ವವಿದ್ಯಾಲಯದ ಪ್ರಮುಖ ಆದಾಯ ಮೂಲಗಳಾಗಲಿವೆ. ಇದರೊಂದಿಗೆ ಮತ್ತಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ’ ಎಂದು ಕುಲಪತಿ ಪ್ರೊ.ಸ.ಚಿ. ರಮೇಶ ತಿಳಿಸಿದರು.

ಇಲ್ಲಿನ ಕನ್ನಡ ವಿಶ್ವವಿದ್ಯಾಲಯದ ಯೋಗ ಅಧ್ಯಯನ ವಿಭಾಗದಿಂದ ನುಡಿ ಕಟ್ಟಡದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ದ್ವಿತೀಯ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮಗಾಗಿ ಯಾರು ಅವಕಾಶಗಳನ್ನು ಸೃಷ್ಟಿಸುವುದಿಲ್ಲ. ನಾವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದು ತಿಳಿಸಿದರು.

ದೈಹಿಕ ಮತ್ತು ಮಾನಸಿಕ ಆರೋಗ್ಯ ಸುಧಾರಣೆಯಲ್ಲಿ ಯೋಗದ ಪಾತ್ರ ಮಹತ್ವದ್ದು. ಯೋಗದಲ್ಲಿ ಹಲವಾರು ಉದ್ಯೋಗ ಅವಕಾಶಗಳಿವೆ ಎಂದು ತಿಳಿಸಿದರು.

ADVERTISEMENT

ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ಮಾತನಾಡಿ, ಬದುಕಿನ ಭಾಗವಾಗಿದ್ದ ಯೋಗವು, ಇಂದು ಬದುಕನ್ನು ರೂಪಿಸುವ ಅಧ್ಯಯನ ಶಿಸ್ತಾಗಿ ಬೆಳೆದಿದೆ. ಇಂದಿನ ಒತ್ತಡದ ಬದುಕಿನಲ್ಲಿ ಯೋಗಕ್ಕೆ ಬಹಳ ಮಹತ್ವ ಇದೆ ಎಂದರು.

ವಿಜ್ಞಾನಗಳ ನಿಕಾಯದ ಡೀನ್‌ ಮಾಧವ ಪೆರಾಜೆ, ಕರ್ಮದಲ್ಲಿ ತೊಡಗುವ ತಲ್ಲೀನವೇ ಯೋಗ. ದೇಹ ಮತ್ತು ಮನಸ್ಸಿಗೂ ಪರಸ್ಪರ ಸಂಬಂಧವಿದೆ. ಪ್ರಾಚೀನ ವಿಜ್ಞಾನದಲ್ಲಿ ಯೋಗಿಕ ವಿಜ್ಞಾನಕ್ಕೆ ತುಂಬಾ ಮಹತ್ವ ನೀಡಲಾಗಿತ್ತು. ದೇಹ ಮತ್ತು ಮನಸ್ಸು ಬೇರೆಯಲ್ಲ, ಎರಡೂ ಒಂದೇ ಎಂದು ಹೇಳಿದರು.

ಅಧ್ಯಯನಾಂಗದ ನಿರ್ದೇಶಕ ಪಿ.ಮಹಾದೇವಯ್ಯ, ಯೋಗ ಅಧ್ಯಯನ ವಿಭಾಗದ ನಿರ್ದೇಶಕ ಎಫ್.ಟಿ.ಹಳ್ಳಿಕೇರಿ, ಅಧ್ಯಾಪಕರಾದ ಸಿದ್ದರಾಮೇಶ್ವರ, ಸಂಜುಕೋಟಿ, ರಾಜೇಶ್ವರಿ, ಎನ್. ವಸಂತ, ಜಗದೀಶ ತಳವಾರ್, ಎನ್. ಸುಮಲತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.