ವಿಜಯನಗರ ಜಿಲ್ಲೆಯಲ್ಲಿ ಮಳೆ
ಹೊಸಪೇಟೆ (ವಿಜಯನಗರ): ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ಬಿರುಸಿನ ಮಳೆ ಸುರಿದಿದ್ದು, ತಾಲ್ಲೂಕಿನ ಬೈಲವದ್ದಿಗೇರಿಯಲ್ಲಿ ಮಳೆ ನೀರಲ್ಲಿ ಕೊಚ್ಚಿ ಹೋಗುತ್ತಿದ್ದ ವಿದ್ಯುತ್ ಕಾಮಗಾರಿ ಕಾರ್ಮಿಕರನ್ನು ಸ್ಥಳೀಯರು ಅಪಾಯದಿಂದ ಪಾರು ಮಾಡಿದರು.
ಬೈಲುವದ್ದಿಗೇರಿ ಗ್ರಾಮದ ಬಳಿಯ ರೈಲ್ವೆ ನಿಲ್ದಾಣದ ಬಳಿ ವಿದ್ಯುತ್ ಕಾಮಗಾರಿಗಾಗಿ ಬಂದಿದ್ದ ನೌಕರರು ಮಹೇಂದ್ರ ಗೂಡ್ಸ್ ವಾಹನದಲ್ಲಿ ಇದ್ದಾಗ ರಭಸವಾಗಿ ಮಳೆ ನೀರು ಹರಿದುಬಂತು. ಅಪಾಯದಲ್ಲಿ ಸಿಲುಕಿದ್ದ ಅವರನ್ನು ಸ್ಥಳೀಯರು ಹಗ್ಗದ ಸಹಾಯದಿಂದ ರಕ್ಷಿಸಿದರು.
ಈ ಭಾಗದಲ್ಲಿ ಹಲವು ಹೊಲ ಗದ್ದೆಗಳಲ್ಲಿ ನೀರು ತುಂಬಿದೆ. ಹಳ್ಳ, ಕೊಳ್ಳಗಳು ತುಂಬಿ ಹರಿಯುತ್ತಿವೆ.
ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ಪ್ರಯುಕ್ತ ನಗರದಲ್ಲಿ ಸಮರ್ಪಣಾ ಸಂಕಲ್ಪ ಸಮಾವೇಶವೂ ಮಂಗಳವಾರ ನಡೆದಿತ್ತು. ಸಮಾವೇಶ ಕೊನೆಗೊಂಡ ಅರ್ಧ ಗಂಟೆಯಲ್ಲೇ ಬಿರುಸಿನ ಮಳೆ ಆರಂಭವಾಗಿ ರಾತ್ರಿಯವರೆಗೂ ಸಣ್ಣದಾಗಿ ಸುರಿಯುತ್ತಲೇ ಇತ್ತು. ಹೀಗಾಗಿ ನಗರದ ನಾಲ್ಕೂ ದಿಕ್ಕಿನಲ್ಲಿ ರಾತ್ರಿಯವರೆಗೂ ಸಂಚಾರ ದಟ್ಟಣೆ ಉಂಟಾಗಿತ್ತು.
ಈ ಮಧ್ಯೆ, ಇನ್ನೂ ಒಂದು ವಾರ ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಳೆ ಬರಬಹುದು ಎಂದು ಹೇಳಿರುವ ಹವಾಮಾನ ಇಲಾಖೆ, ಆರೆಂಜ್ ಅಲರ್ಟ್ ಘೋಷಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.