ಹಾವೇರಿ ತಾಲ್ಲೂಕಿನ ಗಣಜೂರು–ಕೋಳೂರು ಕೈಗಾರಿಕಾ ಪ್ರದೇಶದ ಕಾಮಗಾರಿ
ಹಾವೇರಿ: 108 ಕಿ.ಮೀ. ಉದ್ದದ ರಾಷ್ಟ್ರೀಯ ಹೆದ್ದಾರಿ. 80 ಕಿ.ಮೀ. ಉದ್ದದ ರೈಲು ಮಾರ್ಗ. ವರದಾ– ತುಂಗಭದ್ರಾ ನದಿಗಳ ಭರಪೂರ ನೀರು. ಪ್ರತಿ ಹಳ್ಳಿಗೂ ವಿಸ್ತರಿಸಿರುವ ಹೆಸ್ಕಾಂ ವಿದ್ಯುತ್ ಜಾಲ. ವೃತ್ತಿಪರ ಕೋರ್ಸ್ಗಳಿಗೂ ತಲೆಎತ್ತಿದ್ದ ಶಿಕ್ಷಣ ಸಂಸ್ಥೆಗಳು. ಅಕ್ಕ–ಪಕ್ಕದಲ್ಲಿ ದಾವಣಗೆರೆ ಹಾಗೂ ಹುಬ್ಬಳ್ಳಿ–ಧಾರವಾಡ ಮಹಾನಗರಗಳು. ಇಷ್ಟೆಲ್ಲ ಸೌಲಭ್ಯವಿದ್ದರೂ ಹಾವೇರಿ ಜಿಲ್ಲೆಯಲ್ಲಿ ಕೈಗಾರಿಕೋದ್ಯಮ ಮರಿಚಿಕೆಯಾಗಿದೆ. ವಿದ್ಯೆಗೆ ತಕ್ಕಂತೆ ಕೆಲಸ ಸಿಗದಿದ್ದರಿಂದ, ಜಿಲ್ಲೆಯ ವಿದ್ಯಾವಂತರು ದೂರದ ನಗರಗಳಿಗೆ ವಲಸೆ ಹೋಗುವ ಸ್ಥಿತಿ ಮುಂದುವರಿದಿದೆ.
ಉತ್ತರ ಕರ್ನಾಟಕದ ಹೆಬ್ಬಾಗಿಲು ಎನಿಸಿಕೊಂಡಿರುವ ಹಾವೇರಿ ಜಿಲ್ಲೆ, ಕೈಗಾರಿಕಾ ವಲಯ ಹಾಗೂ ಇತರೆ ಉದ್ಯಮಗಳಿಂದ ವಂಚಿತವಾಗಿದೆ. ಗಾರ್ಮೆಂಟ್ಸ್ ಕಾರ್ಖಾನೆಗಳು, ಮೆಣಸಿನಕಾಯಿ ಉತ್ಪನ್ನ ತಯಾರಿಕಾ ಘಟಕ ಹಾಗೂ ಬ್ರಿಕ್ಸ್ ತಯಾರಿಕಾ ಘಟಕಗಳಿಗೆ ಮಾತ್ರ ಜಿಲ್ಲೆ ಸೀಮಿತವಾಗಿದೆ. ಕಾರ್ಮಿಕರಾಗಿ ಕೆಲಸ ಮಾಡುವ ಕೆಲ ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿದ್ದು, ಬಹುತೇಕ ಯುವಕರು ಕೆಲಸಕ್ಕಾಗಿ ಊರು ತೊರೆಯುತ್ತಿದ್ದಾರೆ. ದೊಡ್ಡ ಕಾಲೇಜು ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡಿದ ವಿದ್ಯಾರ್ಥಿಗಳು ಸಹ ಊರು ತೊರೆದರಷ್ಟೇ ‘ವೃತ್ತಿ’ ಬದುಕು ಕಟ್ಟಿಕೊಳ್ಳಬಹುದೆಂಬ ಮನಸ್ಥಿತಿಗೆ ಬಂದಿದ್ದಾರೆ. ಇದರಿಂದಾಗಿ, ಜಿಲ್ಲೆಯು ಉದ್ಯಮ ಕ್ಷೇತ್ರದಲ್ಲಿ ತೀರಾ ಹಿಂದುಳಿದಿದೆ.
ರೈತಾಪಿ ನಾಡಾಗಿರುವ ಹಾವೇರಿ ಜಿಲ್ಲೆಯ ಬಹುತೇಕರು ಕೃಷಿ ನಂಬಿ ಜೀವನ ನಡೆಸುತ್ತಿದ್ದಾರೆ. ಮುಂಗಾರಿನ ಕಣ್ಣಾಮುಚ್ಚಾಲೆ ಹಾಗೂ ಕೃಷಿ ಉತ್ಪನ್ನಗಳಿಗೆ ಬೆಲೆ ಇರದಿರುವುದರಿಂದ, ಕೃಷಿ ಕ್ಷೇತ್ರದಿಂದಲೂ ಜನರು ವಿಮುಖರಾಗುತ್ತಿದ್ದಾರೆ. ಕೃಷಿ ಬಿಟ್ಟು ಪರ್ಯಾಯ ಕೆಲಸ ಇಲ್ಲದ ಕಾರಣಕ್ಕೆ, ಕೃಷಿ ಕುಟುಂಬದ ಯುವಕರೂ ಊರು ತೊರೆದು ಪಟ್ಟಣ ಸೇರುತ್ತಿದ್ದಾರೆ. ಕೃಷಿಯ ಜೊತೆಯಲ್ಲಿಯೇ ಪರ್ಯಾಯವಾಗಿ ಉದ್ಯಮಗಳು ಸ್ಥಾಪನೆಯಾದರೆ ಮಾತ್ರ ಜಿಲ್ಲೆಯ ಜನರಿಗೆ ಉದ್ಯೋಗ ಸಿಗುತ್ತದೆ. ಬೇರೆ ಊರಿಗೆ ವಲಸೆ ಹೋಗುವುದೂ ತಪ್ಪುತ್ತದೆ ಎಂಬುದು ಜನರ ಅಭಿಪ್ರಾಯವಾಗಿದೆ.
ಅಖಂಡ ಧಾರವಾಡ ಜಿಲ್ಲೆಯಿಂದ ವಿಭಜನೆಗೊಂಡು ಹೊಸ ಜಿಲ್ಲೆಯಾಗಿ 28 ವರ್ಷವಾದರೂ ಹಾವೇರಿ ಜಿಲ್ಲೆಯಲ್ಲಿ, ಉದ್ಯೋಗ ಸೃಷ್ಟಿಸುವ ಉದ್ಯಮಗಳ ಸ್ಥಾಪನೆ ಆಗಿಲ್ಲವೆಂಬುದು ಜನರ ನೋವಿನ ಸಂಗತಿ. ಚುನಾವಣೆ ಬಂದಾಗ ಉದ್ಯಮ ಸ್ಥಾಪನೆ ಭರವಸೆ ನೀಡಿ ಅಧಿಕಾರ ಹಿಡಿಯುವ ಜನಪ್ರತಿನಿಧಿಗಳು, ಅಧಿಕಾರ ಸಿಕ್ಕ ಬಳಿಕ ರಾಜಕೀಯ ಲಾಭದ ಲೆಕ್ಕಾಚಾರದಲ್ಲಿಯೇ ಅವಧಿ ಮುಗಿಸುತ್ತಿದ್ದಾರೆ. ಯುವಕರಿಗೆ ಹಾಗೂ ವಿದ್ಯಾವಂತರಿಗೆ ಸ್ಥಳೀಯವಾಗಿ ಉದ್ಯೋಗ ಕಲ್ಪಿಸಲು ನೀಡಿದ ಮಾತನ್ನು ಮರೆಯುತ್ತಿದ್ದಾರೆ.
‘ಜಿಲ್ಲೆಯಲ್ಲಿ ಉದ್ಯಮ ಸ್ಥಾಪನೆಯಾದರೆ ಏನು ಲಾಭ?’ ಎಂಬ ಬಗ್ಗೆ ಹಾವೇರಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಪದಾಧಿಕಾರಿಗಳು, ಹೊಸ ಜಿಲ್ಲೆಯಾದ ದಿನದಿಂದಲೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ತಿಳಿಸಿದ್ದಾರೆ. ಆದರೆ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮಾತ್ರ ಉದ್ಯಮ ಸ್ಥಾಪನೆಗೆ ಲಕ್ಷ್ಯ ನೀಡುತ್ತಿಲ್ಲ. ಇವರೆಲ್ಲರ ನಿರ್ಲಕ್ಷ್ಯದಿಂದಲೇ ಹಾವೇರಿ ಜಿಲ್ಲೆ ಉದ್ಯಮ ಕ್ಷೇತ್ರಕ್ಕೆ ದೊಡ್ಡ ನಷ್ಟವಾಗುತ್ತಿದೆ.
ಹಾವೇರಿ ಜಿಲ್ಲೆಯಲ್ಲಿ ಸರ್ಕಾರಿ ಎಂಜಿನಿಯರ್ ಕಾಲೇಜು, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಐಟಿಐ, ಡಿಪ್ಲೊಮಾ, ಪದವಿ ಕಾಲೇಜು, ಹಾವೇರಿ ವಿಶ್ವವಿದ್ಯಾಲಯ, ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಹಿಮ್ಸ್) ಹೀಗೆ ನಾನಾ ಶಿಕ್ಷಣ ಸಂಸ್ಥೆಗಳಿವೆ. ಇದರ ಜೊತೆಯಲ್ಲಿ, ಖಾಸಗಿ ಶಿಕ್ಷಣ ಸಂಸ್ಥೆಗಳೂ ನಾನಾ ಕೋರ್ಸ್ಗಳನ್ನು ನಡೆಸುತ್ತಿವೆ. ಪ್ರತಿ ವರ್ಷ 10 ಸಾವಿರ ವಿದ್ಯಾರ್ಥಿಗಳು, ಶಿಕ್ಷಣ ಮುಗಿಸಿ ಹೊರ ಬರುತ್ತಿದ್ದಾರೆ. ಇವರಲ್ಲಿ ಕೆಲವರು ಮಾತ್ರ ಸ್ಥಳೀಯ ಸಣ್ಣ–ಪುಟ್ಟ ಕಂಪನಿ ಹಾಗೂ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬಹುತೇಕರು, ಹಾವೇರಿ ತೊರೆದು ಬೆಂಗಳೂರು, ಹೈದರಾಬಾದ್, ಪುಣೆ, ಮುಂಬೈ, ದೆಹಲಿ ಸೇರಿದಂತೆ ಹಲವು ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ವಿದ್ಯಾವಂತರು ಊರು ತೊರೆಯುತ್ತಿರುವುದರಿಂದ, ಅವರನ್ನು ಓದಿಸಿದ್ದ ಪೋಷಕರು ಒಂಟಿಯಾಗಿ ಜೀವನ ನಡೆಸುವ ಸ್ಥಿತಿಯಿದೆ.
‘ಹಾವೇರಿಯ ದೇವಗಿರಿಯಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಟೆಕ್ ಮುಗಿಸಿದ್ದೇನೆ. ಆದರೆ, ಕಾಲೇಜಿನಲ್ಲಿ ಯಾವುದೇ ಕ್ಯಾಂಪಸ್ ಸಂದರ್ಶನವಿಲ್ಲ. ಸ್ಥಳೀಯವಾಗಿ ಕೆಲಸ ಮಾಡಲು ಉದ್ಯಮಗಳಿಲ್ಲ. ಅನಿವಾರ್ಯವಾಗಿ ಪುಣೆಯಲ್ಲಿ ಕೆಲಸ ಮಾಡುತ್ತಿದ್ದೇನೆ’ ಎಂದು ಹಾವೇರಿ ತಾಲ್ಲೂಕಿನ ಕನಕಾಪುರದ ಮಹೇಶ್ ತಿಳಿಸಿದರು.
‘ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸೌಲಭ್ಯ ಉತ್ತಮವಾಗಿದೆ. ರೈಲು ಮಾರ್ಗವೂ ಅಚ್ಚುಕಟ್ಟಾಗಿದೆ. ಸಮೀಪದ ಹುಬ್ಬಳ್ಳಿಯಲ್ಲಿ ವಿಮಾನ ನಿಲ್ದಾಣವಿದೆ. ಇಷ್ಟೆಲ್ಲ ಸೌಲಭ್ಯವಿದ್ದರೂ ಸ್ಥಳೀಯವಾಗಿ ಉದ್ಯಮಗಳು ಸ್ಥಾಪನೆ ಆಗುತ್ತಿಲ್ಲ. ಆಡಳಿತ ನಡೆಸುವವರ ನಿರ್ಲಕ್ಷ್ಕವೇ ಇದಕ್ಕೆಲ್ಲ ಕಾರಣ’ ಎಂದು ದೂರಿದರು.
‘ಹೆದ್ದಾರಿಯ ಅಕ್ಕ–ಪಕ್ಕದಲ್ಲಿ ಉದ್ಯಮಗಳನ್ನು ಸ್ಥಾಪಿಸಬೇಕು. ಕೇವಲ ಬೆಂಗಳೂರಿಗಷ್ಟೇ ಸೀಮಿತವಾಗಿರುವ ಐಟಿ–ಬಿಟಿ ಕಂಪನಿಗಳನ್ನು ಹಾವೇರಿಯಲ್ಲೂ ಸ್ಥಾಪಿಸಬೇಕು. ಅದು ಸಾಧ್ಯವಾಗದಿದ್ದರೆ, ಶಾಖೆಗಳನ್ನಾದರೂ ತೆಗೆಯಬೇಕು’ ಎಂದು ಆಗ್ರಹಿಸಿದರು.
ದಶಕ ಕಳೆದರೂ ಆರಂಭವಾಗದ ಕೈಗಾರಿಕಾ ಪ್ರದೇಶ: ಹಾವೇರಿ ಜಿಲ್ಲೆಯಲ್ಲಿಯೇ ಮೊದಲ ಬಾರಿಗೆ ಇಜಾರಿಲಕಮಾಪುರದಲ್ಲಿ ಕೈಗಾರಿಕಾ ವಲಯ ಸ್ಥಾಪಿಸಲಾಗಿತ್ತು. ಅಲ್ಲಿ ಸಣ್ಣ–ಪುಟ್ಟ ಉದ್ಯಮಗಳು ಸ್ಥಾಪನೆಯಾಗಿದ್ದವು. ಈಗ ಈ ವಲಯ ಸಹ ನಗರ ವ್ಯಾಪ್ತಿಗೆ ಬಂದಿದೆ. ಹೀಗಾಗಿ, ಕರ್ಜಗಿ ರೈಲು ನಿಲ್ದಾಣ ಬಳಿಯ ಗಣಜೂರು–ಕೋಳೂರು ಸರಹದ್ದಿನಲ್ಲಿ ಸುಮಾರು 400 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣದ ದೊಡ್ಡ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಆದರೆ, ಯೋಜನೆ ಆರಂಭವಾಗಿ ದಶಕ ಕಳೆದರೂ ಕೈಗಾರಿಕಾ ಪ್ರದೇಶ ಅಭಿವೃದ್ಧಿಯಾಗಿಲ್ಲ.
ಜಿಲ್ಲೆಯಲ್ಲಿ ಉದ್ಯಮಗಳ ಸ್ಥಾಪನೆಗೆ ಕೈಗಾರಿಕಾ ವಲಯದ ಅಗತ್ಯವಿರುವುದನ್ನು ಅರಿತು 400 ಎಕರೆ ಯೋಜನೆ ಪ್ರಾರಂಭಿಸಲಾಗಿತ್ತು. 400 ಎಕರೆ ಭೂ ಸ್ವಾಧೀನ ಮಾಡಿಕೊಳ್ಳಬೇಕಿತ್ತು. ಅದರಲ್ಲಿ 200 ಎಕರೆ ಭೂ ಸ್ವಾಧೀನ ಮುಗಿದಿದ್ದು, ಪ್ರದೇಶ ಅಭಿವೃದ್ಧಿ ಕೆಲಸಗಳೂ ಆರಂಭವಾಗಿವೆ. ಆದರೆ, ಕಾಮಗಾರಿ ಮಾತ್ರ ಇನ್ನೂ ಪೂರ್ಣಗೊಂಡಿಲ್ಲ. ಇದೇ ಸ್ಥಳದಲ್ಲಿ ಮಣ್ಣುಗಾರಿಕೆ ನಡೆಯುತ್ತಿ್ದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತುಕೊಂಡಿದ್ದಾರೆ.
‘ಗಣಜೂರು ಕೈಗಾರಿಕಾ ಪ್ರದೇಶದ ಅಭಿವೃದ್ಧಿಗಾಗಿ ದಶಕದಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ, ಇದುವರೆಗೂ ಪ್ರದೇಶ ಅಭಿವೃದ್ಧಿಯಾಗಿಲ್ಲ. ನಿವೇಶಗಳ ಹಂಚಿಕೆಯೂ ನಡೆದಿಲ್ಲ. ಇದರಿಂದ ರಾಜಕೀಯ ಹಾಗೂ ಆಡಳಿತಾತ್ಮಕ ಇಚ್ಛಾಶಕ್ತಿ ಕೊರತೆಯಿದೆ’ ಎಂದು ಹಾವೇರಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ರವಿ ಮೆಣಸಿನಕಾಯಿ ದೂರಿದರು.
‘ಗಾರ್ಮೆಂಟ್ಸ್ ಕಾರ್ಖಾನೆ, ಮೆಣಸಿನಕಾಯಿ ಉತ್ಪನ್ನ ತಯಾರಿ ಸೇರಿದಂತೆ ಕಾರ್ಮಿಕ ಸಂಸ್ಕೃತಿಯನ್ನು ಮುಂದುವರಿಸುವ ಕಂಪನಿಗಳು ಮಾತ್ರ ಜಿಲ್ಲೆಯಲ್ಲಿವೆ. ವಿದ್ಯಾವಂತರು ಕೆಲಸ ಮಾಡುವ ಉದ್ಯಮಗಳಿಲ್ಲ. ಹೀಗಾಗಿಯೇ, ವಿದ್ಯಾವಂತರು ಊರು ತೊರೆಯುತ್ತಿದ್ದಾರೆ. ನಿವೃತ್ತರಾದವರು ಮಾತ್ರ ಜಿಲ್ಲೆಯಲ್ಲಿ ಉಳಿದುಕೊಳ್ಳುತ್ತಿದ್ದಾರೆ’ ಎಂದು ಆರೋಪಿಸಿದರು.
‘ಗಣಜೂರು ಕೈಗಾರಿಕಾ ಪ್ರದೇಶ ಅಭಿವೃದ್ಧಿಯನ್ನು ತ್ವರಿತವಾಗಿ ಮಾಡಬೇಕು. ಪರಿಣಿತರ ಸಮಿತಿ ರಚಿಸಿ, ನಿವೇಶನಗಳನ್ನು ಹಂಚಿಕೆ ಮಾಡಬೇಕು. ಇದಕ್ಕಾಗಿ ಸಹಾಯವಾಣಿ ಆರಂಭಿಸಬೇಕು. ಬಹುಬೇಗನೇ ನಿವೇಶನ ಹಂಚಿಕೆ ಮಾಡಿದರೆ, ಉದ್ಯಮಗಳು ಆರಂಭವಾಗುತ್ತವೆ. ಉದ್ಯೋಗ ಸೃಷ್ಟಿಯಾಗುತ್ತದೆ. ಜಿಲ್ಲೆಯ ಜನರು ವಲಸೆ ಹೋಗುವುದು ತಪ್ಪುತ್ತದೆ’ ಎಂದು ಹೇಳಿದರು.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ, ‘ಗಣಜೂರು ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ರಾಜ್ಯ ಸರ್ಕಾರ ತ್ವರಿತವಾಗಿ ಬಿಡುಗಡೆ ಮಾಡಬೇಕು. ಪ್ರದೇಶ ಅಭಿವೃದ್ಧಿಪಡಿಸಿ ಉದ್ಯಮೆದಾರರಿಗೆ ಹಂಚಿಕೆ ಮಾಡಬೇಕು. ರಾಷ್ಟ್ರೀಯ ಹೆದ್ದಾರಿ, ರೈಲು ಮಾರ್ಗ, ಹೆಸ್ಕಾಂ ಜಾಲ... ಎಲ್ಲ ಸೌಲಭ್ಯ ಇರುವ ಜಿಲ್ಲೆಯಲ್ಲಿ ಉದ್ಯಮಗಳ ಅಭಿವೃದ್ಧಿಗೆ ಸ್ಥಳೀಯ ರಾಜಕೀಯ ಮುಖಂಡರು ಪ್ರಯತ್ನಿಸಬೇಕು’ ಎಂದರು.
ಗಣಜೂರು–ಕೋಳೂರು ಮಾತ್ರವಲ್ಲದೇ ರಾಣೆಬೆನ್ನೂರು, ಬ್ಯಾಡಗಿ, ಸವಣೂರು ತಾಲ್ಲೂಕಿನಲ್ಲೂ ಕೈಗಾರಿಕೆ ಸ್ಥಾಪನೆ ಬಗ್ಗೆ ಈ ಹಿಂದೆಯೂ ಯೋಜನೆಗಳು ರೂಪುಗೊಂಡು, ಅವು ಅರ್ಧದಲ್ಲೇ ನಿಂತಿವೆ. ಜಿಲ್ಲಾ ಕೈಗಾರಿಕಾ ಕೇಂದ್ರಗಳ ಅಧಿಕಾರಿಗಳು ಸಹ ಕೈಗಾರಿಕೆಗಳ ಸ್ಥಾಪನೆಯಲ್ಲಿ ನಿರ್ಲಕ್ಷ್ಯ ವಹಿಸುತ್ತಿರುವ ಆರೋಪವಿದೆ.
ಸ್ವಂತ ಉದ್ಯಮ ನಡೆಸುವವರಿಗೆ ನೂರಾರು ವಿಘ್ನ: ಉದ್ಯೋಗ ಅರಸಿ ವಲಸೆ ಹೋಗುವ ವಿದ್ಯಾವಂತರು, ಹಲವು ವರ್ಷಗಳ ನಂತರ ವಾಪಸು ಊರಿಗೆ ಬಂದು ಉದ್ಯಮ ನಡೆಸಲು ಯೋಚಿಸುತ್ತಿದ್ದಾರೆ. ಜೊತೆಗೆ, ಸ್ಥಳೀಯ ಕೆಲ ಯುವಕರು ಸಹ ಹೊಸ ಉದ್ಯಮ ಆರಂಭಿಸಲು ಹುಮ್ಮಸ್ಸು ತೋರಿಸುತ್ತಿದ್ದಾರೆ. ಆದರೆ, ಅವರೆಲ್ಲರಿಗೂ ಉದ್ಯಮ ಆರಂಭಿಸಲು ನೂರಾರು ವಿಘ್ನಗಳು ಕಾಡುತ್ತಿವೆ.
ಉದ್ಯಮ ಆರಂಭಕ್ಕೂ ಮುನ್ನ ಕೃಷಿಯೇತರ (ಎನ್.ಎ) ಭೂ ಪರಿವರ್ತನೆಯಿಂದಲೇ ಸಮಸ್ಯೆಗಳು ಶುರುವಾಗುತ್ತಿದೆ. ನಂತರ, ವಿದ್ಯುತ್ ಸಂಪರ್ಕ ಹಾಗೂ ನೀರಿನ ಸಂಪರ್ಕ ಸೇರಿದಂತೆ ಎಲ್ಲದ್ದಕ್ಕೂ ತೊಂದರೆಗಳು ಉಂಟಾಗುತ್ತಿವೆ. ಉದ್ಯಮ ಆರಂಭಿಸಬೇಕಾದ ನವೋದ್ಯಮಿ, ಕಡತ ಹಿಡಿದು ಕಚೇರಿಯಿಂದ ಕಚೇರಿಗೆ ಅಲೆದಾಡಿ ಸುಸ್ತಾಗುತ್ತಿದ್ದಾರೆ. ಇದರಿಂದ ಬೇಸತ್ತು, ಉದ್ಯಮ ಆರಂಭಿಸುವ ಯೋಚನೆಯನ್ನೇ ಕೈ ಬಿಡುತ್ತಿದ್ದಾರೆ.
‘ಪರಿಚಯಸ್ಥರೊಬ್ಬರು ಕನಕಾಪುರ ರಸ್ತೆಯಲ್ಲಿ ಮಂಡಕ್ಕಿ ಉದ್ಯಮ ಆರಂಭಿಸಿದ್ದಾರೆ. ಅವರಿಗೆ ಇದುವರೆಗೂ ವಿದ್ಯುತ್ ಸಂಪರ್ಕ ನೀಡಿಲ್ಲ. ವಿಚಾರಿಸಿದರೆ, ಟ್ರಾನ್ಸ್ಫಾರ್ಮರ್ ಇಲ್ಲವೆಂದು ಸಬೂಬು ಹೇಳುತ್ತಿದ್ದಾರೆ. ಸಾಲ ಮಾಡಿ ಉದ್ಯಮ ಆರಂಭಿಸಲು ಹೊರಟಿದ್ದ ಪರಿಚಯಸ್ಥ, ಉದ್ಯಮ ಇಲ್ಲದಿದ್ದರೂ ಸಾಲಕ್ಕೆ ಬಡ್ಡಿ ಕಟ್ಟುತ್ತಿದ್ದಾರೆ. ಈ ರೀತಿಯಾದರೆ, ಉದ್ಯಮ ಆರಂಭಿಸಲು ಯಾರು ಮುಂದೆ ಬರುತ್ತಾರೆ’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದರಾಜ ಕಲಕೋಟಿ ಪ್ರಶ್ನಿಸಿದರು.
ಹಾವೇರಿ ಜಿಲ್ಲಾ ವಾಣಿಜ್ಯೋದ್ಯಮ ಸಂಸ್ಥೆಯ ಮಾಜಿ ಅಧ್ಯಕ್ಷ ರವಿ ಮೆಣಸಿನಕಾಯಿ, ‘ಹೊಸದಾಗಿ ಉದ್ಯಮ ಆರಂಭಿಸುವವರಿಗೆ ಒಂದೇ ಸೂರಿನಡಿ ಅನುಮತಿ ಸಿಗುವಂತೆ ಮಾಡಬೇಕು. ಕಚೇರಿಯಿಂದ ಕಚೇರಿಗೆ ಅಲೆದಾಡಿಸುವುದನ್ನು ತಪ್ಪಿಸಬೇಕು. ಅಂದಾಗ ಮಾತ್ರ ಉದ್ಯಮ ಸ್ಥಾಪಿಸಲು ಜನರು ಆಸಕ್ತಿ ತೋರಿಸುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.