ADVERTISEMENT

ಕಾಂಗ್ರೆಸ್ ಡಿಜಿಟಲ್‌ ಸದಸ್ವತ್ಯ ನೋಂದಣಿ ಅಭಿಯಾನದಲ್ಲಿ ಗದ್ದಲ, ಗರಂ ಆದ ಡಿಕೆಶಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2022, 7:57 IST
Last Updated 23 ಮಾರ್ಚ್ 2022, 7:57 IST
ಯಾದಗಿರಿ: ಕಾಂಗ್ರೆಸ್ ಡಿಜಿಟಲ್‌ ಸದಸ್ವತ್ಯ ನೋಂದಣಿ ಅಭಿಯಾನದಲ್ಲಿ ಗದ್ದಲ
ಯಾದಗಿರಿ: ಕಾಂಗ್ರೆಸ್ ಡಿಜಿಟಲ್‌ ಸದಸ್ವತ್ಯ ನೋಂದಣಿ ಅಭಿಯಾನದಲ್ಲಿ ಗದ್ದಲ   

ಯಾದಗಿರಿ: ನಗರದ ಇಂಪಿರಿಯಲ್ ಗಾರ್ಡನ್‌ನಲ್ಲಿ ಬುಧವಾರ ನಡೆಯುತ್ತಿರುವ ಕಾಂಗ್ರೆಸ್ ಡಿಜಿಟಲ್ ಸದಸ್ವತ್ಯ ಅಭಿಯಾನದಲ್ಲಿ ಕಾರ್ಯಕರ್ತರು ಗದ್ದಲ‌ಮಾಡಿದ್ದರಿಂದ ಕಾರ್ಯಕ್ರಮ ಸುಮಾರು 20 ನಿಮಿಷ ತಡವಾಗಿ ಆರಂಭವಾಯಿತು.

ಸುಭಾಷ್ ವೃತ್ತದಿಂದ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬೈಕ್ ರ‍್ಯಾಲಿ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಜೈಕಾರ ಕೂಗಿ‌ ಗದ್ದಲ ಮಾಡಿದರು.

'ಡಿ.ಕೆ., ಡಿ.ಕೆ., ಡಿ.ಕೆ' ಎಂದು ಒಮ್ಮೆಲೆ ಕೂಗತೊಡಗಿದಾಗ ಗರಂ ಆದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, ಕಾರ್ಯಕರ್ತರು, ಅಭಿಮಾನಿಗಳನ್ನು ಗದರಿಸಿದರು.

ADVERTISEMENT

'ಯಾವ ಡಿ.ಕೆ.ಶಿ ನೂ ಬೇಡ ಏನೂ ಬೇಡ ಕೂತ್ಕೋ ಹೋಗ್ರಿ,‌ ನಾವು ಏನು ಕಾರ್ಯಕ್ರಮ ಮಾಡ್ತಾ ಇದಿವಿ ಎಂದು ತಿಳಿದುಕೊಳ್ಳಿ' ಎಂದು ಕಾರ್ಯಕರ್ತರನ್ನು ಗದರಿಸಿದರು.

ಜಿಲ್ಲೆಯ ವಿವಿಧ ಕಡೆಗಳಿಂದ ಬಂದಿದ್ದ ಅಭಿಮಾನಿಗಳು ತುಂಬಾ ಉತ್ಸುಕತೆಯಿಂದ ಒಂದೇ ಸಮನೆ ಕೂಗತೊಡಗಿದರು. ಪಕ್ಷದ ಆಯೋಜಕರು ಪದೇ ಪದೆ ಮನವಿ ಮಾಡಿದರೂ ಕಾರ್ಯಕರ್ತರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಆಗ ಅನಿವಾರ್ಯವಾಗಿ ಪೊಲೀಸರನ್ನು ಕರೆಸಿದಾಗಲೂ ಪರಿಸ್ಥಿತಿ ಕನಿಷ್ಠ ಇಪ್ಪತ್ತು ನಿಮಿಷದವರಗೆ ಸುಧಾರಿಸಲೇ ಇಲ್ಲ. ನಿಗದಿತ ಸಮಯಕ್ಕಿಂತ ಒಂದೂವರೆ ತಾಸು ತಡವಾಗಿ ಕಾರ್ಯಕ್ರಮ ಪ್ರಾರಂಭವಾಯಿತು. ಆದರೂ ಕಾರ್ಯಕರ್ತರ ಅಶಿಸ್ತು ಮುಂದುವರೆದಿತ್ತು.

ಅರ್ಧಕ್ಕೆ ನಿಲ್ಲಿಸಿದ ವಂದೇ ಮಾತರಂ, ರಾಷ್ಟ್ರಗೀತೆ: ಗದ್ದಲದ ನಡುವೆಯೇ ವಂದೇ ಮಾತರಂ ಗೀತೆ ಹಾಡಿಸಲಾಯಿತು. ಆಯೋಜಕರು ಎದ್ದು ನಿಲ್ಲುವಂತೆ ಮನವಿ ಮಾಡಿದಾಗಲೂ ಅರ್ಧ ಜನ ಮಾತ್ರ ಎದ್ದು ನಿಂತಿದ್ದರು. ವಂದೇ ಮಾತರಂ ಗೀತೆ ಅರ್ಧಕ್ಕೆ ನಿಲ್ಲಿಸಲಾಯಿತು.

ಇದಾದ ನಂತರ ಒಮ್ಮೆಲೆ ರಾಷ್ಟ್ರಗೀತೆ ಸೌಂಡ್ ಸಿಸ್ಟಂನಲ್ಲಿ ಮೊಳಗತೊಡಗಿತು. ಮೊದಲೇ ಗದ್ದಲದ ನಡುವೆ ಇದ್ದ ಕಾರ್ಯಕರ್ತರಿಗೆ ರಾಷ್ಟ್ರಗೀತೆ ಕೇಳಿಸದೇ ಮತ್ತಷ್ಟು ಗೊಂದಲವಾಗಿದ್ದರಿಂದ ರಾಷ್ಟ್ರಗೀತೆಯನ್ನು ತಕ್ಷಣ ಅರ್ಧದಲ್ಲೇ ನಿಲ್ಲಿಸಲಾಯಿತು.

ಅಶಿಸ್ತನ್ನು ಸಹಿಸದೆ ಕೊನೆಗೆ ವೇದಿಕೆ ಏರಿದ ಶಿವಕುಮಾರ್ ಅವರು ಯಾರನ್ನು ಕರೆಯಲಾಗಿದೆಯೋ ಅವರು ಮಾತ್ರ ವೇದಿಕೆ ಮೇಲೆ ಬನ್ನಿ‌ ಇಲ್ಲದಿದ್ದರೆ ಸಭೆ ಮಾಡದೇ ನಾನು ವಾಪಸ್ ಹೋಗುತ್ತೇನೆ‌ ಎಂದು ಮತ್ತಷ್ಟ ಗರಂ ಆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.