ADVERTISEMENT

ಸಚಿವ ಶಿವರಾಜ ತಂಗಡಗಿಗೆ ‘ಸಂಸ್ಕೃತಿ’ ಎಂದರೆ ಬಹಳ ತಿರಸ್ಕಾರ: ಸುರೇಶ್ ಕುಮಾರ್ ಟೀಕೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಮಾರ್ಚ್ 2024, 6:27 IST
Last Updated 26 ಮಾರ್ಚ್ 2024, 6:27 IST
<div class="paragraphs"><p>ಸುರೇಶ್‌ ಕುಮಾರ್ ಮತ್ತು ಶಿವರಾಜ ತಂಗಡಗಿ</p></div>

ಸುರೇಶ್‌ ಕುಮಾರ್ ಮತ್ತು ಶಿವರಾಜ ತಂಗಡಗಿ

   

ಬೆಂಗಳೂರು: ಲೋಕಸಭಾ ಚುನಾವಣೆಯ ಕೊಪ್ಪಳ ಕ್ಷೇತ್ರದ ತಮ್ಮ ಪಕ್ಷದ ಅಭ್ಯರ್ಥಿ ಕೆ. ರಾಜಶೇಖರ ಹಿಟ್ನಾಳ ಪರ ಪ್ರಚಾರ ಮಾಡುವ ಸಮಯದಲ್ಲಿ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ ಕಾರಣಕ್ಕಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ವಿರುದ್ಧ ಬಿಜೆಪಿ ಶಾಸಕ ಎಸ್‌. ಸುರೇಶ್‌ ಕುಮಾರ್ ವಾಗ್ದಾಳಿ ನಡೆಸಿದ್ದಾರೆ. 

ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ‘ರಾಜ್ಯದಲ್ಲಿ ‘ಕನ್ನಡ ಮತ್ತು ಸಂಸ್ಕೃತಿ’ ಎಂಬ ಇಲಾಖೆ ಒಂದಿದೆ. ಅದಕ್ಕೆ ಒಬ್ಬರು ಸಚಿವರೂ ಸಹ ಇದ್ದಾರೆ. ಒಂದೇ ಸಮಸ್ಯೆ ಎಂದರೆ ಈಗ ಈ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜವಾಬ್ದಾರಿ ಪಡೆದಿರುವ ಆ ವ್ಯಕ್ತಿಗೆ ‘ಸಂಸ್ಕೃತಿ’ ಎಂದರೆ ಬಹಳ ತಿರಸ್ಕಾರ. ಆದ್ದರಿಂದ ಅವರ ಬಾಯಿಯಿಂದ ಆಸಂಸ್ಕೃತ (ಕುಸಂಸ್ಕೃತ) ಪದಗಳೇ ಉದುರುತ್ತಿರುತ್ತವೆ. ಮಾನ್ಯ ಸಿದ್ದರಾಮಯ್ಯನವರು ಈ ಸಚಿವರನ್ನು ಕನ್ನಡ ಮತ್ತು ಸಂಸ್ಕೃತಿ ಖಾತೆಯಿಂದ ಕೂಡಲೇ ವಿಮುಕ್ತಿಗೊಳಿಸಿ ಇವರಿಂದ ಸಂಸ್ಕೃತಿಯನ್ನು ಮುಕ್ತಿಗೊಳಿಸಿ ಪುಣ್ಯ ಕಟ್ಟಿಕೊಳ್ಳಲೆಂದು ಪ್ರಾರ್ಥಿಸುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

ಆಗಿದ್ದೇನು?: ಭಾನುವಾರ (ಮಾ. 24) ಕಾರಟಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂಗಡಗಿ ‘ಯುವಕರಿಗೆ ಎರಡು ಕೋಟಿ ಉದ್ಯೋಗ ಕೊಡುವುದಾಗಿ ಹೇಳಿ ಪ್ರಧಾನಿ ನರೇಂದ್ರ ಮೋದಿ ಮಾತು ತಪ್ಪಿದ್ದಾರೆ. ಉದ್ಯೋಗ ಕೊಡಿ ಎಂದು ಕೇಳಿದರೆ ಪಕೋಡಾ ಮಾರಲು ಹೋಗಿ ಎಂದಿದ್ದಾರೆ. ಈಗಲೂ ಯುವಕರು ಹಾಗೂ ವಿದ್ಯಾರ್ಥಿಗಳು ಮೋದಿ ಮೋದಿ ಎಂದರೆ ಕಪಾಳಕ್ಕೆ ಹೊಡೆಯಬೇಕು’ ಎನ್ನುವ ಹೇಳಿಕೆ ನೀಡಿದ್ದರು. ಇದು ಬಿಜೆಪಿಗರ ಆಕ್ರೋಶಕ್ಕೂ ಕಾರಣವಾಗಿದೆ.

ADVERTISEMENT

ಇಂದು ಪ್ರತಿಭಟನೆ: ತಂಗಡಗಿ ಹೇಳಿಕೆ ಖಂಡಿಸಿ ಪಕ್ಷದ ಕಾರ್ಯಕರ್ತರು ಬಿಜೆಪಿ ಯುವ ಮೋರ್ಚಾ ನೇತೃತ್ವದಲ್ಲಿ ಮಂಗಳವಾರ ಕಾರಟಗಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಕ್ಷೇತ್ರದ ಮಾಜಿ ಶಾಸಕ ಬಸವರಾಜ ದಢೇಸೂಗೂರು ಕಚೇರಿಯಿಂದ ಆರಂಭವಾಗಲಿರುವ ಪ್ರತಿಭಟನಾ ಮೆರವಣಿಗೆ ಕನಕದಾಸ ವೃತ್ತದ ತನಕ ನಡೆಯಲಿದೆ.

ದೂರು ದಾಖಲು: ‘ಶಿವರಾಜ ತಂಗಡಗಿ ತಮ್ಮ ಭಾಷಣದಲ್ಲಿ ಪ್ರಚೋದನಕಾರಿಯಾಗಿ ಹೇಳಿಕೆ ನೀಡಿದ್ದಾರೆ. ಅವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು’ ಎಂದು ಕಾರಟಗಿಯಲ್ಲಿ ಚುನಾವಣಾಧಿಕಾರಿಯಾಗಿ ಕೆಲಸ ಮಾಡುತ್ತಿರುವ ಗಂಗಾವತಿ ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಗ್ಯಾನನಗೌಡ ನಂದನಗೌಡ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.