ADVERTISEMENT

ಪುರುಷ ಯಾವಾಗ ಅತ್ಯಾಚಾರ, ಕೊಲೆ ಮಾಡ್ತಾನೆ ತಿಳಿಯಲ್ಲ: ನಟಿ ರಮ್ಯಾ ವಿವಾದ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಜನವರಿ 2026, 16:09 IST
Last Updated 7 ಜನವರಿ 2026, 16:09 IST
<div class="paragraphs"><p>ನಟಿ ರಮ್ಯಾ </p></div>

ನಟಿ ರಮ್ಯಾ

   

ಬೆಂಗಳೂರು: ಬೀದಿ ನಾಯಿಗಳಿಗೆ ಸಂಬಂಧಿಸಿದಂತೆ ಸುಮೊಟೊ ಪ್ರಕರಣ ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್, ‘ನಾಯಿ ಸಿಟ್ಟಿನಲ್ಲಿದ್ದಾಗ ಹೇಗೆ ವರ್ತಿಸುತ್ತದೆ ಎಂಬುದು ಗೊತ್ತಿಲ್ಲ. ಅದರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಹಾಗಾಗಿ, ರಸ್ತೆಗಳಲ್ಲಿ ನಾಯಿಗಳಿಲ್ಲದಂತೆ ನೋಡಿಕೊಳ್ಳುವ ಕ್ರಮಗಳಾಗಬೇಕು’ ಎಂದಿದೆ.

ಸುಪ್ರೀಂಕೋರ್ಟ್‌ನ ಈ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿರುವ ಚಂದನವನದ ನಟಿ ರಮ್ಯಾ, ಪುರುಷರ ಮನಸ್ಸೂ ಯಾರಿಗೂ ಅರ್ಥ ಆಗಲ್ಲ. ಪುರುಷ ಯಾವಾಗ ಅತ್ಯಾಚಾರ ಮಾಡುತ್ತಾನೆ, ಯಾವಾಗ ಕೊಲೆ ಮಾಡುತ್ತಾನೆ ಎನ್ನುವುದು ತಿಳಿಯುವುದಿಲ್ಲ. ಹಾಗಾದರೆ ಎಲ್ಲಾ ಪುರುಷರನ್ನು ಜೈಲಿಗೆ ಹಾಕಬೇಕಾ?’ ಎಂದು ಕೇಳಿದ್ದಾರೆ.

ADVERTISEMENT

ರಮ್ಯಾ ಹಂಚಿಕೊಂಡ ಪೋಸ್ಟ್‌

ರಮ್ಯಾ ಅವರ ಪ್ರತಿಕ್ರಿಯೆ ಸದ್ಯ ವಿವಾದದ ಸ್ವರೂಪ ಪಡೆದುಕೊಂಡಿದೆ. ನ್ಯಾಯಾಲಯದ ಅಭಿಪ್ರಾಯವನ್ನು ಪುರುಷರ ಮನಸ್ಥಿತಿಗೆ ಹೋಲಿಸಿರುವ ರಮ್ಯಾ ಬಗ್ಗೆ ನೆಟ್ಟಿಗರು ಪರ ವಿರೋಧ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟ್ ಹೇಳಿದ್ದು..

ಪ್ರಕರಣ ವಿಚಾರಣೆ ನಡೆಸಿದ ನ್ಯಾ. ವಿಕ್ರಮ್‌ ನಾಥ್‌, ನ್ಯಾ. ಸಂದೀಪ್‌ ಮೆಹ್ತಾ ಹಾಗೂ ನ್ಯಾ. ಎನ್‌.ವಿ. ಅಂಜರಾರಿಯಾ ಅವರಿದ್ದ ಪೀಠ, 'ನಾಯಿಗಳು ಕಚ್ಚುತ್ತವೆ ಎಂಬುದಷ್ಟೇ ವಿಚಾರವಲ್ಲ. ದ್ವಿಚಕ್ರ ವಾಹನಗಳಲ್ಲಿ ಚಲಿಸುವವರನ್ನು ನಾಯಿಗಳು ಕಚ್ಚಬಹುದು ಅಥವಾ ಅಟ್ಟಾಡಿಸಿಕೊಂಡು ಹೋಗಬಹುದು. ಆಗ ಸವಾರರು ಕೆಳಗೆ ಬಿದ್ದು ಅಪಘಾತಕ್ಕೀಡಾಗುವ ಅಪಾಯವಿದೆ' ಎಂದಿದೆ.

'ಸಮಸ್ಯೆ ಆದ ನಂತರ ಸರಿಪಡಿಸಿಕೊಳ್ಳುವುದಕ್ಕಿಂತ, ಮೊದಲೇ ಎಚ್ಚರಿಕೆ ವಹಿಸುವುದು ಉತ್ತಮ. ಹಾಗಾಗಿ, ರಸ್ತೆಗಳು (ನಾಯಿಗಳಿಲ್ಲದೆ) ಮುಕ್ತವಾಗಿರಬೇಕು' ಎಂದಿರುವ ಪೀಠ, ರಸ್ತೆಗಳಲ್ಲಿ ಓಡಾಡುವ ನಾಯಿಗಳು, ಆ ಮಾರ್ಗವಾಗಿ ಸಂಚರಿಸುವ ವಾಹನಗಳಿಗೆ ಅದರಲ್ಲೂ ದ್ವಿಚಕ್ರ ವಾಹನಗಳು ಮತ್ತು ಸೈಕಲ್‌ ಸವಾರರಿಗೆ ಅಪಾಯಕಾರಿ ಎಂದು ಒತ್ತಿ ಹೇಳಿದೆ.

'ಯಾವ ನಾಯಿಯ ಮನಸ್ಥಿತಿ ಹೇಗಿರುತ್ತದೆ ಎಂಬುದು ಯಾರಿಗೆ ಗೊತ್ತಿರುತ್ತದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.