ಶಾರುಕ್–ಆಲಿಯಾ ಭಟ್
ಮುಂಬೈ: ಪ್ರವಾಹ ಪೀಡಿತ ಪಂಜಾಬ್ ಜನರ ನೆರವಿಗೆ ಧಾವಿಸಿ ಎಂದು ಬಾಲಿವುಡ್ ನಟ ಶಾರುಕ್ ಖಾನ್, ಆಲಿಯಾ ಭಟ್, ರಣದೀಪ್ ಹೂಡಾ, ಕರಣ್ ಜೋಹರ್ ಸೇರಿದಂತೆ ಅನೇಕ ಸೆಲೆಬ್ರೆಟಿ ಮನವಿ ಮಾಡಿದ್ದಾರೆ.
ಪಂಜಾಬ್ನಲ್ಲಿ ಕೆಲವು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ 30ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, 3.5 ಲಕ್ಷಕ್ಕೂ ಹೆಚ್ಚು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಪ್ರವಾಹ ಪೀಡಿತ ಪಂಜಾಬ್ ನೋಡಲು ಹೃದಯ ಭಾರವಾಗಿದೆ. ಕುಟುಂಬದವರನ್ನು ಕಳೆದುಕೊಂಡವರಿಗೆ ದುಃಖ ಭರಿಸುವ ಶಕ್ತಿ ದೇವರು ಕರುಣಿಸಲಿ. ಪರಿಹಾರ ಕಾರ್ಯಗಳಿಗೆ ಕೈ ಜೋಡಿಸಿ ಎಂದು ಶಾರುಕ್ ಖಾನ್ 'ಎಕ್ಸ್' ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಪಂಜಾಬ್ನಲ್ಲಿರುವ ಜನರಿಗೆ ಇದು ಕಠಿಣ ಸಮಯ. ಈ ಪ್ರತಿಕೂಲ ಪರಿಸ್ಥಿತಿ ನಿವಾರಣೆಯಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ. ನಿಮ್ಮ ಕೈಲಾದಷ್ಟು ಸಹಾಯವನ್ನು ಮಾಡಿ, ಬಳಿಕ ಮಾಹಿತಿಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಿ ಎಂದು ನಿರ್ಮಾಪಕ ಕರಣ್ ಜೋಹರ್ ಜನರಿಗೆ ಮನವಿ ಮಾಡಿದ್ದಾರೆ.
ಸೋನು ಸೂದ್ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ವಿಡಿಯೊ ಹಂಚಿಕೊಂಡಿದ್ದು, ನಿಮ್ಮ ಜತೆ ನಾವಿದ್ದೇವೆ. ನೀವು ಒಂಟಿಯಲ್ಲ. ಕುಗ್ಗಬೇಡಿ ಎಂದಿರುವ ಅವರು, ಸಹಾಯದ ಅಗತ್ಯತೆ ಇರುವವರು ನಮ್ಮನ್ನು ಸಂಪರ್ಕಿಸಬಹುದು. ಕೈಲಾದಷ್ಟು ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ.
ಪಂಜಾಬ್ನಲ್ಲಿ ಪ್ರವಾಹದಿಂದ ತೊಂದರೆಗೊಳಗಾದ ಎಲ್ಲರಿಗಾಗಿ ನನ್ನ ಹೃದಯ ಮಿಡಿದಿದೆ, ದಣಿವರಿಯಿಲ್ಲದೆ ಪರಿಹಾರ ಕಾರ್ಯಗಳಲ್ಲಿ ತೊಡಗಿರುವವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತಿದ್ದೇನೆ ಎಂದು ನಟಿ ಆಲಿಯಾ ಭಟ್ ತಿಳಿಸಿದ್ದಾರೆ.
ಪ್ರವಾಹದಿಂದ ಉಂಟಾಗಿರುವ ಹಾನಿ ಹೃದಯ ವಿದ್ರಾವಕವಾಗಿದೆ. ಗುರುದಾಸ್ಪುರ ಜಿಲ್ಲೆಯಲ್ಲಿ ಸಾಧ್ಯವಾದಷ್ಟು ಪರಿಹಾರ ಕಾರ್ಯಗಳಲ್ಲಿ ತೊಡಗಿದ್ದೇನೆ ಎಂದು ರಣದೀಪ್ ಹೂಡಾ ತಿಳಿಸಿದ್ದಾರೆ.
ದಿಲ್ಜಿತ್ ದೋಸಾಂಜ್, ಸಂಜಯ್ ದತ್ ಸೇರಿದಂತೆ ಪಂಜಾಬಿ ನಟ–ನಟಿಯರು ಸಹಾಯದ ಹಸ್ತ ಚಾಚಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.