
ನಟ ಜಗ್ಗೇಶ್
ಬೆಂಗಳೂರು: ಕೆಲವು ದಿನಗಳ ಹಿಂದೆ ನಟ ಜಗ್ಗೇಶ್ ಅವರು ಸಿನಿಮಾ ಪೈರಸಿ ವಿರುದ್ಧ ರಾಜ್ಯಸಭೆಯಲ್ಲಿ ಮಾತನಾಡಿದ್ದರು. ಇವರ ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರ, ಪೈರಸಿ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
ಈ ಕುರಿತು ಜಗ್ಗೇಶ್ ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ರಾಜ್ಯಸಭೆಯಲ್ಲಿ ಸಿನಿಮಾ ಪೈರಸಿ ಕಳ್ಳರ ಮಟ್ಟಹಾಕಲು ಮನವಿ ಮಾಡಿದ್ದೆವು. ಈಗ ಅದಕ್ಕೆ ಫಲ ಸಿಕ್ಕಿದೆ. ಆಧುನಿಕ ತಂತ್ರಜ್ಞಾನ ಬಳಸಿ ಅಂತಹ ಸಿನಿಮಾ ಕಳ್ಳರನ್ನು ಕಂಡು ಹಿಡಿದು ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಸಿನಿಮಾ ಪೈರಸಿ ಆ್ಯಪ್ಗಳನ್ನು ಬಂದ್ ಮಾಡುವ ನಿರ್ಧಾರ ಮಾಡಿದೆ’ ಎಂದಿರುವ ಜಗ್ಗೇಶ್, ಕೇಂದ್ರ ಸರ್ಕಾರಕ್ಕೆ ವೈಯಕ್ತಿಕವಾಗಿ ಹಾಗೂ ಭಾರತೀಯ ಚಿತ್ರರಂಗ ಪರವಾಗಿ ಧನ್ಯವಾದ ತಿಳಿಸಿದ್ದಾರೆ.
‘ಯಾರೊಬ್ಬರು ಬೆಂಬಲ ವ್ಯಕ್ತಪಡಿಸಲಿಲ್ಲ‘
‘45 ವರ್ಷದಿಂದ ಚಿತ್ರರಂಗದ ಅನ್ನ ತಿಂದು ಬೆಳೆದ ನಾನು, ಅದರ ಋಣ ತೀರಿಸುವ ನನ್ನ ಯತ್ನಕ್ಕೆ ಚಿತ್ರರಂಗದ ಯಾರೊಬ್ಬರು ಬೆಂಬಲ ವ್ಯಕ್ತಪಡಿಸಲಿಲ್ಲ. ಭಾಮಾಹರೀಶ್, ಬಣಕಾರ್, ಯೂಟ್ಯೂಬ್ ಅನೀಲ್ ಯಾದವ್ ಗೆಳೆಯರು, ಕೋಣ ನಿರ್ಮಾಪಕರನ್ನು ಬಿಟ್ಟು ಬೇರೆ ಯಾರೂ ಸಹಕರಿಸಲಿಲ್ಲ ಎಂಬ ದುಃಖ ಕಾಡಿತ್ತು. ಆದರೂ ಪರವಾಗಿಲ್ಲ ನನ್ನ ಜೀವನದ ಪ್ರತಿ ಘಟ್ಟದಲ್ಲಿಯೂ ನಾನು ಏಕಾಂಗಿ ಹೋರಾಟ ಮಾಡಿ ನನ್ನ ಕನ್ನಡದ ಜನರ ಆಶೀರ್ವಾದದಿಂದ ಗಟ್ಟಿನೆಲೆ ಪಡೆದು ಕಂಬದಂತೆ ನಿಂತಿರುವೆ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.