ADVERTISEMENT

ಅಲ್ಲು ಅರ್ಜುನ್‌ಗೆ ವಿಧಿಸಿದ್ದ ಷರತ್ತು ಸಡಿಲಿಕೆ: ವಿದೇಶಿ ಪ್ರಯಾಣಕ್ಕೂ ಅವಕಾಶ

ಪಿಟಿಐ
Published 11 ಜನವರಿ 2025, 14:00 IST
Last Updated 11 ಜನವರಿ 2025, 14:00 IST
ಅಲ್ಲು ಅರ್ಜುನ್‌
ಅಲ್ಲು ಅರ್ಜುನ್‌    

ಹೈದರಾಬಾದ್: ‘ಪುಷ್ಪ 2’ ಚಿತ್ರ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್‌ ಅವರಿಗೆ ವಿಧಿಸಿದ್ದ ಕಠಿಣ ಜಾಮೀನು ಷರತ್ತುಗಳನ್ನು ಸಡಿಲಿಸಿ ನ್ಯಾಯಾಲಯ ಶುಕ್ರವಾರ ಆದೇಶ ಹೊರಡಿಸಿದೆ. 

ಪ್ರತಿ ಭಾನುವಾರ ಅಲ್ಲು ಅರ್ಜುನ್‌ ತನಿಖಾಧಿಕಾರಿಗಳ ಎದುರು ಹಾಜರಾಗಬೇಕೆಂಬ ನಿಯಮದಿಂದ ವಿನಾಯಿತಿ ನೀಡಲಾಗಿದೆ. ಅಗತ್ಯವಿದ್ದಾಗ ಚಿಕ್ಕಡಪಳ್ಳಿ ಪೊಲೀಸ್‌ ಠಾಣೆ ಮುಖ್ಯಸ್ಥರ ಎದುರು ಹಾಜರಾಗಬೇಕು ಎಂಬ ಷರತ್ತಿನೊಂದಿಗೆ ನಿರ್ದಿಷ್ಟ ದೇಶಗಳಿಗೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ.

ಪ್ರಕರಣದಲ್ಲಿ ಚಾರ್ಜ್‌ಶೀಟ್‌ ಸಲ್ಲಿಕೆಯಾಗುವವರೆಗೆ ತಮ್ಮ ಪ್ರಯಾಣದ ವೇಳಾಪಟ್ಟಿ ಹಾಗೂ ಆಯಾ ದೇಶದಲ್ಲಿ ಅವರು ತಂಗುವ ಸ್ಥಳದ ವಿವರಗಳನ್ನು ಅಲ್ಲು ಅರ್ಜುನ್‌ ಅವರು ಠಾಣೆ ಮುಖ್ಯಸ್ಥರಿಗೆ ಸಲ್ಲಿಸಬೇಕು. ಉಳಿದ ಜಾಮೀನು ಷರತ್ತುಗಳಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ನ್ಯಾಯಾಲಯ ಹೇಳಿದೆ.  

ADVERTISEMENT

ಜಾಮೀನು ಷರತ್ತುಗಳನ್ನು ಸಡಿಲಿಸುವಂತೆ ಕೋರಿ ಅಲ್ಲು ಅರ್ಜುನ್‌ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. 

ಜ.3ರಂದು ಜಾಮೀನು ನೀಡಿದ್ದ ನ್ಯಾಯಾಲಯವು ಚಾರ್ಜ್‌ಶೀಟ್‌ ಸಲ್ಲಿಕೆಯಾಗುವವರೆಗೆ ಅಥವಾ 2 ತಿಂಗಳ ಅವಧಿಗೆ ಪ್ರತಿ ಭಾನುವಾರ ಅಲ್ಲು ಅರ್ಜುನ್‌ ತನಿಖಾಧಿಕಾರಿಗಳ ಮುಂದೆ ಹಾಜಾರಾಗಬೇಕು ಹಾಗೂ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೇ ವಿದೇಶ ಪ್ರಯಾಣ ಕೈಗೊಳ್ಳದಂತೆ ಷರತ್ತು ವಿಧಿಸಿತ್ತು. 

 ‘ಪುಷ್ಟ–2’ ಚಿತ್ರಪ್ರದರ್ಶನ ನಡೆಯುತ್ತಿದ್ದ ಸಂಧ್ಯಾ ಚಿತ್ರಮಂದಿರಕ್ಕೆ ಡಿ.4ರಂದು ಅಲ್ಲು ಅರ್ಜುನ್‌ ಭೇಟಿ ನೀಡಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿ ಮಹಿಳೆಯೊಬ್ಬರು ಮೃತಪಟ್ಟಿದ್ದರು.

Highlights - ಪ್ರತಿ ಭಾನುವಾರ ತನಿಖಾಧಿಕಾರಿ ಎದುರು ಹಾಜರಾಗಬೇಕಿಲ್ಲ ವಿದೇಶ ಪ್ರಯಾಣಕ್ಕೆ ಅನುಮತಿಸಿ ಕೋರ್ಟ್‌ ಆದೇಶ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.