
‘ಆರ್ಕೆಸ್ಟ್ರಾ ಮೈಸೂರು’, ‘ಬಡವ ರಾಸ್ಕಲ್’, ‘ಪಾಪ್ಕಾರ್ನ್ ಮಂಕಿ ಟೈಗರ್’, ‘ಫ್ಯಾಮಿಲಿ ಡ್ರಾಮಾ’, ‘ಡೇರ್ಡೆವಿಲ್ ಮುಸ್ತಾಫಾ’, ‘ಮರ್ಯಾದೆ ಪ್ರಶ್ನೆ’, ‘ಎಕ್ಕ’ ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ನಟಿಸಿರುವ ಪೂರ್ಣಚಂದ್ರ ಮೈಸೂರು ಹೊಸ ಸಿನಿಮಾ ಸದ್ದಿಲ್ಲದೇ ಪೂರ್ಣಗೊಂಡಿದೆ.
‘ಹೆಗ್ಗಣ ಮುದ್ದು’ ಎಂಬ ಶೀರ್ಷಿಕೆಯುಳ್ಳ ಈ ಸಿನಿಮಾವನ್ನು ನಟ ಧನಂಜಯ ಅವರ ‘ಡಾಲಿ ಪಿಕ್ಚರ್ಸ್’ ನಿರ್ಮಾಣ ಮಾಡಿದ್ದು, ಅವಿನಾಶ್ ಬಳೆಕ್ಕಳ ನಿರ್ದೇಶಿಸಿದ್ದಾರೆ. ಇದು ಇವರ ಮೊದಲ ಸಿನಿಮಾ. ಪೂರ್ಣ ಅವರಿಗೆ ಜೋಡಿಯಾಗಿ ನಟ ಹಾಗೂ ಕಲಾ ನಿರ್ದೇಶಕ ಅರುಣ್ ಸಾಗರ್ ಪುತ್ರಿ ಅದಿತಿ ಸಾಗರ್ ನಟಿಸಿದ್ದಾರೆ. ಈಗಾಗಲೇ ಶಿವರಾಜ್ಕುಮಾರ್ ಜೊತೆಗೆ ‘ವೇದ’ ಸಿನಿಮಾದಲ್ಲಿ ನಟಿಸಿದ್ದ ಅದಿತಿ ಇದೀಗ ಮೊದಲ ಬಾರಿಗೆ ‘ಹೆಗ್ಗಣ ಮುದ್ದು’ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.
ಪ್ರಸಿದ್ಧ ಗಾದೆ ಮಾತಿನಿಂದ ಸ್ಫೂರ್ತಿ ಪಡೆದು ಈ ಶೀರ್ಷಿಕೆ ಇಡಲಾಗಿದೆ ಎಂದಿದೆ ಚಿತ್ರತಂಡ. ಇದೊಂದು ಡ್ರಾಮ ಥ್ರಿಲ್ಲರ್ ಸಿನಿಮಾವಾಗಿದೆ. ‘ಸಂಬಂಧಗಳ ಬಗ್ಗೆ ಇರುವ ಸಿನಿಮಾ ಇದಾಗಿದೆ. ಹೆತ್ತವರಿಗೆ ಹೆಗ್ಗಣ ಮುದ್ದು ಅಂತ ಹೇಗೆ ಹೇಳ್ತಿವೋ ಹಾಗೆ ಈ ಸಿನಿಮಾದಲ್ಲಿ ನನಗೆ ನಾನೇ ಮುದ್ದು ಎನ್ನುವುದನ್ನು ಹೇಳಲಾಗಿದೆ’ ಎನ್ನುತ್ತಾರೆ ಅವಿನಾಶ್.
ಈಗಾಗಲೇ ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಸದ್ಯ ರಿಲೀಸ್ಗೆ ತಯಾರಿ ಮಾಡಿಕೊಳ್ಳುತ್ತಿದೆ ಚಿತ್ರತಂಡ. ಚಿತ್ರಕ್ಕೆ ಕಾರ್ತಿಕ್ ಚೆನ್ನೂಜಿ ರಾವ್ ಮತ್ತು ರೋಣದ ಬಕ್ಕೆಶ್ ಸಂಗೀತ ನಿರ್ದೇಶನ ಮಾಡಿದ್ದಾರೆ. ನಚಿಕೇತ್ ಬಳೆಕ್ಕಳ ಕಥೆ ಬರೆದು ಕ್ಯಾಮೆರಾ ಹಿಡಿದಿದ್ದಾರೆ. ಡಾಲಿ ಪಿಕ್ಚರ್ಸ್ನ ‘ಜೆಸಿ’ ಸಿನಿಮಾ ರಿಲೀಸ್ ಆದ ಬಳಿಕ ‘ಹೆಗ್ಗಣ ಮುದ್ದು’ ತೆರೆಗೆ ಬರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.