ಚಿತ್ರ: ಇನ್ಸ್ಟಾಗ್ರಾಮ್
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ಬಾಸ್ 12ನೇ ಆವೃತ್ತಿ ಆರಂಭಕ್ಕೆ ಇನ್ನು 10 ದಿನ ಬಾಕಿ ಉಳಿದಿದೆ. ಈ ಬಾರಿಯ ಬಿಗ್ಬಾಸ್ ಮನೆಗೆ ಯಾರೆಲ್ಲಾ ಸ್ಪರ್ಧಿಗಳು ಎಂಟ್ರಿ ಕೊಡಲಿದ್ದಾರೆ ಎಂದು ವೀಕ್ಷಕರಲ್ಲಿ ಕುತೂಹಲ ಹೆಚ್ಚಾಗಿದೆ. ಮತ್ತೊಂದು ಕಡೆ ಸಾಮಾಜಿಕ ಜಾಲತಾಣದಲ್ಲಿ ಸ್ಪರ್ಧಿಗಳ ಸಂಭಾವ್ಯ ಪಟ್ಟಿ ಹರಿದಾಡುತ್ತಿದ್ದು, ಈ ಬಗ್ಗೆ ಸೆ.28ರಂದು ಅಧಿಕೃತ ಮಾಹಿತಿ ಹೊರ ಬೀಳಲಿದೆ.
ಬಿಗ್ಬಾಸ್ ಸ್ಪರ್ಧೆಯು ವ್ಯಕ್ತಿಗಳ ಬದಲು ಅಲ್ಲ, ವ್ಯಕ್ತಿತ್ವಗಳ ನಡುವಿನ ಆಟವಾಗಿದೆ. ಈ ಶೋನಲ್ಲಿ ನಗು–ಅಳು, ವಾದ-ವಿವಾದ, ಕೋಪ, ಅಸೂಯೆ, ಕಿರುಚಾಟ ಈ ಎಲ್ಲವನ್ನು ಒಳಗೊಂಡಿರುತ್ತದೆ. ಸ್ಪರ್ಧಿಗಳು 100 ದಿನ ಬಿಗ್ಬಾಸ್ ಮನೆಯಲ್ಲಿ ಉಳಿದು ಟ್ರೋಫಿ ಗೆಲ್ಲುವುದಕ್ಕಿಂತ, ತಮ್ಮ ವ್ಯಕ್ತಿತ್ವದಿಂದಲೇ ವೀಕ್ಷಕರ ಮನಸ್ಸು ಗೆಲ್ಲುವುದು ಅಷ್ಟೇ ಮುಖ್ಯವಾಗಿರುತ್ತದೆ. ಆದರೆ ಇತ್ತೀಚಿನ ಸೀಸನ್ಗಳಲ್ಲಿ ಸ್ಪರ್ಧಿಗಳು ದೈಹಿಕವಾಗಿ ಹಲ್ಲೆ ಮಾಡುವುದು ಹೆಚ್ಚಾಗಿದೆ.
ಬಿಗ್ಬಾಸ್ ನಿಯಮದ ಪ್ರಕಾರ, ಸ್ಪರ್ಧಿಗಳು ಯಾರ ಮೇಲು ದೈಹಿಕವಾಗಿ ಹಲ್ಲೆ ನಡೆಸುವಂತಿಲ್ಲ. ಹಾಗೇನಾದರೂ ನಿಯಮಗಳನ್ನು ಮೀರಿ ದೈಹಿಕವಾಗಿ ಹಲ್ಲೆ ಮಾಡಿದ್ದೇ ಆದರೆ ಅವರನ್ನು ಆ ಕೂಡಲೇ ಬಿಗ್ಬಾಸ್ ಮನೆಯಿಂದ ಹೊರ ಕಳುಹಿಸಲಾಗುತ್ತದೆ. ಕಳೆದ ಸೀಸನ್ಗಳಲ್ಲಿ ಕೆಲ ಸ್ಪರ್ಧಿಗಳು ದೈಹಿಕವಾಗಿ ಹಲ್ಲೆ ಮಾಡಿ ಬಿಗ್ಬಾಸ್ ಮನೆಯಿಂದ ಆಚೆ ಬಂದಿರುವ ಉದಾಹರಣೆಗಳಿವೆ.
ಹುಚ್ಚ ವೆಂಕಟ್
ಈ ಹಿಂದೆ ಬಿಗ್ಬಾಸ್ 3ನೇ ಆವೃತ್ತಿಯಲ್ಲಿ ‘ಹುಚ್ಚ ವೆಂಕಟ್’ ಭಾಗವಹಿಸಿದ್ದರು. ವಾರಾಂತ್ಯದ ಎಪಿಸೋಡ್ನಲ್ಲಿ ಕಿಚ್ಚ ಸುದೀಪ್ ಎದುರಲ್ಲೇ ಸಹ ಸ್ಪರ್ಧಿಯಾಗಿದ್ದ ರವಿ ಮೂರೂರ್ ಮೇಲೆ ಹುಚ್ಚ ವೆಂಕಟ್ ಹಲ್ಲೆ ಮಾಡಿದ್ದರು. ಆ ಕೂಡಲೇ ಅವರನ್ನು ಬಿಗ್ಬಾಸ್ ಮನೆಯಿಂದ ಹೊರಹಾಕಲಾಗಿತ್ತು. ಇದಾದ ಬಳಿಕ ಮತ್ತೆ ಹುಚ್ಚ ವೆಂಕಟ್ 4ನೇ ಆವೃತ್ತಿಗೆ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದರು. ಆಗ ಮತ್ತೆ ಒಳ್ಳೆ ಹುಡುಗ ಪ್ರಥಮ್ ಅವರ ಮೇಲೆ ಹಲ್ಲೆ ಮಾಡಿದ್ದರು. ಬಿಗ್ಬಾಸ್ ಆಯೋಜಕರು ತಕ್ಷಣ ಹುಚ್ಚ ವೆಂಕಟ್ ಅವರನ್ನು ಮನೆಯಿಂದ ಹೊರ ಕರೆದುಕೊಂಡು ಬಂದಿದ್ದರು.
ನಟಿ ಸಂಯುಕ್ತಾ ಹೆಗಡೆ
ನಟಿ ಸಂಯುಕ್ತಾ ಹೆಗಡೆ
ಬಳಿಕ ಸೀಸನ್ 5ಕ್ಕೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಆಗಮಿಸಿದ್ದ ಕಿರಿಕ್ ಪಾರ್ಟಿ ಸಿನಿಮಾದ ‘ನಟಿ ಸಂಯುಕ್ತಾ ಹೆಗಡೆ’, ಸಮೀರ್ ಆಚಾರ್ಯ ಅವರ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದರು. ಬಿಗ್ಬಾಸ್ ಮನೆಗೆ ಬಂದ 15 ದಿನದೊಳಗೆ ನಟಿ ಸಂಯುಕ್ತಾ ಹೆಗಡೆ ಅವರನ್ನ ಹೊರ ಕಳುಹಿಸಲಾಗಿತ್ತು.
ನಟ ರಂಜಿತ್ ಕುಮಾರ್
ರಂಜಿತ್ ಕುಮಾರ್
ಇನ್ನು, ಕಳೆದ ಸೀಸನ್ 11ಕ್ಕೆ ಎಂಟ್ರಿ ಕೊಟ್ಟಿದ್ದ ‘ಲಾಯರ್ ಜಗದೀಶ್’ ಮತ್ತು ‘ರಂಜಿತ್ ಕುಮಾರ್’ ಹೊಡೆದಾಡಿಕೊಂಡಿದ್ದರು. ಆಗ ಜಗದೀಶ್ ಅವರ ಮೇಲೆ ಕೈ ಮಾಡಿದ್ದಕ್ಕೆ ರಂಜಿತ್ರನ್ನು ಆ ಕೂಡಲೇ ಆಚೆ ಕಳುಹಿಸಲಾಗಿತ್ತು.
ಬಿಗ್ ಬಾಸ್ ಮನೆಯಲ್ಲಿ ಜಗದೀಶ್
ವಕೀಲ ಕೆ.ಎನ್.ಜಗದೀಶ್ ಕುಮಾರ್
ವಕೀಲ ಜಗದೀಶ್ ಬಿಗ್ಬಾಸ್ ಸೀಸನ್ 11ರ ಮನೆಯಲ್ಲಿದ್ದ ಮಹಿಳಾ ಸ್ಪರ್ಧಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಬಿಗ್ಬಾಸ್ ತಂಡ ವಕೀಲ ಜಗದೀಶ್ರನ್ನು ಬಿಗ್ಬಾಸ್ ಮುಖ್ಯ ದ್ವಾರದಿಂದ ಆಚೆ ಕಳುಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.