
ರಾಕ್ ಈಗಲ್ ಔಲ್
ಹೈದರಾಬಾದ್: ಹದ್ದನ್ನು ಹೋಲುವ ಅಪರೂಪದ ಗೂಬೆ – 'ರಾಕ್ ಈಗಲ್ ಔಲ್' (Rock Eagle Owl) ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿರುವ ಕ್ವಾರಿಯಲ್ಲಿ ಮೊಟ್ಟೆ ಇಟ್ಟಿದೆ. ಹೀಗಾಗಿ, ಒಂದು ತಿಂಗಳವರೆಗೆ ಗಣಿಗಾರಿಕೆ ಸ್ಥಗಿತಗೊಳಿಸಲಾಗಿದೆ. ಕ್ವಾರಿ ಮಾಲೀಕರು ಕೈಗೊಂಡಿರುವ ಈ ಪರಿಸರಸ್ನೇಹಿ ಕ್ರಮಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಕ್ವಾರಿಯಲ್ಲಿ ಮೊಟ್ಟೆಗಳಿರುವ ಬಗ್ಗೆ ವನ್ಯಜೀವಿ ಛಾಯಾಗ್ರಾಹಕರು, ಪಕ್ಷಿ ಪ್ರೇಮಿಗಳು ಎಚ್ಚರಿಸುತ್ತಿದ್ದಂತೆ ತೆಲಂಗಾಣ ಅರಣ್ಯ ಇಲಾಖೆ ಕಾರ್ಯಪ್ರವೃತ್ತವಾಗಿದೆ.
'ವನ್ಯಜೀವಿ ಛಾಯಾಗ್ರಾಹಕ ಮನೋಜ್ ಕುಮಾರ್ ವಿತ್ತಾಪು ಅವರು, ಜಿಲ್ಲೆಯ ಯೆಂಕಥಲ ಹುಲ್ಲುಗಾವಲಿಗೆ ಆರು ದಿನಗಳ ಹಿಂದೆ ಭೇಟಿ ನೀಡಿದ್ದರು. ಅಲ್ಲಿ ಅಪರೂಪದ ಗೂಬೆ ಹಾಗೂ ಅದರ ಐದು ಮೊಟ್ಟೆಗಳಿರುವುದನ್ನು ಗಮನಿಸಿದ್ದ ಅವರು, ತೆಲಂಗಾಣದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಸಿ. ಸುವರ್ಣಾ ಅವರಿಗೆ ಮಾಹಿತಿ ನೀಡಿದ್ದರು. ಆ ಹಿನ್ನೆಲೆಯಲ್ಲಿ ಕೂಡಲೇ ಕಾರ್ಯಪ್ರವೃತ್ತವಾಗುವಂತೆ ಹಾಗೂ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಜಿಲ್ಲೆಯ ಅರಣ್ಯಾಧಿಕಾರಿಗಳಿಗೆ ಸುವರ್ಣಾ ಅವರು ಸೂಚಿಸಿದ್ದರು' ಎಂದು ವಿಕಾರಾಬಾದ್ ಜಿಲ್ಲಾ ಅರಣ್ಯಾಧಿಕಾರಿ ಜ್ಞಾನೇಶ್ವರ್ ಗುರುವಾರ ಪಿಟಿಐಗೆ ತಿಳಿಸಿದ್ದಾರೆ.
'ಅದರಂತೆ, ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಇಲಾಖೆ ಸಿಬ್ಬಂದಿ, ಹತ್ತಿರದಲ್ಲೇ ಇದ್ದ ಕ್ವಾರಿ ಮಾಲೀಕ ಲಕ್ಷ್ಮ ರೆಡ್ಡಿ ಕರೆಸಿ ಮಾತನಾಡಿದ್ದರು. ಅಪರೂಪದ ಪಕ್ಷಿ ಹಾಗೂ ಮೊಟ್ಟೆಗಳು ಇರುವ ಬಗ್ಗೆ ತಿಳಿಸಿದ್ದರು. ಮೊಟ್ಟೆಯೊಡೆದು ಮರಿಗಳು ಜನಿಸಿ, ಅವು ಹಾರುವಂತೆ ಆಗುವವರೆಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದರು. ಅಧಿಕಾರಿಗಳ ಮಾತಿಗೆ ಒಪ್ಪಿರುವ ರೆಡ್ಡಿ, ಕ್ವಾರಿಯಲ್ಲಿ ಕೆಲಸ ನಿಲ್ಲಿಸಿದ್ದಾರೆ. ಅಂದಿನಿಂದ, ಅರಣ್ಯ ಇಲಾಖೆ ಸಿಬ್ಬಂದಿ ಪ್ರತಿದಿನವೂ ಪಕ್ಷಿಯ ಮೇಲೆ ನಿಗಾ ಇಟ್ಟಿದ್ದಾರೆ' ಎಂದೂ ಜ್ಞಾನೇಶ್ವರ್ ಮಾಹಿತಿ ನೀಡಿದ್ದಾರೆ.
ಕೀಟಗಳು, ಇಲಿಗಳು ಸೇರಿದಂತೆ ಸಣ್ಣಪುಟ್ಟ ಜೀವಿಗಳನ್ನು ಬೇಟೆಯಾಡುವ ಈ ಗೂಬೆ, ಪ್ರಮುಖವಾಗಿ ಆಗ್ನೇಯ ಏಷ್ಯಾ ಭಾಗದಲ್ಲಿ ಕಾಣಸಿಗುತ್ತದೆ. ಬೇರೆ ಗೂಬೆಗಳಿಗೆ ಹೋಲಿಸಿದರೆ, ಇವು ಹೆಚ್ಚಾಗಿ ಕಲ್ಲಿನ ಪ್ರದೇಶಗಳಲ್ಲಿ ವಾಸಿಸುತ್ತವೆ ಎಂದಿದ್ದಾರೆ.
'ಈ ಗೂಬೆ ಅಪರೂಪದ ಪ್ರಭೇದ ಹೌದು. ಆದರೆ, ಅಳಿವಿನಂಚಿನಲ್ಲಿರುವ ಜೀವಿಯಲ್ಲ. ಆಗೊಮ್ಮೆ ಈಗೊಮ್ಮೆ ಕಾಣಸಿಗುತ್ತದೆಯಷ್ಟೇ' ಎಂದಿರುವ ಅಧಿಕಾರಿ, 'ಪಕ್ಷಿಯು ಯಾವಾಗ ಮೊಟ್ಟೆ ಇಟ್ಟಿದೆ ಎಂಬುದು ಗೊತ್ತಿಲ್ಲ. ಆದರೆ, ಇನ್ನು 15 ದಿನಗಳಲ್ಲಿ ಮರಿಗಳು ಹೊರಬರುವ ಸಾಧ್ಯತೆ ಇದೆ. ನಂತರ, 20–25 ದಿನಗಳವರೆಗೆ ಆರೈಕೆ ಮಾಡಿದರೆ, ಅವು ಹಾರಲು ಆರಂಭಿಸುತ್ತವೆ' ಎಂದು ಹೇಳಿದ್ದಾರೆ.
'ಯೆಂಕಥಲ ಹುಲ್ಲುಗಾವಲಿಗೆ ನವೆಂಬರ್ 30ರಂದು ಭೇಟಿ ನೀಡಿದ್ದೆ' ಎಂದಿರುವ ಮನೋಜ್ ಕುಮಾರ್, 'ಮೊಟ್ಟೆಗಳನ್ನು ಗಮನಿಸುತ್ತಿದ್ದಂತೆ, ಕ್ವಾರಿಯಲ್ಲಿದ್ದವರನ್ನು ಎಚ್ಚರಿಸಿ, ಕೆಲಸ ನಿಲ್ಲಿಸಿದ್ದೆ' ಎಂದು ತಿಳಿಸಿದ್ದಾರೆ.
ತೆಲಂಗಾಣ ಫೋಟೊಗ್ರಾಫಿಕ್ ಸೊಸೈಟಿಯ ಜಂಟಿ ಕಾರ್ಯದರ್ಶಿಯಾಗಿರುವ ಮನೋಜ್, 'ಕ್ವಾರಿ ಕೆಲಸ ನಿಲ್ಲಿಸದೇ ಇದ್ದರೆ, ಮೊಟ್ಟೆಗಳಿಗೆ ಹಾನಿಯಾಗುವ ಸಾಧ್ಯತೆ ಇತ್ತು' ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.