ಮೈಸೂರು: ಆರೋಗ್ಯಾಧಿಕಾರಿ ಕಚೇರಿಯಲ್ಲಿ ಗೂಢಚಾರರು! ಮೈಸೂರಿನ ಜಿಲ್ಲಾ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕಚೇರಿಯಲ್ಲಿ ಗೂಢಚಾರರು ಇದ್ದಾರೆ ಎಂದು ಸ್ವತಃ ಅಧಿಕಾರಿ ಗಳೇ ಶಂಕಿಸುತ್ತಾರೆ.
‘ಭ್ರೂಣದ ಲಿಂಗ ಪತ್ತೆ ಮಾಡುವ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ದಾಳಿಗೆ ಸಜ್ಜಾಗುತ್ತಿದ್ದಂತೆಯೇ ಈ ಮಾಹಿತಿಯು ಕೇಂದ್ರಗಳಿಗೆ ರವಾನೆಯಾಗುತ್ತಿತ್ತು. ಇದರಿಂದ ಕಳೆದ ಹಲವು ವರ್ಷಗಳಲ್ಲಿ ಯಾವುದೇ ಕೇಂದ್ರವೂ ಸಿಕ್ಕಿ ಬೀಳಲಿಲ್ಲ’ ಎಂದು ಹೆಸರು ಬಹಿರಂಗಗೊಳಿಸಲು ಇಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದರು.
‘ಕಳೆದ ಹಲವು ವರ್ಷ ಗಳಿಂದ ಇಲ್ಲಿಗೆ ಬಂದ ಅನೇಕ ಅಧಿಕಾರಿಗಳು ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ದಾಳಿ ನಡೆಸಿದಾಗ ಅಲ್ಲಿ ಯಾವುದೇ ರೋಗಿಗಳು ಇರುತ್ತಿರಲಿಲ್ಲ. ‘ಅನುಮಾನಕ್ಕೆ ಆಸ್ಪದವಾಗದಂತೆ ಬಹಳ ಸ್ವಚ್ಛವಾಗಿ ಇರುತ್ತಿದ್ದವು. ಆದರೆ, ಬೇರೆ ಸಮಯದಲ್ಲಿ ಅಲ್ಲಿ ಕಿಕ್ಕಿರಿದು ಜನರು ಇರುತ್ತಿದ್ದರು’ ಎಂಬುದನ್ನು ಅವರು ಬಹಿರಂಗಪಡಿಸಿದರು.
‘ದಾಳಿ ನಡೆಸುವ ರಹಸ್ಯ ಮಾಹಿತಿ ಯಾರಿಂದಲೋ ಸೋರಿಕೆಯಾಗುತ್ತಿತ್ತು. ಒಂದು ರೀತಿ ‘ಕಳ್ಳಗಿವಿ’ ಇತ್ತೇನೋ ಎಂದು ಭಾಸವಾಗುತ್ತದೆ. ಇದರಿಂದಾಗಿಯೇ ಯಾವುದೇ ಕೇಂದ್ರಕ್ಕೆ ಹೋದರೂ ನಮಗೆ ಸಾಕ್ಷ್ಯಗಳು ಸಿಗುತ್ತಿರಲಿಲ್ಲ’ ಎಂದರು.
ಮಾಹಿತಿ– ಕೆ.ಎಸ್. ಗಿರೀಶ್
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.