ನವದೆಹಲಿ: ಅತಿಥಿ ಶಿಕ್ಷಕರ ಹುದ್ದೆ ಕಾಯಂ ಮಾಡಿರುವ ಪಂಜಾಬ್ ಆಮ್ ಆದ್ಮಿ ಪಕ್ಷದ (ಎಎಪಿ) ಸರ್ಕಾರದ ಕ್ರಮಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಶನಿವಾರ ಮೆಚ್ಚುಗೆ ಸೂಚಿಸಿದ್ದಾರೆ. ಎಲ್ಲಾ ರಾಜ್ಯಗಳು ಈ ರೀತಿಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿರುವ ಕೇಜ್ರಿವಾಲ್,ಅತಿಥಿ ಶಿಕ್ಷಕರನ್ನು ಕಾಯಂ ಮಾಡುವ ಸಲುವಾಗಿ ಕಾಯ್ದೆ ಜಾರಿಗೊಳಿಸಲು ದೆಹಲಿ ಸರ್ಕಾರವೂ ಮುಂದಾಗಿತ್ತು. ಆದರೆ, ಕೇಂದ್ರ ಸರ್ಕಾರ ಅದಕ್ಕೆ ಅನುಮತಿ ನೀಡಲಿಲ್ಲ ಎಂದು ದೂರಿದ್ದಾರೆ.
ದೆಹಲಿಯಲ್ಲಿ ಶೈಕ್ಷಣಿಕ ಕ್ರಾಂತಿ ಸಾಧ್ಯವಾಗಲು ಅತಿಥಿ ಮತ್ತು ಕಾಯಂ ಶಿಕ್ಷಕರ ಕೊಡುಗೆ ಅಪಾರ ಎಂದು ಸ್ಮರಿಸಿರುವ ಅವರು,'ಸರ್ಕಾರಗಳು ಉದ್ಯೋಗ ಕಡಿತಗೊಳಿಸುತ್ತಿರುವ ಮತ್ತು ತಾತ್ಕಾಲಿಕ ನೆಮಕಾತಿ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ, ಪಂಜಾಬ್ ಮುಖ್ಯಮಂತ್ರಿ ಭಗವಂತ ಮಾನ್ ಅವರು 8,736 ಶಿಕ್ಷಕರನ್ನು ಕಾಯಂ ಗೊಳಿಸಿದ್ದಾರೆ. ಇದು ಇತರರಿಗೂ ಮಾದರಿಯಾಗಿದೆ' ಎಂದು ಶ್ಲಾಘಿಸಿದ್ದಾರೆ.
ಎಎಪಿಯ ರಾಷ್ಟ್ರೀಯ ಸಂಚಾಲಕರೂ ಆಗಿರುವ ಕೇಜ್ರಿವಾಲ್,'ನಮ್ಮ ಆರೋಗ್ಯ ಸಿಬ್ಬಂದಿ ದೆಹಲಿಯ ಆಸ್ಪತ್ರೆಗಳು ಮತ್ತು ಮೊಹಲ್ಲಾ ಕ್ಲಿನಿಕ್ಗಳಲ್ಲಿ ಚಮತ್ಕಾರ ಮಾಡಿದ್ದಾರೆ. ತಮ್ಮಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ತಾತ್ಕಾಲಿಕ ನೌಕರರನ್ನೂ ಕಾಯಂ ಮಾಡಿಕೊಳ್ಳುವಂತೆ ಎಲ್ಲ ಸರ್ಕಾರಗಳನ್ನೂ ಮನವಿ ಮಾಡುತ್ತೇನೆ. ಎಲ್ಲೆಲ್ಲಿ ನಾವು ಅಧಿಕಾರಕ್ಕೆ ಬರುತ್ತೇವೋ ಅಲ್ಲೆಲ್ಲಾ, ತಾತ್ಕಾಲಿಕ ನೌಕರರ ಹುದ್ದೆ ಕಾಯಂ ಗೊಳಿಸಲಾಗುವುದು ಎಂದು ಎಎಪಿ ಪರವಾಗಿ ನಾನು ಭರವಸೆ ನೀಡುತ್ತೇನೆ' ಎಂದೂ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.