
ಅಸಾದುದ್ದೀನ್ ಓವೈಸಿ ಮತ್ತು ಡೊನಾಲ್ಡ್ ಟ್ರಂಪ್
ನವದೆಹಲಿ: ಭಾರತ–ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದಿಂದಾಗಿ ದೇಶದ ಸಾರ್ವಭೌಮತ್ವಕ್ಕೆ ಧಕ್ಕೆಯಾಗಿದೆ ಎಂದು ಎಐಎಂಐಎಂನ ಅಸಾದುದ್ದೀನ್ ಓವೈಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ಅವರು, ‘ನಾವು ನೇರವಾಗಿ ಅಥವಾ ಪರೋಕ್ಷವಾಗಿ ರಷ್ಯಾದ ತೈಲವನ್ನು ಖರೀದಿಸಿದರೆ, ಭಾರತದಿಂದ ಆಮದಾಗುವ ಸರಕುಗಳ ಮೇಲೆ ಶೇಕಡ 25ರಷ್ಟು ಹೆಚ್ಚುವರಿ ಸುಂಕ ವಿಧಿಸುವ ಮೂಲಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಬ್ಬಾಳಿಕೆ ನಡೆಸಿದ್ದರು. ಈ ಧೋರಣೆ ಬಗ್ಗೆ ಕೇಂದ್ರ ಸರ್ಕಾರದ ಮೌನ ಸರಿಯಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
'ಅಲ್ಲೆಲ್ಲೋ (ಅಮೆರಿಕ) ಕುಳಿತುಕೊಂಡು ನಮಗೆ ನಿರ್ದೇಶಿಸುವ ಈ ‘ಬಿಳಿ ಚರ್ಮದ ವ್ಯಕ್ತಿ’ ಯಾರು?, ನಾವು ಯಾರಿಂದ ಬೇಕಾದರೂ ತೈಲವನ್ನು ಖರೀದಿಸುತ್ತೇವೆ. ನಮಗೆ ಹೇಳಲು ಅವರು (ಟ್ರಂಪ್) ಯಾರು?, ಭಾರತವು ಅಮೆರಿಕದ ಮುಂದೆ ಏಕೆ ತನ್ನನ್ನು ತಾನು ತಗ್ಗಿಸಿಕೊಳ್ಳುತ್ತಿದೆ?, ನಮ್ಮ ಸ್ವಾಭಿಮಾನ ಎಲ್ಲಿದೆ? ಈ ವಿಚಾರದಲ್ಲಿ ಕೇಂದ್ರ ಸರ್ಕಾರದ ಮೌನ ದುರದೃಷ್ಟಕರ’ ಎಂದು ಓವೈಸಿ ಗುಡುಗಿದ್ದಾರೆ.
‘ಐರೋಪ್ಯ ಒಕ್ಕೂಟ–ಭಾರತ ನಡುವಿನ ಒಪ್ಪಂದದಿಂದಾಗಿ ನಮ್ಮ ಉತ್ಪಾದನೆ ಆಧಾರಿತ ಉತ್ತೇಜನ (ಪಿಎಲ್ಐ) ಯೋಜನೆ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ ಕೇಂದ್ರ ಸರ್ಕಾರವು ಆಮದಾಗುವ ವೈದ್ಯಕೀಯ ಉಪಕರಣಗಳು, ಅತ್ಯಾಧುನಿಕ ಯಂತ್ರೋಪಕರಣಗಳ ಮೇಲಿನ ಸುಂಕವನ್ನು ಕಡಿತಗೊಳಿಸಿದೆ. ಇದರಿಂದಾಗಿ ನಮ್ಮ ಮಾರುಕಟ್ಟೆಗೆ ಅಮೆರಿಕದ ಕೈಗಾರಿಕಾ ಸರಕುಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತವೆ. ಇದರಿಂದಾಗಿ ದೇಶದ ಕೈಗಾರಿಕೋದ್ಯಮಕ್ಕೆ ಹೊಡೆತ ಬೀಳಲಿದೆ’ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ನಾವು ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕುತ್ತಿದ್ದೇವೆಯೇ ಅಥವಾ ಬಲವಂತದ ಖರೀದಿ ಆದೇಶಕ್ಕೆ ಸಹಿ ಹಾಕುತ್ತಿದ್ದೇವೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ನಾವು ಬಾಂಗ್ಲಾದೇಶಕ್ಕೆ ಶೇಕಡ 70ರಷ್ಟು ಕಚ್ಚಾ ಹತ್ತಿಯನ್ನು ಪೂರೈಸುತ್ತೇವೆ. ಆದರೆ, ಬಾಂಗ್ಲಾಕ್ಕೆ ಸುಂಕ ವಿನಾಯಿತಿ ನೀಡಿ ಹತ್ತಿಯನ್ನು ರಫ್ತು ಮಾಡುವುದಾಗಿ ಅಮೆರಿಕ ಹೇಳಿದೆ. ಇದರಿಂದಾಗಿ ಮಹಾರಾಷ್ಟ್ರದ ಭಿವಂಡಿ, ಮಾಲೆಗಾಂವ್ ಮತ್ತು ಬನಾರಸ್ನ ವಿದ್ಯುತ್ ಮಗ್ಗಗಳಿಗೆ ನಷ್ಟಕ್ಕೆ ಸಿಲುಕುತ್ತೇವೆ’ ಎಂದು ಜವಳಿ ಕ್ಷೇತ್ರದ ಮೇಲಿನ ಪರಿಣಾಮದ ಬಗ್ಗೆ ಓವೈಸಿ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.