
ಪಟ್ನಾ: ಬಿಹಾರ ವಿಧಾನಸಭಾ ಚುನವಾಣೆಯಲ್ಲಿ ಅಭೂತಪೂರ್ವ ಗೆಲುವಿನೆಡೆಗೆ ಎನ್ಡಿಎ ಮೈತ್ರಿಕೂಟ ಮುನ್ನಡೆ ಸಾಧಿಸಿದೆ. ಮತ್ತೊಂದೆಡೆ ಇದೇ ಮೈತ್ರಿಕೂಟದ ಭಾಗವಾಗಿರುವ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಸಾಧನೆ ಎಲ್ಲರ ಹುಬ್ಬೇರಿಸಿದೆ.
243 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬಿಹಾರದ ಪ್ರಸಕ್ತ ಚುನಾವಣೆಯಲ್ಲಿ ಐದು ಪಕ್ಷಗಳನ್ನು ಒಳಗೊಂಡಿರುವ ಎನ್ಡಿಎ ಮೈತ್ರಿಕೂಟದಲ್ಲಿ ಜೆಡಿಯು ಹಾಗೂ ಬಿಜೆಪಿ ತಲಾ 101 ಕ್ಷೇತ್ರಗಳನ್ನು ಹಂಚಿಕೊಂಡವು. ಆದರೆ ಇದೇ ಮೈತ್ರಿಕೂಟದ ಭಾಗವಾಗಿರುವ ಚಿರಾಗ್ ಪಾಸ್ವಾನ್ ತಮ್ಮ ಲೋಕ ಜನಶಕ್ತಿ ಪಾರ್ಟಿ (ರಾಮ್ ವಿಲಾಸ್) ಅಭ್ಯರ್ಥಿಗಳಿಗೆ 29 ಕ್ಷೇತ್ರಗಳನ್ನು ಪ್ರಯಾಸಪಟ್ಟು ಪಡೆದಿದ್ದರು. ಇದೀಗ ಫಲಿತಾಂಶ ಹೊರಬೀಳುತ್ತಿದ್ದು, 21 ಕ್ಷೇತ್ರಗಳಲ್ಲಿ ಆ ಪಕ್ಷದ ಅಭ್ಯರ್ಥಿಗಳು ಮುನ್ನಡೆ ಕಾಯ್ದುಕೊಂಡು ಅಚ್ಚರಿ ಮೂಡಿಸಿದ್ದಾರೆ. ಆ ಮೂಲಕ ಶೇ 75ರಷ್ಟು ಗೆಲುವಿನ ಪ್ರಮಾಣವನ್ನು ಆ ಪಕ್ಷ ಹೊಂದಿದಂತಾಗಲಿದೆ.
2024ರ ಲೋಕಸಭಾ ಚುನಾವಣೆಯಲ್ಲಿ ಇದೇ ಪಕ್ಷ ಐದು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಅಷ್ಟೂ ಕ್ಷೇತ್ರಗಳನ್ನು ಗೆದ್ದುಕೊಂಡಿತ್ತು. 2020ರಲ್ಲಿ ನಿತೀಶ್ ಕುಮಾರ್ ಜತೆಗಿನ ಭಿನ್ನಾಭಿಪ್ರಾಯದಿಂದಾಗಿ ಮೂಲ ಎಲ್ಜೆಪಿಯು ಸ್ವತಂತ್ರವಾಗಿ ಸ್ಪರ್ಧಿಸಿತ್ತು. ಸ್ಪರ್ಧಿಸಿದ್ದ 130ರಲ್ಲಿ ಕೇವಲ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ಸಾಧಿಸಿತ್ತು. ಆದರೆ ಮತಗಳಿಕೆ ಉತ್ತಮವಾಗಿತ್ತು. ಕೆಲವೆಡೆ ಜೆಡಿಯು ಗೆಲುವನ್ನು ಕಸಿದುಕೊಳ್ಳುವಲ್ಲೂ ಯಶಸ್ವಿಯಾಯಿತು.
ತಂದೆ ರಾಮವಿಲಾಸ್ ಪಾಸ್ವಾನ್ ಅವರ ವರ್ಚಸ್ಸು ಅವರ ಪುತ್ರ ಚಿರಾಗ್ ಅವರಿಗೆ ಬರಲು ಸಾಧ್ಯವಿಲ್ಲ ಎಂದೇ ಕೆಲ ರಾಜಕೀಯ ಪಂಡಿತರು ಹೇಳಿದ್ದರು. 2021ರಲ್ಲಿ ಚಿರಾಗ್ ಅವರ ಚಿಕ್ಕಪ್ಪ ಪಶುಪತಿ ಕುಮಾರ್ ಪಾರಸ್ ಅವರು ಪಕ್ಷ ತನಗೆ ಸೇರಿದ್ದು ಎಂದು ಎಂದಾಗ, 43 ವರ್ಷದ ಚಿರಾಗ್ ಹೊಸ ಪಕ್ಷವನ್ನು ಕಟ್ಟಿದರು.
ತಮ್ಮನ್ನು ‘ಯುವ ಬಿಹಾರಿ‘ ಎಂದು ಕರೆದುಕೊಳ್ಳುವ ಅವರು ಪಕ್ಷದ ಮೂಲವಾದ ದಲಿತರ ಹಿತಕ್ಕೆ ಬದ್ಧರಾಗಿದ್ದಾರೆ. ಅವರ ಪರಿಶ್ರಮಕ್ಕೆ ಸಿಕ್ಕ ಮೊದಲ ಜಯವೇ 2024ರ ಲೋಕಸಭಾ ಚುನಾವಣೆ. ಆ ಚುನಾವಣೆಯ ಶೇ 100ರಷ್ಟು ಫಲಿತಾಂಶ ಅವರ ಆತ್ಮವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸಿತ್ತು.
ಒಟ್ಟು 243 ಕ್ಷೇತ್ರಗಳಲ್ಲಿ 20 ಕ್ಷೇತ್ರಗಳನ್ನು ನೀಡುವ ಭರವಸೆಯನ್ನು ಎನ್ಡಿಎ ನೀಡಿತು. ಆಗ ಚಿರಾಗ್ ಅವರು ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಾರ್ಟಿಯೊಂದಿಗೆ ಚರ್ಚೆ ನಡೆಸಿದರು. ತಮ್ಮನ್ನು ಹಗುರವಾಗಿ ಪರಿಗಣಿಸದಿರಿ ಎಂಬ ಸಂದೇಶವನ್ನೂ ರವಾನಿಸಿದ್ದರು. ಈ ಚೌಕಾಸಿಯಲ್ಲಿ ಅವರಿಗೆ 29 ಕ್ಷೇತ್ರಗಳನ್ನು ನೀಡಲು ಎನ್ಡಿಎ ಮುಂದಾಯಿತು.
ತಾವು ಉಪಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿ ಎಂದು ಚುನಾವಣೆ ಪೂರ್ವದಲ್ಲೇ ಚಿರಾಗ್ ಪಾಸ್ವಾನ್ ಹೇಳಿದ್ದರು. ಇದು ಪಕ್ಷದ ಕಾರ್ಯಕರ್ತರ ಅಭಿಲಾಷೆಯೂ ಹೌದು ಎಂದಿದ್ದರು.
‘2025ರಲ್ಲಿ ಮುಖ್ಯಮಂತ್ರಿ ಹುದ್ದೆ ಖಾಲಿ ಇರುವುದಿಲ್ಲ. ಆದರೆ ಪಕ್ಷದ ಕಾರ್ಯಕರ್ತರ ಭಾವನೆಗಳಿಗೆ ನಾನು ಗೌರವ ನೀಡಬೇಕು. ಪಕ್ಷದ ನಾಯಕನಿಗೆ ಗರಿಷ್ಠ ಹುದ್ದೆ ಲಭಿಸಬೇಕು ಎಂಬ ಮಹತ್ವಾಕಾಂಕ್ಷೆಯನ್ನು ನಾನು ಒಪ್ಪುತ್ತೇನೆ. ಒಂದೊಮ್ಮೆ ಪಕ್ಷದ ಕಾರ್ಯಕರ್ತರು ಹಾಗೆ ಆಲೋಚಿಸುತ್ತಿಲ್ಲವೆಂದರೆ, ಅವರನ್ನು ಹುರುದುಂಬಿಸುವಲ್ಲಿ ನಾಯಕ ವಿಫಲನಾಗಿದ್ದಾನೆ ಎಂದೇ ಅರ್ಥ’ ಎಂದು ಹಿಂದೆ ಎನ್ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಚಿರಾಗ್ ಹೇಳಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.