ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದ ಮೈಕ್ರೊಸಾಪ್ಟ್ ಸಿಇಒ ಸತ್ಯ ನಾದೆಲ್ಲ ಅವರ ವಿರುದ್ಧ ಬಿಜೆಪಿ ಹರಿಹಾಯ್ದಿದೆ.
ಅಕ್ಷರಸ್ಥರು ವಿದ್ಯಾವಂತರಾಗಬೇಕು ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ ಎಂದು ಟ್ವೀಟ್ ಮಾಡಿರುವ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು, ‘ಅಕ್ಷರಸ್ಥರು ವಿದ್ಯಾವಂತರಾಗಬೇಕು ಎಂಬುದಕ್ಕೆ ಇದು ಸ್ಪಷ್ಟ ನಿದರ್ಶನ. ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಅವಕಾಶಗಳನ್ನು ನೀಡುವುದು ಪೌರತ್ವ ತಿದ್ದುಪಡಿ ಕಾಯ್ದೆಯ ನಿಖರ ಕಾರಣ. ಅಮೆರಿಕಾದಲ್ಲಿ ಯಾಜಿದಿಗಳ ಬದಲಿಗೆ ಸಿರಿಯಾ ಮುಸ್ಲಿಮರಿಗೆ ಇಂತಹ ಅವಕಾಶಗಳನ್ನು ನೀಡಿದರೆ ಹೇಗಾಗುತ್ತದೆ’ ಎಂದು ಪ್ರಶ್ನಿಸಿದ್ದಾರೆ.
ಇರಾಕ್, ಸಿರಿಯಾ ಮತ್ತು ಟರ್ಕಿಯಲ್ಲಿ ನೆಲೆಸಿರುವ, ಸಣ್ಣ ಜನಸಂಖ್ಯೆ ಹೊಂದಿರುವ ಯಾಜಿದಿಗಳನ್ನು ಗುರಿಯಾಗಿಸಿ ಐಎಸ್ ಉಗ್ರವಾದಿ ಸಂಘಟನೆ ಹಲವು ದಾಳಿಗಳನ್ನು ನಡೆಸಿತ್ತು.
ಪೌರತ್ವ ತಿದ್ದುಪಡಿ ಕಾಯ್ದೆಗೆ ಸಂಬಂಧಿಸಿದಂತೆ ಭಾರತದಲ್ಲಿ ನಡೆಯುತ್ತಿರುವ ಬೆಳವಣಿಗೆ ಕುರಿತು ಮೈಕ್ರೊಸಾಫ್ಟ್ನ ಭಾರತೀಯ ಮೂಲದ ಸಿಇಒ ಸತ್ಯ ನಾದೆಲ್ಲಾ (52) ಕಳವಳ ವ್ಯಕ್ತಪಡಿಸಿದ್ದರು. ‘ಪ್ರಸ್ತುತ ನಡೆಯುತ್ತಿರುವ ಬೆಳವಣಿಗೆ ವಿಷಾದಕರವಾದುದು. ಬಾಂಗ್ಲಾದೇಶದ ವಲಸಿಗನೊಬ್ಬ ಭಾರತದಲ್ಲಿ ಬಹುರಾಷ್ಟ್ರೀಯ ಕಂಪನಿ ಮುನ್ನಡೆಸುವುದನ್ನು ಕಾಣಲು ಬಯಸುತ್ತೇನೆ. ಅದು ಅಲ್ಲಿನ ಆರ್ಥಿಕತೆಗೂ ಅನುಕೂಲಕರವಾಗುತ್ತದೆ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.