ಸಲ್ಮಾನ್ ಖಾನ್
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಹತ್ಯೆಗೆ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಸಂಚು ರೂಪಿಸಿದೆ ಎಂಬ ಆರೋಪದಲ್ಲಿ ಕಳೆದ ವರ್ಷ ಬಂಧನಕ್ಕೊಳಗಾಗಿದ್ದ ಇಬ್ಬರಿಗೆ ಬಾಂಬೆ ಹೈಕೋರ್ಟ್ ಶುಕ್ರವಾರ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳಾದ ಗೌರವ್ ಭಾಟಿಯಾ ಅಲಿಯಾಸ್ ಸಂದೀಪ್ ಬಿಷ್ಣೋಯಿ ಹಾಗೂ ವಾಸ್ಪಿ ಮೆಹ್ಮುದ್ ಖಾನ್ ಅವರು ಜಾಮೀನು ಕೋರಿ ಮಾಡಿದ್ದ ಮನವಿಯನ್ನು ನ್ಯಾಯಮೂರ್ತಿ ಎನ್.ಆರ್. ಬೋರ್ಕರ್ ಅವರು ಮಾನ್ಯ ಮಾಡಿದ್ದಾರೆ.
ಆದೇಶದ ಪೂರ್ಣ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.
ಇವರಿಬ್ಬರು ಇತರ ಆರೋಪಿಗಳೊಂದಿಗೆ, ಮುಂಬೈ ಸಮೀಪದ ಪನ್ವೆಲ್ನಲ್ಲಿರುವ ಸಲ್ಮಾನ್ ಅವರ ಫಾರ್ಮ್ ಹೌಸ್, ಬಾಂದ್ರಾದಲ್ಲಿರುವ ಮನೆ ಹಾಗೂ ಚಿತ್ರೀಕರಣದ ಸ್ಥಳಗಳಿಗೆ ಭೇಟಿ ನೀಡಿದ್ದರು ಎಂದು ನವಿ ಮುಂಬೈ ಪೊಲೀಸರು ಕಳೆದ ವರ್ಷ ಹೇಳಿದ್ದರು. ಅದರಂತೆ, ಬಿಷ್ಣೋಯಿ ಗ್ಯಾಂಗ್ನ 18 ಸದಸ್ಯರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಬಾಂದ್ರಾದಲ್ಲಿ ಸಲ್ಮಾನ್ ವಾಸವಿರುವ ವಸತಿ ಸಮುಚ್ಚಯದ ಹೊರಗೆ ಬಿಷ್ಣೋಯಿ ಗ್ಯಾಂಗ್ನ ಇಬ್ಬರು 2024ರ ಏಪ್ರಿಲ್ನಲ್ಲಿ ಗುಂಡು ಹಾರಿಸಿದ್ದರು.
ವಿವಿಧ ಪ್ರಕರಣಗಳನ್ನು ಎದುರಿಸುತ್ತಿರುವ ಲಾರೆನ್ಸ್ ಬಿಷ್ಣೋಯಿ ಸದ್ಯ ಅಹಮದಾಬಾದ್ನ ಜೈಲಿನಲ್ಲಿದ್ದಾನೆ. ಸದ್ಯ ತಲೆ ಮರೆಸಿಕೊಂಡಿರುವ ಬಿಷ್ಣೋಯಿ ಸಹೋದರ ಅನ್ಮೋಲ್, ಸಂಪತ್ ನೆಹ್ರಾ, ಗೋಲ್ಡೀ ಬ್ರಾರ್ ಸೇರಿದಂತೆ ಹಲವರ ಹೆಸರನ್ನು ಸಲ್ಮಾನ್ ಹತ್ಯೆ ಸಂಚು ಪ್ರಕರಣ ಸಂಬಂಧ ದಾಖಲಾಗಿರುವ ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.