.jpg?w=900&q=70&auto=format,compress)
ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಕಂಚು ಗೆದ್ದ ಸ್ವಪ್ನಿಲ್ಗೆ ₹1 ಕೋಟಿ ಬಹುಮಾನ ಘೋಷಿಸಿದ ಸಿಎಂ ಶಿಂದೆ
ಮುಂಬೈ: ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಶೂಟಿಂಗ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಸ್ವಪ್ನಿಲ್ ಕುಸಳೆ ಅವರಿಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ₹1 ಕೋಟಿ ಬಹುಮಾನ ಘೋಷಣೆ ಮಾಡಿದ್ದಾರೆ.
ಕುಸಳೆ ಅವರು 50 ಮೀಟರ್ ಶೂಟಿಂಗ್ ವಿಭಾಗದಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಕಂಚಿನ ಪದಕ ಗೆದ್ದಿದ್ದಾರೆ. ಈ ಮೂಲಕ ಈ ಬಾರಿಯ ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಮೂರು ಪದಕಗಳು ಒಲಿದಂತಾಗಿದೆ.
ಕುಸಳೆ ಅವರ ತಂದೆ ಮತ್ತು ತರಬೇತುದಾರರೊಂದಿಗೆ ಸಿಎಂ ಮಾತುಕತೆ ನಡೆಸಿದ್ದಾರೆ, ಜತೆಗೆ ಕುಸಳೆ ಅವರಿಗೆ ವಿಡಿಯೊ ಕಾಲ್ ಮಾಡಿ ಅಭಿನಂದಿಸಿದ್ದಾರೆ. ‘ಈ ವೇಳೆ ಮಾತನಾಡಿದ ಅವರು, ಕುಸಳೆ ಅವರಿಗೆ ₹1 ಕೋಟಿ ಬಹುಮಾನ ಘೋಷಣೆ ಮಾಡಲಾಗಿದೆ. ಒಲಿಂಪಿಕ್ಸ್ನಿಂದ ಆಗಮಿಸಿದ ಬಳಿಕ ಅವರನ್ನು ಅಭಿನಂದಿಸಲಾಗುವುದು’ ಎಂದರು.
‘ಮಹಾರಾಷ್ಟ್ರದ ಕೊಲ್ಹಾಪುರದ ಮೂಲದ ಸ್ವಪ್ನಿಲ್ ಕುಸಳೆ ಅವರು ಕ್ರೀಡಾ ಲೋಕದಲ್ಲಿ ಸಾಧನೆ ಮಾಡಿ ದೇಶಕ್ಕೆ ಕೀರ್ತಿ ತಂದಿರುವುದು ಹೆಮ್ಮೆಯ ಸಂಗತಿ’ ಎಂದು ಹೇಳಿದರು.
ರೈಲ್ವೆ ಟಿಕೆಟ್ ಕಲೆಕ್ಟರ್ ಸ್ವಪ್ನಿಲ್
ಮಹಾರಾಷ್ಟ್ರದ ಕೊಲ್ಹಾಪುರದ ಕಂಬಳವಾಡಿ ಗ್ರಾಮದ ಸ್ವಪ್ನಿಲ್ ಕುಸಳೆ ಮತ್ತು ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಅವರಿಬ್ಬರಲ್ಲಿಯೂ ಕೆಲವು ಸಾಮ್ಯತೆಗಳಿವೆ.
ಸ್ವಪ್ನಿಲ್ ಅವರೂ ಧೋನಿಯಂತೆಯೇ ರೈಲ್ವೆ ಟಿಕೆಟ್ ನಿರೀಕ್ಷಕರಾಗಿ ಕಾರ್ಯನಿರ್ವಹಿಸಿದ್ದರು. ಆದರೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಕ್ರಿಕೆಟಿಗನಾಗುವ ಗುರಿಯೊಂದಿಗೆ ಧೋನಿ ನೌಕರಿ ತ್ಯಜಿಸಿದರು. ಧೋನಿಯವರ ಬಯೋಪಿಕ್ ಅನ್ನು ಪದೇ ಪದೇ ವೀಕ್ಷಿಸಿದ ಸ್ವಪ್ನಿಲ್ ಕೂಡ ಪೂರ್ಣಪ್ರಮಾಣದಲ್ಲಿ ಶೂಟಿಂಗ್ ಗೆ ಸಮರ್ಪಿಸಿಕೊಂಡರು. ಧೋನಿಯವರಂತೆ ಶಾಂತ ಮತ್ತು ಸಮಚಿತ್ತ ಇರುವ ಸ್ವಪ್ನಿಲ್ ಒಲಿಂಪಿಕ್ಸ್ನಲ್ಲಿ ಈಗ ಪದಕ ಜಯಿಸಿದ ಸಂಭ್ರಮದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.