ಕಾಂಗ್ರೆಸ್
ನವದೆಹಲಿ: ಪಕ್ಷದ ಐತಿಹಾಸಿಕ ಹಲವು ದಾಖಲೆಗಳು ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಸುಲಭವಾಗಿ ಸಿಗುವಂತೆ ಕಾಂಗ್ರೆಸ್ ಡಿಜಿಟಲೀಕರಣವನ್ನು ಕೈಗೆತ್ತಿಕೊಂಡಿದೆ.
ಎಐಸಿಸಿ ಅಧಿವೇಶನಗಳ ದಾಖಲೆಗಳಿಂದ ಹಿಡಿದು 1952ರಲ್ಲಿ ನಡೆದ ಮೊದಲ ಲೋಕಸಭಾ ಚುನಾವಣೆಯ ಪ್ರಣಾಳಿಕೆ, ಇದೀಗ ಸ್ಥಗಿತಗೊಂಡಿರುವ ‘ಸಮಾಜವಾದಿ ಭಾರತ’ ವಾರಪತ್ರಿಕೆಯ ಸಂಚಿಕೆಗಳು ಹಾಗೂ ಪಕ್ಷದ ಅಧ್ಯಕ್ಷರ ಭಾಷಣಗಳನ್ನು ಇತಿಹಾಸದ ಭಾಗವಾಗಿ ಸಂರಕ್ಷಿಸಲು ಡಿಜಿಟಲೀಕರಣಕ್ಕೆ ಮುಂದಾಗಿದೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಳೆದ ಶುಕ್ರವಾರ ಪಕ್ಷದ ಪ್ರಧಾನ ಕಚೇರಿ ಇಂದಿರಾ ಭವನದಲ್ಲಿ ಉದ್ಘಾಟಿಸಿದ ಡಾ. ಮನಮೋಹನ್ ಸಿಂಗ್ ಸಂಶೋಧನಾ ಕೇಂದ್ರ ಮತ್ತು ಗ್ರಂಥಾಲಯದಲ್ಲಿ ಡಿಜಿಟಲೀಕರಣ ಕಾರ್ಯ ನಡೆಯಲಿದೆ.
ಸ್ವಾತಂತ್ರ್ಯಾ ನಂತರ ದೇಶದಲ್ಲಿ ಜರುಗಿದ ಪ್ರತಿ ಲೋಕಸಭಾ ಚುನಾವಣೆಯ ಫಲಿತಾಂಶ ವರದಿಗಳು ಈಗಾಗಲೇ ನೂತನ ಗ್ರಂಥಾಲಯದಲ್ಲಿ ಭೌತಿಕ ರೂಪದಲ್ಲಿದ್ದು, ಇವುಗಳು ಸಹ ಡಿಜಿಟಲೀಕರಣಗೊಳ್ಳಲಿವೆ.
ಮಹಾತ್ಮ ಗಾಂಧಿ, ಜವಾಹರಲಾಲ್ ನೆಹರೂ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸರ್ದಾರ್ ವಲ್ಲಭಭಾಯಿ ಪಟೇಲ್, ನೇತಾಜಿ ಸುಭಾಷ್ ಚಂದ್ರ ಬೋಸ್, ಮೌಲಾನಾ ಅಬುಲ್ ಕಲಾಂ ಆಜಾದ್ ಮತ್ತು ಪಿ.ವಿ. ನರಸಿಂಹರಾವ್ ಅವರಿಗೆ ಮೀಸಲಾಗಿರುವ ಪ್ರತ್ಯೇಕ ವಿಭಾಗಗಳೊಂದಿಗೆ ಸುಮಾರು 1,200 ಪುಸ್ತಕಗಳನ್ನು ಹೊಂದಿರುವ ಸುಸಜ್ಜಿತ ಗ್ರಂಥಾಲಯವನ್ನು ನಿರ್ವಹಿಸಬಲ್ಲ ಪರಿಣತ ಗ್ರಂಥಪಾಲಕರು ಹಾಗೂ ಪತ್ರಾಗಾರ ಪಾಲಕರನ್ನು ಕಾಂಗ್ರೆಸ್ ಶೋಧಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.