ADVERTISEMENT

ಸಂಸತ್ ಭವನ ಸ್ಫೋಟಿಸುವ ಬೆದರಿಕೆ: ಮಾಜಿ ಶಾಸಕನ ಬಂಧಿಸಿದ ದೆಹಲಿ ಪೊಲೀಸರು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಸೆಪ್ಟೆಂಬರ್ 2022, 16:22 IST
Last Updated 19 ಸೆಪ್ಟೆಂಬರ್ 2022, 16:22 IST
ಸಂಸತ್ ಭವನ (ಸಂಗ್ರಹ ಚಿತ್ರ)
ಸಂಸತ್ ಭವನ (ಸಂಗ್ರಹ ಚಿತ್ರ)   

ನವದೆಹಲಿ: ಸಂಸತ್ ಭವನವನ್ನು ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ ಆರೋಪದಲ್ಲಿ ಸಮಾಜವಾದಿ ಪಕ್ಷದ ಮಾಜಿ ಶಾಸಕ ಕಿಶೋರ್ ಸಮ್‌ರೀತೆ ಅವರನ್ನು ದೆಹಲಿ ಪೊಲೀಸರು ಭೋಪಾಲದಲ್ಲಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

‘ಮಾಜಿ ಶಾಸಕ ಕಿಶೋರ್ ಸಮ್‌ರೀತೆ ಅವರನ್ನು ದೆಹಲಿ ಪೊಲೀಸ್ ಅಪರಾಧ ದಳ ಭೋಪಾಲದಲ್ಲಿ ಬಂಧಿಸಿದೆ. ಜಿಲೆಟಿನ್ ಕಡ್ಡಿಗಳು ಹಾಗೂ ರಾಷ್ಟ್ರ ಧ್ವಜ ಇದ್ದ ಪೊಟ್ಟಣವನ್ನು ಅವರು ಸಂಸತ್ ಭವನಕ್ಕೆ ಕಳುಹಿಸಿಕೊಟ್ಟಿದ್ದರು. ತಮ್ಮ ಬೇಡಿಕೆಗಳನ್ನು ಸೆಪ್ಟೆಂಬರ್ 30ರ ಒಳಗೆ ಈಡೇರಿಸದಿದ್ದರೆ ಸಂಸತ್ ಭವನವನ್ನು ಸ್ಫೋಟಿಸುವುದಾಗಿ ಬೆದರಿಕೆಯೊಡ್ಡಿದ್ದರು. ಈ ಕುರಿತು ಪ್ರಕರಣ ದಾಖಲಿಸಲಾಗಿದೆ’ ಎಂದು ‘ಎಎನ್‌ಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಮಾಜಿ ಶಾಸಕ ಕಿಶೋರ್ ಅವರನ್ನು ಮಧ್ಯಪ್ರದೇಶದ ಭೋಪಾಲದ ಕೋಲಾರದಲ್ಲಿರುವ ಅವರ ನಿವಾಸದಿಂದ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅವರನ್ನು ಸ್ಥಳೀಯ ನ್ಯಾಯಾಲಯಕ್ಕೆ ಹಾಜರುಪಡಿಸಿ ರಿಮಾಂಡ್ ಮೇಲೆ ದೆಹಲಿಗೆ ಕರೆದೊಯ್ದಿದ್ದಾರೆ ಎಂದು ಭೋಪಾಲದ ಹೆಚ್ಚುವರಿ ಪೊಲೀಸ್ ಆಯುಕ್ತ ಸಚಿನ್ ಅತುಲ್ಕರ್ ಹೇಳಿರುವುದಾಗಿ ‘ಪಿಟಿಐ’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.