ನವದೆಹಲಿ: ದೆಹಲಿಯ ದ್ವಾರಕಾ ಪ್ರದೇಶದ ಮೂರು ಶಾಲೆಗಳಿಗೆ ಇಂದು (ಸೋಮವಾರ) ಬಾಂಬ್ ಬೆದರಿಕೆ ಇ-ಮೇಲ್ಗಳು ಬಂದಿರುವ ವಿಚಾರವಾಗಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಬಿಜೆಪಿಯ ‘ನಾಲ್ಕು ಎಂಜಿನ್’ ಸರ್ಕಾರವು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಕೇಜ್ರಿವಾಲ್ ಗುಡುಗಿದ್ದಾರೆ.
‘ದೆಹಲಿ ಪಬ್ಲಿಕ್ ಸ್ಕೂಲ್ ಸೇರಿದಂತೆ ದ್ವಾರಕಾದ ಹಲವು ಶಾಲೆಗಳಿಗೆ ಇಂದು ಮತ್ತೊಮ್ಮೆ ಬಾಂಬ್ ಬೆದರಿಕೆ ಇ-ಮೇಲ್ಗಳು ಬಂದಿವೆ. ದೆಹಲಿಯ ಶಾಲೆಗಳಿಗೆ ಪದೇ ಪದೇ ಬಾಂಬ್ ಬೆದರಿಕೆಗಳು ಬರುತ್ತಿವೆ. ಆದರೆ, ಇದುವರೆಗೆ ತಪ್ಪಿತಸ್ಥರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಕೇಜ್ರಿವಾಲ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ದೆಹಲಿಯನ್ನು ಅಭಿವೃದ್ಧಿಪಥದತ್ತ ಕೊಂಡೊಯ್ಯಲು ಅಥವಾ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಬಿಜೆಪಿಗೆ ಸಾಧ್ಯವಿಲ್ಲ. ‘ನಾಲ್ಕು ಎಂಜಿನ್ ಸರ್ಕಾರ’ ಎಂದು ಕರೆಯುವ ಬಿಜೆಪಿ ಸರ್ಕಾರವು ದೆಹಲಿಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ’ ಎಂದು ಅವರು ಕಿಡಿಕಾರಿದ್ದಾರೆ.
ಶಾಲೆಗಳಿಗೆ ಬಾಂಬ್ ಬೆದರಿಕೆ ಬಂದಿರುವ ವಿಚಾರವಾಗಿ ಎಎಪಿ ಹಿರಿಯ ನಾಯಕಿ ಆತಿಶಿ ಪ್ರತಿಕ್ರಿಯಿಸಿದ್ದು, ‘ದೆಹಲಿಯಲ್ಲಿ ಮಕ್ಕಳು ಮತ್ತು ಪೋಷಕರು ಭಯದಲ್ಲಿ ಬದುಕುತ್ತಿದ್ದಾರೆ’ ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
‘ಶಾಲೆಗಳಿಗೆ ಬೆದರಿಕೆಗಳ ಸರಣಿ ನಿಲ್ಲುತ್ತಿಲ್ಲ. ಮತ್ತೊಮ್ಮೆ ದೆಹಲಿಯ ಶಾಲೆಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ದೆಹಲಿ ಪೊಲೀಸರು ಏನು ಮಾಡುತ್ತಿದ್ದಾರೆ?, ಮಕ್ಕಳು ಮತ್ತು ಪೋಷಕರು ಭಯದಲ್ಲಿ ಬದುಕುತ್ತಿದ್ದಾರೆ. ಆದರೆ, ನಾಲ್ಕು ಎಂಜಿನ್ ಸರ್ಕಾರ ಎಂದು ಕರೆಯುತ್ತಿರುವ ಬಿಜೆಪಿಯು, ಜನರಿಗೆ ಭದ್ರತೆ ಒದಗಿಸಲು ವಿಫಲವಾಗಿದೆ’ ಎಂದು ಆತಿಶಿ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ಕೇಂದ್ರ, ದೆಹಲಿ, ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ಸೇರಿದಂತೆ ಲೆಫ್ಟಿನೆಂಟ್ ಗವರ್ನರ್ ಕಚೇರಿಯನ್ನು ಬಿಜೆಪಿ ನಿಯಂತ್ರಿಸುವುದನ್ನು ಉಲ್ಲೇಖಿಸಿ ಎಎಪಿ ನಾಯಕರು ‘ನಾಲ್ಕು ಎಂಜಿನ್’ ಸರ್ಕಾರ ಎಂಬ ಪದವನ್ನು ಬಳಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.