ಮುಂಬೈ: ಐಷಾರಾಮಿ ಹಡಗಿನಲ್ಲಿ ಡ್ರಗ್ಸ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಶಾರುಕ್ ಖಾನ್ ಅವರ ಮಗ ಆರ್ಯನ್ ಖಾನ್ (23), ಇಂದು ಮಾದಕ ದ್ರವ್ಯ ನಿಯಂತ್ರಣ ಮಂಡಳಿಯ (ಎನ್ಸಿಬಿ) ಮುಂದೆ ಹಾಜರಾದರು.
ಪ್ರತಿ ಶುಕ್ರವಾರ ಬೆಳಿಗ್ಗೆ 11ರಿಂದ ಮಧ್ಯಾಹ್ನ 2ರ ನಡುವೆ ಆರ್ಯನ್ ಖಾನ್, ಎನ್ಸಿಬಿಯ ತನಿಖಾಧಿಕಾರಿಯ ಮುಂದೆ ಹಾಜರಿರಬೇಕು ಹಾಗೂ ತನಿಖೆಗೆ ಸಹಕರಿಸಬೇಕು. ಬಾಂಬೆ ಹೈಕೋರ್ಟ್ ಆರ್ಯನ್ ಮತ್ತು ಇತರೆ ಆರೋಪಿಗಳಿಗೆ ಜಾಮೀನು ಮಂಜೂರು ಮಾಡುವಾಗ ವಿಧಿಸಿರುವ ಷರತ್ತುಗಳಲ್ಲಿ ಇದೂ ಒಳಗೊಂಡಿದೆ.
ಮುಂಬೈನ ಜೈಲಿನಲ್ಲಿ 22 ದಿನ ಕಳೆದಿದ್ದ ಆರ್ಯನ್, ಅಕ್ಟೋಬರ್ 30ರಂದು ಜಾಮೀನಿನ ಮೇಲೆ ಹೊರ ಬಂದರು. ಹೈಕೋರ್ಟ್ ನೀಡಿರುವ ಐದು ಪುಟಗಳ ಜಾಮೀನು ಆದೇಶದಲ್ಲಿ ಒಟ್ಟು 14 ಷರತ್ತುಗಳನ್ನು ವಿಧಿಸಿದೆ. ಪಾಸ್ಪೋರ್ಟ್ ಅನ್ನು ಎನ್ಡಿಪಿಎಸ್ ವಿಶೇಷ ನ್ಯಾಯಾಲಯದ ವಶಕ್ಕೆ ನೀಡುವುದು, ಸಾಕ್ಷಿಗಳ ಮೇಲೆ ಪ್ರಭಾವ ಬೀರುವಂತಿಲ್ಲ ಅಥವಾ ಇತರೆ ಆರೋಪಿಗಳನ್ನು ಸಂಪರ್ಕಿಸ ಬಾರದು ಹಾಗೂ ಪ್ರತಿ ವಾರವೂ ಎನ್ಸಿಬಿ ಕಚೇರಿಯಲ್ಲಿ ಹಾಜರಿರಬೇಕು ಎಂಬ ಷರತ್ತುಗಳಿವೆ.
ಈ ಯಾವುದೇ ಷರತ್ತುಗಳ ಪಾಲನೆಯಲ್ಲಿ ಉಲ್ಲಂಘನೆಯಾದರೆ, ಜಾಮೀನು ರದ್ದು ಪಡಿಸುವಂತೆ ಕೋರಿ ಎನ್ಸಿಬಿ ಮನವಿ ಸಲ್ಲಿಸಲು ಅವಕಾಶವಿದೆ ಎಂದು ಬಾಂಬೆ ಹೈಕೋರ್ಟ್ ಹೇಳಿದೆ.
ಇನ್ನಷ್ಟು ಓದು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.