ADVERTISEMENT

ದೆಹಲಿಯಲ್ಲಿ ಭಾರಿ ಮಳೆ: ನೀರಿನಲ್ಲೇ ಕುಳಿತು ಪ್ರತಿಭಟನೆ ನಡೆಸಿದ ರಾಕೇಶ್ ಟಿಕಾಯತ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಸೆಪ್ಟೆಂಬರ್ 2021, 3:55 IST
Last Updated 12 ಸೆಪ್ಟೆಂಬರ್ 2021, 3:55 IST
ರಾಕೇಶ್ ಟಿಕಾಯತ್‌ ಅವರು ಗಾಜಿಪುರದಲ್ಲಿ ಜಲಾವೃತವಾದ ಫ್ಲೈ ಓವರ್ ಬಳಿ ಮಳೆ ನೀರಿನಲ್ಲಿ ಕುಳಿತು ಧರಣಿ ನಡೆಸಿದ್ದಾರೆ. –ಪಿಟಿಐ ಚಿತ್ರ
ರಾಕೇಶ್ ಟಿಕಾಯತ್‌ ಅವರು ಗಾಜಿಪುರದಲ್ಲಿ ಜಲಾವೃತವಾದ ಫ್ಲೈ ಓವರ್ ಬಳಿ ಮಳೆ ನೀರಿನಲ್ಲಿ ಕುಳಿತು ಧರಣಿ ನಡೆಸಿದ್ದಾರೆ. –ಪಿಟಿಐ ಚಿತ್ರ   

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಿರಂತರವಾಗಿ ಸುರಿದ ಭಾರಿ ಮಳೆಯಿಂದಾಗಿ ಹಲವೆಡೆ ಮನೆಗಳಿಗೆ ನೀರು ನುಗ್ಗಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಇದರ ನಡುವೆ ಭಾರತೀಯ ಕಿಸಾನ್‌ ಯೂನಿಯನ್‌ (ಬಿಕೆಯು) ನಾಯಕ ರಾಕೇಶ್ ಟಿಕಾಯತ್‌ ಅವರು ಬೆಂಬಲಿಗರೊಂದಿಗೆ ಗಾಜಿಪುರದಲ್ಲಿ ಜಲಾವೃತವಾದ ಫ್ಲೈ ಓವರ್ ಬಳಿ ಮಳೆ ನೀರಿನಲ್ಲಿ ಕುಳಿತು ಧರಣಿ ನಡೆಸಿದ್ದಾರೆ.

ಶನಿವಾರ ಸುರಿದ ಮಳೆಯಿಂದಾಗಿ ದೆಹಲಿ –ಉತ್ತರ ಪ್ರದೇಶ ಗಡಿ ಪ್ರದೇಶದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಟೆಂಟ್‌ಗಳು ಹಾನಿಗೊಳಗಾಗಿವೆ.

ADVERTISEMENT

ರಾಕೇಶ್ ಟಿಕಾಯತ್‌ ಅವರು ನೀರು ತುಂಬಿರುವ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮುಂದುವರಿಸಿದ್ದಾರೆ. ಪ್ರತಿಭಟನಾ ಸ್ಥಳದಲ್ಲಿ ಮಳೆ ನೀರು ಮತ್ತು ಚರಂಡಿಗಳನ್ನು ಸ್ವಚ್ಛಗೊಳಿಸಬೇಕು ಎಂದು ನಾವು ಒತ್ತಾಯಿಸುತ್ತಿದ್ದೇವೆ. ಆದರೆ, ಸಂಬಂಧಪಟ್ಟ ಅಧಿಕಾರಿಗಳು ಇದರ ಗಮನ ಹರಿಸುತ್ತಿಲ್ಲ’ ಎಂದು ಬಿಕೆಯುನ ಮಾಧ್ಯಮ ಉಸ್ತುವಾರಿ ಧರ್ಮೇಂದ್ರ ಮಲಿಕ್ ಆರೋಪಿಸಿದ್ದಾರೆ.

‘ಈಗ ಪ್ರತಿಭಟಿಸುತ್ತಿರುವ ರೈತರು ಎಲ್ಲಾ ಮೂರು ಋತುಗಳನ್ನು (ಚಳಿಗಾಲ, ಬೇಸಿಗೆ ಮತ್ತು ಮಳೆ) ನೋಡಿದ್ದಾರೆ. ನಾವು ಈಗ ಯಾವುದಕ್ಕೂ ಹೆದರುವುದಿಲ್ಲ’ ಮಲಿಕ್ ಹೇಳಿದ್ದಾರೆ.

ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಹರಿಯಾಣ, ಪಂಜಾಬ್‌, ಉತ್ತರಪ್ರದೇಶ ಸೇರಿದಂತೆ ಹಲವು ರಾಜ್ಯಗಳ ರೈತರು ದೆಹಲಿಯ ಗಡಿ ಪ್ರದೇಶಗಳಲ್ಲಿ ಕಳೆದ ನವೆಂಬರ್‌ನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಪ್ರತಿಭಟನಾಕಾರರೊಂದಿಗೆ ಕೇಂದ್ರ ಸರ್ಕಾರ ಈಗಾಗಲೇ 11 ಬಾರಿ ಮಾತುಕತೆ ನಡೆಸಿದ್ದು, ಯಾವುದೇ ಪ್ರಯೋಜನವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.