ADVERTISEMENT

'ಪಾಕ್‍ಗೆ ಹರಿಯುವ ನೀರನ್ನು ತಡೆಗಟ್ಟುವ ನಿರ್ಧಾರ ತೆಗೆದುಕೊಳ್ಳಬೇಕಾದವರು ಮೋದಿ'

ಏಜೆನ್ಸೀಸ್
Published 22 ಫೆಬ್ರುವರಿ 2019, 10:22 IST
Last Updated 22 ಫೆಬ್ರುವರಿ 2019, 10:22 IST
   

ನವದೆಹಲಿ: ಜಮ್ಮು ಕಾಶ್ಮೀರದ ಮೂಲಕ ಪಾಕಿಸ್ತಾನಕ್ಕೆ ಹರಿಯುತ್ತಿರುವ ನದಿ ನೀರಿಗೆ ತಡೆಯೊಡ್ಡುವ ಬಗ್ಗೆ ಅಂತಿಮ ತೀರ್ಮಾನ ಪ್ರಧಾನಿನರೇಂದ್ರ ಮೋದಿಯವರದ್ದಾಗಿರುತ್ತದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಎಎನ್‍ಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಗಡ್ಕರಿ ಈ ಮಾತನ್ನು ಹೇಳಿದ್ದಾರೆ.ಭಾರತದ ಮಾಜಿ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು ಪಾಕಿಸ್ತಾನದೊಂದಿಗೆ ಉತ್ತಮ ಬಾಂಧವ್ಯ ಬೆಳೆಸುವ ನಿಟ್ಟಿನಲ್ಲಿ ಪಾಕಿಸ್ತಾನದ ಅಧ್ಯಕ್ಷ ಆಯೂಬ್ ಖಾನ್ ಜತೆ ಇಂಡಸ್ ವಾಟರ್ ಟ್ರೀಟಿ (ಐಡಬ್ಲ್ಯುಟಿ) ಗೆ ಸಹಿ ಹಾಕಿದ್ದರು. ಆದರೆ ಭಯೋತ್ಪಾದನೆಗೆ ಬೆಂಬಲ ನೀಡುವ ಮೂಲಕ ಪಾಕಿಸ್ತಾನ ಈ ಬಾಂಧವ್ಯವನ್ನು ಹಾಳು ಮಾಡಿದೆ.

ಎರಡು ದೇಶಗಳ ನಡುವಿನ ಸಾಮರಸ್ಯ ಮತ್ತು ಸಹಕಾರಕ್ಕಾಗಿಆಯೂಬ್ ಖಾನ್ ಮತ್ತು ಪಂಡಿತ್ ಜವಾಹರ್ ಲಾಲ್ ನೆಹರೂ ಈ ಒಪ್ಪಂದಕ್ಕೆ ಸಹಿ ಮಾಡಿದ್ದರು.ಒಬ್ಬ ಹಿರಿಯ ಸಹೋದರನ ಭಾವನೆಯಲ್ಲಿ ಪಂಡಿತ್ ನೆಹರೂ ಈ ನದಿಗಳ ನೀರನ್ನು ಅವರಿಗೆ (ಪಾಕ್) ನೀಡಿದ್ದರು.ಆದರೆ ಪಾಕಿಸ್ತಾನ ಈ ಬಾಂಧವ್ಯವನ್ನು ಹಾಳು ಮಾಡಿದೆ.ಭಯೋತ್ಪಾದನೆಗೆ ಬೆಂಬಲ ನೀಡುವ ಮೂಲಕ ಮತ್ತು ಭಯೋತ್ಪಾದನೆ ಮಾಡುವ ಮೂಲಕ ಪಾಕಿಸ್ತಾನ ಈ ಸಂಬಂಧವನ್ನು ಹಾಳು ಮಾಡಿಕೊಂಡಿದೆ ಎಂದು ಗಡ್ಕರಿ ಹೇಳಿದ್ದಾರೆ.

ADVERTISEMENT

ಪುಲ್ವಾಮ ದಾಳಿ ನಂತರ ದೇಶದ ಜನರು ಸಿಟ್ಟಿನಲ್ಲಿದ್ದಾರೆ. ಪಾಕಿಸ್ತಾನಕ್ಕೆ ಒಂದು ಹನಿ ನೀರು ಕೂಡಾ ಕೊಡಬಾರದು ಎಂದು ಅವರು ಹೇಳುತ್ತಿದ್ದಾರೆ, ಆದಾಗ್ಯೂ,ಈ ರೀತಿಯ ನಿರ್ಧಾರ ತೆಗೆದುಕೊಳ್ಳುವುದು ನನ್ನ ಇಲಾಖೆಯ ವ್ಯಾಪ್ತಿಗೆ ಬರುವುದಿಲ್ಲ.ಈ ಬಗ್ಗೆ ಸರ್ಕಾರ, ಪ್ರಧಾನಿ ನರೇಂದ್ರ ಮೋದಿಯವರೇ ನಿರ್ಧಾರ ತೆಗೆದುಕೊಳ್ಳಬೇಕು ಎಂದಿದ್ದಾರೆ.

1960 ರಲ್ಲಿ ಭಾರತ ಮತ್ತು ಪಾಕಿಸ್ತಾನ ಇಂಡಸ್ ವಾಟರ್ಸ್ ಟ್ರೀಟಿಗೆ ಸಹಿ ಹಾಕಿದ್ದವು. ಈ ಒಪ್ಪಂದದ ಪ್ರಕಾರ ಇಂಡಸ್ (ಸಿಂಧೂ), ಝೇಲಂ, ಚೆನಾಬ್, ಬಿಯಾಸ್, ರಾವಿ ಮತ್ತು ಸಟ್ಲೇಜ್ ನದಿಗಳನ್ನು ಪಶ್ಚಿಮ ಮತ್ತು ಪೂರ್ವ ನದಿಗಳಾಗಿ ವಿಂಗಡಿಸಲಾಗಿತ್ತು. ಭಾರತ, ಪೂರ್ವ ನದಿಗಳಾದ ಬೀಸ್, ರಾವಿ ಮತ್ತು ಸಟ್ಲೇಜ್ ನದಿಗಳ ನೀರು ಬಳಕೆ ಮಾಡಿದರೆ ಇನ್ನುಳಿದ ನದಿಗಳ ನೀರನ್ನು ಪಾಕಿಸ್ತಾನ ಬಳಸುವುದಕ್ಕಾಗಿರುವ ಒಪ್ಪಂದ ಇದಾಗಿತ್ತು.

ಭಯೋತ್ಪಾದನೆಗೆ ನಿರಂತರ ಬೆಂಬಲ ನೀಡುತ್ತಿರುವ ಪಾಕಿಸ್ತಾನದ ವಿರುದ್ದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ. ಪಾಕಿಸ್ತಾನಕ್ಕೆ ನೀರು ಹಂಚಿಕೆಯಾಗುತ್ತಿರುವ ಯಾವ ಜಾಗದಲ್ಲಿ ಅದನ್ನು ತಡೆದು ನಿಲ್ಲಿಸಬಹುದು ಎಂಬುದರ ಬಗ್ಗೆ ಟೆಕ್ನಿಕಲ್ ಡಿಸೈನ್ ಸಿದ್ಧಪಡಿಸಲು ನಾನು ನನ್ನ ಇಲಾಖೆಗೆ ಹೇಳಿದ್ದೇನೆ.ಪಾಕಿಸ್ತಾನದವರು ಭಯೋತ್ಪಾದನೆ ಮತ್ತು ಭಯೋತ್ಪಾದಕರಿಗೆ ಬೆಂಬಲ ನೀಡುವುದನ್ನ ಮುಂದುವರಿಸುತ್ತಾ ಇದ್ದು ನಾವು ಅವರ ಜತೆ ಉತ್ತಮ ಬಾಂಧವ್ಯ ಹೊಂದಿದ್ದರೆ ಮಾನವೀಯತೆ ಎಂಬುದಕ್ಕೆ ಇಲ್ಲಿ ಬೆಲೆ ಇರುವುದಿಲ್ಲ.

ಪಾಕಿಸ್ತಾನ ಭಯೋತ್ಪಾದನೆಯನ್ನು ನಿಲ್ಲಿಸಬೇಕು ಇಲ್ಲದೇ ಇದ್ದರೆ ಪಾಕಿಸ್ತಾನಕ್ಕೆ ಹರಿಯುವ ನೀರನ್ನು ನಾವು ನಿಲ್ಲಿಸುತ್ತೇವೆ.ಇದಕ್ಕೆ ಪಾಕಿಸ್ತಾನ ಬೆಲೆ ತೆರಬೇಕಾಗಿ ಬರುತ್ತದೆ.ಆದರೆ ಈ ನಿರ್ಧಾರ ನನ್ನ ಇಲಾಖೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಗಡ್ಕರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.