ಮುಂಬೈ: ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯು ಅಕ್ಟೋಬರ್ 5 ರಂದು ಕೇಂದ್ರ ಮುಂಬೈನ ಶಿವಾಜಿ ಪಾರ್ಕ್ ಮೈದಾನದಲ್ಲಿ ವಾರ್ಷಿಕ ದಸರಾ ರ್ಯಾಲಿ ನಡೆಸಲು ಬಾಂಬೆ ಹೈಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.
ದಸರಾ ರ್ಯಾಲಿಗೆ ಅನುಮತಿ ನಿರಾಕರಿಸಿದ ಬೃಹನ್ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ಆದೇಶವನ್ನು ಪ್ರಶ್ನಿಸಿ ಠಾಕ್ರೆ ನೇತೃತ್ವದ ಶಿವಸೇನಾ ಬಣ ಮತ್ತು ಪಕ್ಷದ ಕಾರ್ಯದರ್ಶಿ ಅನಿಲ್ ದೇಸಾಯಿ ಅವರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿಗಳಾದ ಆರ್. ಡಿ. ಧನುಕಾ ಮತ್ತು ಕಮಲ್ ಖಾತಾ ಅವರ ವಿಭಾಗೀಯ ಪೀಠವು ಅಂಗೀಕರಿಸಿತು.
ಅನುಮತಿ ನಿರಾಕರಿಸಿದ ಬಿಎಂಸಿ ಆದೇಶವು ‘ಕಾನೂನಿನ ಪ್ರಕ್ರಿಯೆಯ ಸ್ಪಷ್ಟ ದುರುಪಯೋಗ ಮತ್ತು ಅಪ್ರಾಮಾಣಿಕವಾದದ್ದು’ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಅಕ್ಟೋಬರ್ 2 ರಿಂದ 6 ರವರೆಗೆ ಶಿವಾಜಿ ಪಾರ್ಕ್ ಮೈದಾನವನ್ನು ದಸರಾ ರ್ಯಾಲಿಗೆ ಬಳಸಬಹುದು ಎಂದು ಹೇಳಿರುವ ನ್ಯಾಯಪೀಠವು, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಂತೆ ಠಾಕ್ರೆ ಬಣಕ್ಕೆ ಸೂಚಿಸಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂದೆ ನೇತೃತ್ವದ ಶಿವಸೇನಾ ಬಣದ ಶಾಸಕ ಸದಾ ಸರ್ವಾಂಕರ್ ಅವರು ಇದೇ ರೀತಿಯ ಅರ್ಜಿ ಸಲ್ಲಿಸಿರುವುದರಿಂದ ಅನುಮತಿ ನಿರಾಕರಿಸುತ್ತಿರುವುದಾಗಿ ಸೆಪ್ಟೆಂಬರ್ 21 ರಂದು ಬಿಎಂಸಿ ಹೇಳಿತ್ತು ಮತ್ತು ಯಾವುದೋ ಒಂದು ಬಣಕ್ಕೆ ಮಾತ್ರ ಅನುಮತಿ ನೀಡಿದರೆ ಅದು ಕಾನೂನು ಸುವ್ಯವಸ್ಥೆ ಸಮಸ್ಯೆಗೆ ಕಾರಣವಾಗುತ್ತದೆ ಎಂದು ಹೇಳಿತ್ತು.
ಇವುಗಳನ್ನೂ ಓದಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.