ADVERTISEMENT

ಹಿಂದಿ ನಮ್ಮ ಮಾತೃಭಾಷೆಯಲ್ಲ, ನಮ್ಮನ್ನು ಕೆರಳಿಸಬೇಡಿ: ಎಂಎನ್‌ಎಸ್ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2019, 12:10 IST
Last Updated 3 ಜೂನ್ 2019, 12:10 IST
ರಾಜ್ ಠಾಕ್ರೆ
ರಾಜ್ ಠಾಕ್ರೆ   

ಮುಂಬೈ: ತ್ರಿಭಾಷಾ ಸೂತ್ರದ ಅನ್ವಯ ಹಿಂದಿ ಭಾಷೆಯನ್ನು ಕಡ್ಡಾಯವಾಗಿ ಬೋಧಿಸುವ ಕೇಂದ್ರದ ಪ್ರಸ್ತಾವನೆ ಬಗ್ಗೆ ಪ್ರತಿಕ್ರಿಯಿಸಿದ ರಾಜ್ ಠಾಕ್ರೆ ನಾಯಕತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ, ಹಿಂದಿ ನಮ್ಮ ಮಾತೃಭಾಷೆ ಅಲ್ಲ ಎಂದು ಹೇಳಿದೆ.

ಹಿಂದಿ ಭಾಷೆ ನಮ್ಮ ಮಾತೃಭಾಷೆ ಅಲ್ಲ, ನಮ್ಮ ಮೇಲೆ ಹೇರಿಕೆ ಮಾಡಿ ನಮ್ಮನ್ನು ಕೆರಳಿಸಬೇಡಿ ಎಂದು ಎಂಎನ್‌ಎಸ್ ರಾಜ್ಯ ನಾಯಕ ಮತ್ತು ವಕ್ತಾರ ಅನಿಲ್ ಶಿದೋರ್ ಹೇಳಿರುವುದಾಗಿ ಎಂಎನ್‌ಎಸ್ ಟ್ವೀಟಿಸಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಕರಡುವಿನಲ್ಲಿ ತ್ರಿಭಾಷಾ ಸೂತ್ರವನ್ನು ಪ್ರತಿಪಾದಿಸಲಾಗಿದೆ. ಈ ಕರಡು ನೀತಿಯನ್ನು ಶುಕ್ರವಾರ ಬಿಡುಗಡೆ ಮಾಡಲಾಗಿದೆ. ತ್ರಿಭಾಷಾ ಸೂತ್ರದ ಭಾಗವಾಗಿ ಹಿಂದಿ ಹೇರಿಕೆಯ ವಿರುದ್ಧ ತಮಿಳುನಾಡು ರಾಜಕಾರಣಿಗಳು ಭಾರಿ ಅಕ್ರೋಶ ವ್ಯಕ್ತಪಡಿಸಿದ್ದರು.

ADVERTISEMENT

ದಕ್ಷಿಣ ಭಾರತದಲ್ಲಿ ಹಿಂದಿ ಹೇರಿಕೆ ವಿರುದ್ಧ ಕಾವು ಏರುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರ ಯಾರ ಮೇಲೂ ಹಿಂದಿ ಭಾಷೆ ಹೇರಿಕೆ ಮಾಡುವ ಉದ್ದೇಶ ನಮಗಿಲ್ಲ ಎಂದಿದೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಬಗ್ಗೆ ವರದಿ ಮಾತ್ರ ಸಲ್ಲಿಸಿದ್ದು, ಈ ಬಗ್ಗೆ ಸರ್ಕಾರ ನಿರ್ಧಾರ ತೆಗೆದುಕೊಂಡಿಲ್ಲ. ಸರ್ಕಾರ ಈ ಬಗ್ಗೆ ತೀರ್ಮಾನ ಕೈಗೊಂಡಿದೆ ಎಂದು ಹೇಳುವುದು ಸತ್ಯಕ್ಕೆ ದೂರವಾದ ಮಾತು ಎಂದು ಮಾಹಿತಿ ಮತ್ತು ಪ್ರಸಾರಾಂಗ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಸಾರ್ವಜನಿಕರಿಂದ ಪ್ರತಿಕ್ರಿಯೆ ಸ್ವೀಕರಿಸಿದ ನಂತರವೇ ಅದು ಸರ್ಕಾರದ ಮುಂದಿರಿಸಲಾಗುತ್ತದೆ.ವಿಶೇಷವಾಗಿ ಮೋದಿ ಸರ್ಕಾರ ಎಲ್ಲ ಭಾರತೀಯ ಭಾಷೆಗಳಿಗೆ ಪ್ರೋತ್ಸಾಹ ನೀಡಿದೆ.ಹಾಗಾಗಿ ಯಾರ ಮೇಲೂಯಾವುದೇ ಭಾಷೆಯನ್ನು ಹೇರುವ ಉದ್ದೇಶ ನಮಗಿಲ್ಲ.ಎಲ್ಲ ಭಾರತೀಯ ಭಾಷೆಗಳನ್ನು ಪ್ರೋತ್ಸಾಹಿಸಲು ನಾವು ಬಯಸುತ್ತೇವೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.