ADVERTISEMENT

ಪ್ರವಾಹ: ಕಣ್ಮರೆಯಾದವರು ಬದುಕಿರುವ ಸಾಧ್ಯತೆ ಕ್ಷೀಣ- ರಾಜ್ಯ ವಿಪತ್ತು ಸ್ಪಂದನಾ ಪಡೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2022, 14:11 IST
Last Updated 10 ಜುಲೈ 2022, 14:11 IST
ಅಮರನಾಥದ ಗುಹೆ ದೇಗುಲದ ಬಳಿ ಹಠಾತ್‌ ಉಂಟಾದ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದಿರುವ ಕಲ್ಲು, ಮಣ್ಣನ್ನು ಐಟಿಬಿಪಿ ತಂಡ ತೆರವುಗೊಳಿಸಿತು –ಪಿಟಿಐ ಚಿತ್ರ
ಅಮರನಾಥದ ಗುಹೆ ದೇಗುಲದ ಬಳಿ ಹಠಾತ್‌ ಉಂಟಾದ ಪ್ರವಾಹದಲ್ಲಿ ಕೊಚ್ಚಿಕೊಂಡು ಬಂದಿರುವ ಕಲ್ಲು, ಮಣ್ಣನ್ನು ಐಟಿಬಿಪಿ ತಂಡ ತೆರವುಗೊಳಿಸಿತು –ಪಿಟಿಐ ಚಿತ್ರ   

ಶ್ರೀನಗರ:ದಕ್ಷಿಣ ಕಾಶ್ಮೀರದ ಹಿಮಾಲಯದಲ್ಲಿನ ಪವಿತ್ರ ಗುಹಾ ದೇಗುಲ ಅಮರನಾಥ ಕ್ಷೇತ್ರದಲ್ಲಿ ಹಠಾತ್‌ ಉಂಟಾದ ಪ್ರವಾಹದಲ್ಲಿ ಕಣ್ಮರೆಯಾದವರು ಜೀವಂತವಾಗಿ ಉಳಿದಿರುವ ಭರವಸೆ ಕ್ಷೀಣಗೊಂಡಿದೆ. ಹಾಗಿದ್ದರೂ ಸೇನೆ ಮತ್ತು ವಿವಿಧ ಇಲಾಖೆಗಳ ರಕ್ಷಣಾ ತಂಡಗಳು ಕಾರ್ಯಾಚರಣೆಯನ್ನು ತೀವ್ರಗೊಳಿಸಿವೆ.

‘ಪ್ರವಾಹದ ರಭಸದಿಂದ ಸ್ಥಳದಲ್ಲಿ ಸಂಗ್ರಹವಾಗಿರುವ ಅವಶೇಷಗಳನ್ನು ಸಿಬ್ಬಂದಿ ತೆರವುಗೊಳಿಸುತ್ತಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಶ್ವಾನ ದಳ ಗುರುತಿಸಿದ ಸ್ಥಳಗಳಲ್ಲಿ ಅವಶೇಷಗಳನ್ನು ತೆರವು ಮಾಡಲಾಗಿದೆ. ಬದುಕುಳಿದವರನ್ನು ರಕ್ಷಿಸುವ ವಿಶ್ವಾಸವಿದೆ. ಆದರೆ, ಅವಶೇಷಗಳಡಿ ಬದುಕುಳಿದಿದ್ದರೆ ಅದು ಪವಾಡವೇ ಸರಿ. ಕಾಣೆಯಾದವರು ಜೀವಂತವಿರುವ ಸುಳಿವು ಈವರೆಗೆ ಸಿಕ್ಕಿಲ್ಲ. ಘಟನಾ ಸ್ಥಳದಲ್ಲಿ ಹೊಸದಾಗಿ ಯಾವುದೇ ಮೃತ ದೇಹವೂ ಪತ್ತೆಯಾಗಿಲ್ಲ’ಎಂದು ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್‌ಡಿಆರ್‌ಎಫ್‌) ಅಧಿಕಾರಿಗಳು ಹೇಳಿದ್ದಾರೆ.

ಪ್ರವಾಹದಿಂದ ಹಾನಿಗೀಡಾಗಿರುವ ಅಮರನಾಥದ ಯಾತ್ರಾ ಮಾರ್ಗವನ್ನು ಪುನರ್‌ಸ್ಥಾಪಿಸಲು ಸೇನೆ ಬೃಹತ್‌ ಯಂತ್ರಗಳ ಮೊರೆಹೋಗಿದೆ. ಆದರೆ, ಪ್ರತಿಕೂಲ ಹವಾಮಾನ, ಯಾತ್ರೆಯ ಮಾರ್ಗದ ಪುನರ್‌ಸ್ಥಾಪನೆಯ ಕೆಲಸಕ್ಕೆ ಅಡಚಣೆ ಉಂಟುಮಾಡುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.