ನರೇಂದ್ರ ಮೋದಿ
1. ಸ್ವಾತಂತ್ರ್ಯ ಹೋರಾಟಗಾರ ಹಾಗೂ ಬಿಜೆಪಿ ಮುಖಂಡ ಡಾ. ಶ್ಯಾಮ ಪ್ರಸಾದ್ ಮುಖರ್ಜಿಗೆ ನಮನ
ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಪ್ರತಿಯೊಬ್ಬ ಹೋರಾಟಗಾರ ತ್ಯಾಗ ಹಾಗೂ ಬಲಿದಾನದಿಂದಾಗಿ ಇಂದು ದೇಶ ಉತ್ತಮ ಸ್ಥಿತಿಯಲ್ಲಿದೆ. ಹೋರಾಟದಲ್ಲಿ ಪಾಲ್ಗೊಂಡಿದ್ದ ಡಾ. ಶ್ಯಾಮ ಪ್ರಸಾದ ಮುಖರ್ಜಿ ಅವರಿಗೆ ವಿಶೇಷ ಗೌರವವನ್ನು ಮೋದಿ ಸಲ್ಲಿಸಿದ್ದಾರೆ. ‘ದೂರದೃಷ್ಟಿಯ ನಾಯಕರಾಗಿದ್ದ ಡಾ. ಮುಖರ್ಜಿ ಅವರು ದೇಶದ ಐಕ್ಯತೆ ಮತ್ತು ಸಮಗ್ರತೆಗೆ ಒತ್ತು ನೀಡಿದವರು. ಹಿಂದಿನ ನಾಯಕರ ಮಾರ್ಗದರ್ಶನ ಭಾರತದ ವರ್ತಮಾನ ಹಾಗೂ ಭವಿಷ್ಯಕ್ಕೆ ದಾರಿದೀಪವಾಗಿದೆ’ ಎಂದರು.
2. ಆಪರೇಷನ್ ಸಿಂಧೂರದ ಯಶಸ್ಸು ಮತ್ತು ರಾಷ್ಟ್ರದ ರಕ್ಷಣಾ ವ್ಯವಸ್ಥೆಯ ಬಲ
ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರವು ರಾಷ್ಟ್ರದ ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯ ಪ್ರದರ್ಶನಕ್ಕೆ ಉತ್ತಮ ವೇದಿಕೆ ಕಲ್ಪಿಸಿತು. ಭದ್ರತೆ ಮತ್ತು ಸಾರ್ವಭೌಮತ್ವದ ವಿಷಯದಲ್ಲಿ ದೇಶದ ಬದ್ಧತೆಯನ್ನು ಪ್ರಧಾನಿ ಮತ್ತೊಮ್ಮೆ ಒತ್ತಿ ಹೇಳಿದರು. ಭವಿಷ್ಯದಲ್ಲಿ ಎದುರಾಗಬಹುದಾದ ಎಂಥದ್ದೇ ಸವಾಲನ್ನು ಸಮರ್ಥವಾಗಿ ಎದುರಿಸಲು ಈ ಯುದ್ಧದ ಯಶಸ್ಸು ಬಲ ತುಂಬಿದೆ ಎಂದ ಅವರು, ಇನ್ನಷ್ಟು ಅತ್ಯಾಧುನಿಕ ಶಸ್ತ್ರಾಸ್ತಗಳನ್ನು ಹೊಂದುವ ಮೂಲಕ ಸೇನೆಯನ್ನು ಮತ್ತಷ್ಟು ಬಲಪಡಿಸುವಲ್ಲಿ ಸರ್ಕಾರದ ಗುರಿಯನ್ನು ಪುನರುಚ್ಚರಿಸಿದರು.
ದೇಶದ ನೀರಿನ ಭದ್ರತೆ ಮತ್ತು ಮೂಲಸೌಕರ್ಯಗಳ ಸುಸ್ಥಿರ ನಿರ್ವಹಣೆಗೆ ಭಾರತ ಸದಾ ಬದ್ಧ. ಭಾರತ ಮತ್ತು ಪಾಕಿಸ್ತಾನದ ನದಿ ನೀರಿನ ಸಂಬಂಧದಲ್ಲಿ ಸಿಂಧೂ ಜಲ ಒಪ್ಪಂದವು ಮೂಲಾಧಾರವಾಗಿ ಉಳಿದಿದೆ. ರಾಷ್ಟ್ರದ ಹಿತಾಸಕ್ತಿಗೆ ಪೂರಕವಾಗಿಯೇ ಭಾರತವು ಅಂತರರಾಷ್ಟ್ರೀಯ ಒಪ್ಪಂದಗಳನ್ನು ಮಾಡಿಕೊಳ್ಳಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
4. ಆಧುನಿಕ ತಂತ್ರಜ್ಞಾನ ಮತ್ತು ಮೇಡ್ ಇನ್ ಇಂಡಿಯಾ ಸೆಮಿಕಂಡಕ್ಟರ್ ಚಿಪ್
ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ದಾಪುಗಾಲಿಡುತ್ತಿರುವುದನ್ನು ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದರು. ಅದರಲ್ಲೂ ಎಲೆಕ್ಟ್ರಾನಿಕ್, ರಕ್ಷಣೆ ಮತ್ತು ಸಂಪರ್ಕ ಕ್ಷೇತ್ರದಲ್ಲಿ ಸೆಮಿಕಂಡಕ್ಟರ್ ಉದ್ಯಮದ ಬೆಳವಣಿಗೆಯನ್ನು ಒತ್ತಿ ಹೇಳಿದರು. ‘ಮೇಡ್ ಇನ್ ಇಂಡಿಯಾ ಚಿಪ್’ ಮೂಲಕ ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲೂ ಭಾರತ ಸ್ವಾವಲಂಬಿಯಾಗಲಿದೆ. ಆ ಮೂಲಕ ಅನ್ಯ ರಾಷ್ಟ್ರಗಳ ಮೇಲಿನ ಅವಲಂಬನೆಯನ್ನು ತಗ್ಗಿಸಿಕೊಂಡು ಸ್ವದೇಶಿ ಉತ್ಪಾದನೆ ಆರಂಭವಾಗಲಿದೆ ಎಂದಿದ್ದಾರೆ.
5. ಇಂಧನ, ಪರಮಾಣು ಇಂಧನ ಕ್ಷೇತ್ರದಲ್ಲಿ ಬೆಳವಣಿಗೆ
ಶುದ್ಧ ಇಂಧನ ಉತ್ಪಾದನೆಯಲ್ಲಿ ನವೀಕರಿಸಬಹುದಾದ ಇಂಧನದ ಗುರಿಯನ್ನು 2025ರಲ್ಲೇ ಶೇ 50ರಷ್ಟನ್ನು ಭಾರತ ಸಾಧಿಸಿದೆ. ಸರ್ಕಾರವು ತನ್ನ ಹೂಡಿಕೆಯನ್ನು ಪರಮಾಣು ಇಂಧನ, ಸೌರ, ಪವನ ಹಾಗೂ ಇತರ ಪರಿಸರ ಸ್ನೇಹಿ ತಂತ್ರಜ್ಞಾನಗಳತ್ತ ಗಮನ ಹರಿಸಿದೆ. ಆ ಮೂಲಕ ಜಾಗತಿಕ ತಾಪಮಾನ ತಗ್ಗಿಸುವಲ್ಲಿ ಸುಸ್ಥಿರ ಅಭಿವೃದ್ಧಿಗೆ ಭಾರತ ಒತ್ತು ನೀಡಿದೆ ಎಂದಿದ್ದಾರೆ.
6. ಸಾಗರಾಳದಲ್ಲಿ ಸಂಪನ್ಮೂಲ ಅನ್ವೇಷಣೆಗೆ ಸಮುದ್ರಮಂಥನ
ಸಾಗರಾಳದಲ್ಲಿ ತೈಲ, ಅನಿಲ ಹಾಗೂ ಇನ್ನಿತರ ಖನಿಜಗಳ ನಿಕ್ಷೇಪ ಪತ್ತೆಗೆ ಸಮುದ್ರಮಂಥನ ಯೋಜನೆ ಭಾರತದ ಗುರಿಯಾಗಿದೆ. ಇದರಿಂದ ದೇಶದ ಇಂಧನ ಸ್ವಾವಲಂಬನೆ ಸಾಧ್ಯವಾಗಲಿದೆ. ಸಂಪನ್ಮೂಲ ಭದ್ರತೆಯೂ ಖಾತ್ರಿಯಾಗಲಿದೆ ಮತ್ತು ಕೈಗಾರಿಕೆಗಳ ಬೆಳವಣಿಗೆಯೂ ಸಾಧ್ಯವಾಗಲಿದೆ.
7. ಮಂಗಳಯಾನ ಸಹಿತ ಬಾಹ್ಯಾಕಾಶ ತಂತ್ರಜ್ಞಾನ ವಿಸ್ತರಣೆ
ಮಂಗಳಯಾನ ಹಾಗೂ 300ಕ್ಕೂ ಅಧಿಕ ಸ್ಟಾರ್ಟ್ಅಪ್ಗಳ ಮೂಲಕ ಭಾರತದ ಬಾಹ್ಯಾಕಾಶ ಕ್ಷೇತ್ರ ವಿಸ್ತರಿಸುತ್ತಿದೆ. ಇದರಿಂದ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶವು ಪ್ರಕಾಶಮಾನವಾಗಿ ಹೊಳೆಯುತ್ತಾ ಬೆಳೆಯುತ್ತಿದೆ. ಉಪಗ್ರಹಗಳ ಸಂಶೋಧನೆ ಹಾಗೂ ಅಭಿವೃದ್ಧಿ, ಬಾಹ್ಯಾಕಾಶ ಅನ್ವೇಷಣೆಯಲ್ಲೂ ಭಾರತದ ತಂತ್ರಜ್ಞಾನದ ನೈಪುಣ್ಯತೆ ಜಗತ್ತಿಗೆ ಬೆರಗು ಮೂಡಿಸಿದೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.
8. ಯುಪಿಐ, ಕೈಗಾರಿಕೆ ಹಾಗೂ ಉದ್ಯಮ, ಮಹಿಳಾ ಸ್ವಸಹಾಯ ಗುಂಪುಗಳು
ಆಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿನ ಸಂಶೋಧನೆ ಮತ್ತು ಅಭಿವೃದ್ಧಿ, ಜಗತ್ತಿನ ಇತರ ರಾಷ್ಟ್ರಗಳಲ್ಲೂ ಬಳಕೆಯಾಗುತ್ತಿರುವ ಭಾರತದ ಸರಳ ಪಾವತಿ ವ್ಯವಸ್ಥೆ ಯುಪಿಐ, ಕೃಷಿ ಉತ್ಪಾದನೆ ಹೆಚ್ಚಿಸಲು ಪರಿಷ್ಕೃತ ಗೊಬ್ಬರ ನೀತಿ, ಉದ್ಯೋಗ ಸೃಜನೆಗೆ ಸ್ಟಾರ್ಟ್ಅಪ್ಗಳಿಗೆ ಉತ್ತೇಜನ, ಮಹಿಳೆಯರನ್ನು ಆರ್ಥಿಕ ಮತ್ತು ಸಾಮಾಜಿಕವಾಗಿ ಸಬಲರನ್ನಾಗಿಸಲು ಸ್ವಸಹಾಯ ಗುಂಪುಗಳಿಗೆ ಉತ್ತೇಜನ ಕುರಿತ ವಿಷಯಗಳನ್ನು ನರೇಂದ್ರ ಮೋದಿ ಅವರು ತಮ್ಮ 103 ನಿಮಿಷಗಳ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.
9. ತಯಾರಿಕಾ ವಲಯಕ್ಕೆ ಹೆಚ್ಚಿನ ಒತ್ತು
ಯುವಜನತೆ ನೇತೃತ್ವದ ತಯಾರಿಕಾ ವಲಯದತ್ತ ಸರ್ಕಾರ ತನ ಗಮನ ಕೇಂದ್ರೀಕರಿಸಿದೆ. ಆ ಮೂಲಕ ದೇಶದ ತಯಾರಿಕಾ ವಲಯವನ್ನು ವಿಸ್ತರಿಸಲಾಗುತ್ತಿದೆ. ಕಚ್ಚಾ ಪದಾರ್ಥಗಳ ಉತ್ಪಾದನೆ ಮೂಲಕ ಉದ್ಯೋಗ ಸೃಜನೆ, ಸ್ವಾವಲಂಬನೆ ಹಾಗೂ ಭಾರತದ ಕೈಗಾರಿಕಾ ಸಾಮರ್ಥ್ಯವನ್ನು ಬಲಪಡಿಸುವತ್ತ ಹೆಚ್ಚು ಒತ್ತು ನೀಡಲಾಗುತ್ತಿದೆ ಎಂದರು.
10. ಇತಿಹಾಸದಲ್ಲಿನ ಬಲಿದಾನ, ವರ್ತಮಾನದ ಸಾಧನೆ ಮತ್ತು ಭವಿಷ್ಯದ ಗುರಿ
ತಮ್ಮ ಭಾಷಣದುದ್ದಕ್ಕೂ ಆತ್ಮನಿರ್ಭರ ಭಾರತ ಕುರಿತು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಸ್ವಾತಂತ್ರ್ಯ ಹೋರಾಟದಲ್ಲಿನ ತ್ಯಾಗ ಹಾಗೂ ಬಲಿದಾನದಿಂದ ಇಂದಿನ, ತಂತ್ರಜ್ಞಾನ, ಬಾಹ್ಯಾಕಾಶ ಮತ್ತು ಕೈಗಾರಿಕಾ ಸಾಧನೆಯನ್ನು ಪ್ರಸ್ತಾಪಿಸಿದರು. ದೇಶದ ಬೆಳವಣಿಗೆ, ಸುಸ್ಥಿರತೆ ಮತ್ತು ಜಾಗತಿಕ ನಾಯಕತ್ವದ ಮೂಲಕ ಭವಿಷ್ಯದ ಗುರಿಯನ್ನು ಹಂಚಿಕೊಂಡ ಅವರು ದೇಶದ ಅಭಿವೃದ್ಧಿಗೆ ಯೋಗದಾನ ನೀಡುವಂತೆ ನಾಗರಿಕರನ್ನು ಪ್ರೇರೇಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.