ADVERTISEMENT

MP Politics: ಕಮಲನಾಥ್ ಆಪ್ತ ಸೇರಿ ‘ಕೈ’ ಕಾರ್ಯಕರ್ತರು ಬಿಜೆಪಿಗೆ ಸೇರ್ಪಡೆ

ಪಿಟಿಐ
Published 18 ಮಾರ್ಚ್ 2024, 11:44 IST
Last Updated 18 ಮಾರ್ಚ್ 2024, 11:44 IST
ಕಮಲನಾಥ್
ಕಮಲನಾಥ್   

ಭೋಪಾಲ್: ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗಲೇ ಮಧ್ಯಪ್ರದೇಶದ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರ ಆಪ್ತ ಸಹಾಯಕ ಸೇರಿದಂತೆ ಇತರೆ ಕಾರ್ಯಕರ್ತರು ಇಂದು (ಸೋಮವಾರ) ಆಡಳಿತಾರೂಢ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

ಭೋಪಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಕಾಂಗ್ರೆಸ್ ವಕ್ತಾರ ಸೈಯದ್ ಜಾಫರ್ ಅವರು ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಮತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ವಿ.ಡಿ. ಶರ್ಮಾ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರಿದ್ದಾರೆ.

ಛಿಂದ್ವಾರಾ ಮೂಲದ ಜಾಫರ್ ಅವರನ್ನು ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರ ಆಪ್ತ ಸಹಾಯಕ ಎಂದೇ ಪರಿಗಣಿಸಲಾಗಿತ್ತು.

ADVERTISEMENT

ಇತ್ತೀಚೆಗಷ್ಟೇ ಕಮಲನಾಥ್‌ ಮತ್ತು ಸಂಸದರಾದ ಅವರ ಪುತ್ರ ನಕುಲ್‌ನಾಥ್‌ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳು ಹರಿದಾಡಿದ್ದವು. ಆದರೆ, ಈ ಕುರಿತು ಸ್ಪಷ್ಟನೆ ನೀಡಿದ್ದ ಕಮಲನಾಥ್‌ ಅವರು ಬಿಜೆಪಿಗೆ ಸೇರುತ್ತೇನೆ ಎಂಬ ವದಂತಿಗಳನ್ನು ಸೃಷ್ಟಿಸಿದ್ದು ನೀವೇ (ಮಾಧ್ಯಮಗಳು) ಹೊರತು ನಾನು ಅಂತಹ ಯಾವುದೇ ಹೇಳಿಕೆಯನ್ನು ನೀಡಿಲ್ಲ ಎಂದು ಕಿಡಿಕಾರಿದ್ದರು.

‘ಇಂತಹ ಊಹಾಪೋಹ ಹರಡುತ್ತಿರುವುದು ನೀವು (ಮಾಧ್ಯಮ). ಬೇರೆ ಯಾರೂ ಇದರ ಬಗ್ಗೆ ಮಾತನಾಡಿಲ್ಲ. ಬಿಜೆಪಿ ಸೇರ್ಪಡೆ ವಿಚಾರದ ಬಗ್ಗೆ ನೀವು ನನ್ನ ಬಳಿ ಎಂದಾದರೂ ಕೇಳಿದ್ದೀರಾ? ನೀವೇ ಸುದ್ದಿ ಮಾಡಿ ನಂತರ ನನ್ನ ಬಳಿ ಬಂದು ಕೇಳುತ್ತೀರಾ’ ಎಂದು ಗುಡುಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.