ಖಮೇನಿ ಹತ್ಯೆ ಖಂಡಿಸಿ ಘಂಟಾ ಘರ್ನಲ್ಲಿ ನಡೆದಿದ್ದ ಪ್ರತಿಭಟನೆ
ಶ್ರೀನಗರ: ಇರಾನ್ ಸರ್ವೊಚ್ಚ ನಾಯಕ ಅಯತೊಲ್ಲಾ ಖಮೇನಿ ಅವರ ಹತ್ಯೆ ಬಳಿಕ ಭಾರಿ ಪ್ರತಿಭಟನೆಗೆ ಸಾಕ್ಷಿಯಾಗಿದ್ದ ಕಾಶ್ಮೀರದಲ್ಲಿ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ.
ಕಾಶ್ಮೀರದ ಹಲವು ಕಡೆಗಳಲ್ಲಿ ಕಠಿಣ ನಿರ್ಬಂಧ ಹೇರಲಾಗಿದೆ. ಲಾಲ್ಚೌಕ್ನಲ್ಲಿರುವ ಐತಿಹಾಸಿಕ ‘ಘಂಟಾ ಘರ್’ ಸುತ್ತಲೂ ಬ್ಯಾರಿಕೇಡ್ ಅಳವಡಿಸಿ ಸೀಲ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಗರದಾದ್ಯಂತ ಪ್ರತಿಭಟನೆ ಹಾಗೂ ಸಮಾವೇಶವನ್ನು ತಡೆಯಲು ದೊಡ್ಡ ಸಂಖ್ಯೆಯ ಪೊಲೀಸ್ ಹಾಗೂ ಸಿಆರ್ಪಿಎಫ್ ಸಿಬ್ಬಂದಿ ನಿಯೋಜಿಸಲಾಗಿದೆ.
ಕಾಶ್ಮೀರದಲ್ಲಿ ಸುಮಾರು 15 ಲಕ್ಷದಷ್ಟು ಶಿಯಾ ಮುಸ್ಲಿಮರಿದ್ದು, ಖಮೇನಿ ಹತ್ಯೆ ಬಳಿಕ ಲಾಲ್ ಚೌಕ, ಸೈದಾ ಕಡಲ್, ಬುದ್ಗಾವ್, ಬಂಡಿಪೊರ, ಅನಂತ್ನಾಗ್ ಹಾಗೂ ಪುಲ್ವಮಾದಲ್ಲಿ ಪ್ರತಿಭಟನೆಗಳು ನಡೆದಿದ್ದವು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿಭಟನಾಕಾರರು ತಮ್ಮ ಎದೆಗೆ ಹೊಡೆದುಕೊಂಡು ಅಮೆರಿಕ ಹಾಗೂ ಇಸ್ರೇಲ್ ವಿರೋಧಿ ಘೋಷಣೆಗಳನ್ನು ಕೂಗಿದ್ದರು.
ಕಾನೂನು ಸುವ್ಯವಸ್ಥೆ ಕಾಪಾಡಲೋಸುಗ ಮುನ್ನೆಚ್ಚರಿಕಾ ಕ್ರಮವಾಗಿ ನಿರ್ಬಂಧಗಳನ್ನು ಹೇರಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾಂಕ್ರಿಟ್ ವೈರ್ ಹಾಗೂ ಬ್ಯಾರಿಕೇಡ್ಗಳ ಮೂಲಕ ನಗರಕ್ಕೆ ಬರುವ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಶಿಯಾ ಪ್ರಾಬಲ್ಯ ಇರುವ ಹಲವು ಪ್ರದೇಶಗಳಲ್ಲಿ ಇಂತಹದೇ ನಿರ್ಬಂಧ ಹೇರಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಮುತಾಹಿದ ಮಜ್ಲಿಸ್–ಎ–ಉಲಮಾ ಸಂಘಟನೆಯ ಮುಖ್ಯಸ್ಥ ಮಿರ್ವಾಯಜ್ ಉಮರ್ ಫಾರೂಕ್ ಅವರು ಒಂದು ದಿನದ ಮುಷ್ಕರ ಕರೆಕೊಟ್ಟ ಬೆನ್ನಲ್ಲೇ ಈ ನಿರ್ಬಂಧಗಳನ್ನು ಜೇರಲಾಗಿದೆ.
ಈ ಮುಷ್ಕರಕ್ಕೆ ಮೆಹಬೂಬಾ ಮುಫ್ತಿ ಅವರ ಪಿಡಿಪಿ ಸೇರಿ ಹಲವು ರಾಜಕೀಯ ಪಕ್ಷಗಳು ಬೆಂಬಲ ನೀಡಿವೆ.