ಅರವಿಂದ ಕೇಜ್ರಿವಾಲ್
(ಪಿಟಿಐ ಚಿತ್ರ)
ನವದೆಹಲಿ: ಅಮೆರಿಕದಿಂದ ಆಮದು ಮಾಡಲಾಗುವ ವಸ್ತುಗಳ ಮೇಲೆ ಭಾರತ ಹೆಚ್ಚಿನ ಸುಂಕವನ್ನು ವಿಧಿಸಬೇಕೆಂದು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ (ಎಎಪಿ) ಸಂಚಾಲಕ ಅರವಿಂದ ಕೇಜ್ರಿವಾಲ್ ಒತ್ತಾಯಿಸಿದ್ದಾರೆ.
ಒಂದು ವೇಳೆ ಈ ನಿರ್ಧಾರ ತೆಗೆದುಕೊಂಡಲ್ಲಿ ಇಡೀ ದೇಶವೇ ಬೆಂಬಲಿಸಲಿದೆ ಎಂದೂ ಕೇಜ್ರಿವಾಲ್ ಪ್ರತಿಪಾದಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಕೇಜ್ರಿವಾಲ್, 'ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಅಮೆರಿಕದಿಂದ ಆಮದು ಮಾಡಿಕೊಳ್ಳುವ ಹತ್ತಿಯ ಮೇಲಿನ ಶೇ 11ರಷ್ಟು ಸುಂಕವನ್ನು ಮನ್ನಾಮಾಡಲು ನಿರ್ಧರಿಸಿದೆ. ಇದು ನಮ್ಮ ಸ್ಥಳೀಯ ರೈತರ ಮೇಲೆ ಪರಿಣಾಮ ಬೀರಲಿದೆ' ಎಂದು ಹೇಳಿದ್ದಾರೆ.
'ಅಮೆರಿಕದ ಒತ್ತಡದ ತಂತ್ರಕ್ಕೆ ಇತರೆ ದೇಶಗಳು ತಲೆ ಬಾಗಲಿಲ್ಲ. ಅಮೆರಿಕದ ಮೇಲೆ ಪ್ರತಿ ಸುಂಕ ವಿಧಿಸಿತ್ತು. ನಾವು ಸಹ ಹೆಚ್ಚುವರಿ ಸುಂಕಗಳನ್ನು ವಿಧಿಸಬೇಕು. ಅಮೆರಿಕ ಶೇ 50ರಷ್ಟು ಸುಂಕ ವಿಧಿಸಿದ್ದರೆ ನಾವು ಅದನ್ನು ಶೇ 100ಕ್ಕೆ ದ್ವಿಗುಣಗೊಳಿಸಬೇಕು. ಈ ನಿರ್ಧಾರವನ್ನು ಇಡೀ ದೇಶವೇ ಬೆಂಬಲಿಸಲಿದೆ. ಭಾರತದೊಂದಿಗೆ ಅನ್ಯಾಯ ಮಾಡಲು ಯಾವ ದೇಶಕ್ಕೂ ಸಾಧ್ಯವಿಲ್ಲ. ನಮ್ಮದ್ದು 140 ಕೋಟಿ ಜನರ ದೇಶವಾಗಿದೆ' ಎಂದಿದ್ದಾರೆ.
'ಅಮೆರಿಕದಿಂದ ಆಮದು ಮಾಡಿಕೊಳ್ಳುವ ಹತ್ತಿಯ ಮೇಲೆ ಭಾರತವು ಶೇ 11ರಷ್ಟು ಸುಂಕ ವಿಧಿಸುತ್ತಿತ್ತು. ಅಂದರೆ ಅಮೆರಿಕದ ಹತ್ತಿಯು ಸ್ವದೇಶಕ್ಕಿಂತ ದುಬಾರಿಯಾಗುತ್ತಿತ್ತು. ಆದರೆ ಪ್ರಧಾನಿ ಮೋದಿ ಸರ್ಕಾರವು ಆಗಸ್ಟ್ 19ರಿಂದ 30ರವರೆಗೆ ಈ ಸುಂಕವನ್ನು ಮನ್ನಾ ಮಾಡಲು ನಿರ್ಧರಿಸಿದೆ. ಇದರಿಂದ ಜವಳಿ ಕೈಗಾರಿಕೆಗಳಿಗೆ ಅಗ್ಗದಲ್ಲಿ ಹತ್ತಿ ಲಭ್ಯವಾಗಲಿದೆ. ಅಲ್ಲದೆ ನಮ್ಮ ಹತ್ತಿ ಮಾರುಕಟ್ಟೆಯ ಬೇಡಿಕೆ ಕುಸಿತವಾಗಲಿದೆ' ಎಂದು ಹೇಳಿದ್ದಾರೆ.
'ತೆಲಂಗಾಣ, ಪಂಜಾಬ್, ವಿದರ್ಭ ಮತ್ತು ಗುಜರಾತ್ ರಾಜ್ಯಗಳ ರೈತರಿಗೆ ಇದರಿಂದ ತೊಂದರೆ ಉಂಟಾಗಲಿದೆ' ಎಂದು ಕೇಜ್ರಿವಾಲ್ ಉಲ್ಲೇಖಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.