ಕೇರಳದ ಕರಾವಳಿ ಪ್ರದೇಶಗಳತ್ತ ತೇಲಿಬಂದಿರುವ ಹಡಗಿನ ಕಂಟೇನರ್ಗಳು
ಕೊಚ್ಚಿ: ಎರಡು ದಿನಗಳ ಹಿಂದೆ ಕೇರಳದ ಕರಾವಳಿಯಲ್ಲಿ ಮುಳುಗಡೆಯಾಗಿದ್ದ ಲೈಬೀರಿಯಾದ ಸರಕು ಸಾಗಣೆ ಹಡಗಿನಲ್ಲಿದ್ದ ತೈಲದ ಕಂಟೇನರ್ಗಳು ಸೋರಿಕೆಯಾಗಿಲ್ಲ ಎಂದು ಭಾರತೀಯ ಕರಾವಳಿ ಕಾವಲು ಪಡೆ (ಐಸಿಜಿ) ಮಂಗಳವಾರ ತಿಳಿಸಿದೆ.
‘ತೈಲ ಸೋರಿಕೆಗೆ ಸಂಬಂಧಿಸಿದಂತೆ ಕರಾವಳಿ ಕಾವಲು ಪಡೆಯು ತೀವ್ರ ನಿಗಾವಹಿಸಿದೆ. ಇದುವರೆಗೆ ಕೇರಳದ ಕರಾವಳಿಯಲ್ಲಿ ತೈಲ ಸೋರಿಕೆಯಾಗಿರುವ ಯಾವುದೇ ಅಂಶ ಕಂಡು ಬಂದಿಲ್ಲ’ ಎಂದು ಕೊಚ್ಚಿಯ ರಕ್ಷಣಾ ಇಲಾಖೆ ಅಧಿಕಾರಿಗಳು ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದಾರೆ.
ತೈಲ ತುಂಬಿದ 640 ಕಂಟೈನರ್ಗಳನ್ನು ಹೊಂದಿದ್ದ ಲೈಬೀರಿಯಾದ ಸರಕು ಸಾಗಣೆ ಹಡಗು ಕೇರಳದ ಕರಾವಳಿಯಲ್ಲಿ ಭಾನುವಾರ ಮುಂಜಾನೆ ಬಿರುಗಾಳಿ ಮತ್ತು ಸಮುದ್ರ ಪ್ರಕ್ಷುಬ್ದಗೊಂಡಿದ್ದರಿಂದ ಹಡಗು ನಿಯಂತ್ರಣ ಕಳೆದುಕೊಂಡು ಮುಳುಗಿತ್ತು. ಹಡಗಿನಲ್ಲಿದ್ದ ತೈಲದ ಕಂಟೇನರ್ಗಳು ಸೋರಿಕೆಯಾಗಿರುವ ಶಂಕೆ ವ್ಯಕ್ತವಾಗಿತ್ತು. ಇದು ಸಾಗರ ಸಂಪನ್ಮೂಲಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಆತಂಕ ಸೃಷ್ಟಿಸಿತ್ತು.
ಮುಂಗಾರು ಋತುವಿನಲ್ಲಿ ಮೀನುಗಳ ಸಂತಾನೋತ್ಪತ್ತಿ ನಡೆಯುತ್ತದೆ. ಇದೇ ಸಂದರ್ಭದಲ್ಲಿ ತೈಲ ಸೋರಿಕೆ ಆಗಿರುವುದು ಆತಂಕವನ್ನು ಹೆಚ್ಚಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದರು.
ಜಲ ಮಾಲಿನ್ಯದ ಮೇಲೆ ನಿಗಾ ಇಟ್ಟು, ಅಗತ್ಯ ಸಂದರ್ಭದಲ್ಲಿ ಕ್ರಮ ಕೈಗೊಳ್ಳಲು ಭಾರತೀಯ ಕರಾವಳಿ ಪಡೆಯ ಐಸಿಜಿ ಸಮರ್ಥ್, ಐಸಿಜಿ ಸಕ್ಷಮ್ ಹಾಗೂ ಐಸಿಜಿ ವಿಕ್ರಮ್ ರಕ್ಷಣಾ ಹಡಗುಗಳನ್ನು ಲೈಬೀರಿಯಾದ ಸರಕು ಸಾಗಣೆ ಹಡಗು ಮುಳುಗಡೆಯಾಗಿರುವ ಪ್ರದೇಶದಲ್ಲಿ ನಿಯೋಜಿಸಲಾಗಿದೆ ಎಂದು ಕೇಂದ್ರ ಬಂದರು ಸಚಿವ ಸರ್ವಾನಂದ ಸೋನೊವಾಲ್ ಮಾಹಿತಿ ನೀಡಿದ್ದರು.
ತೇಲಿಬಂದ ಕಂಟೇನರ್ಗಳು
ತೈಲ, ಅಪಾಯಕಾರಿ ವಸ್ತುಗಳು, ವಿವಿಧ ದೇಶಗಳ ಹಲವು ಉತ್ಪನ್ನಗಳನ್ನು ಹೊತ್ತಿದ್ದ ಲೈಬೀರಿಯಾದ ಹಡಗಿನ 643 ಕಂಟೇನರ್ಗಳು ಸಮುದ್ರದ ಪಾಲಾಗಿದ್ದು, ಈ ಪೈಕಿ 13 ಕಂಟೇನರ್ಗಳು ಕೇರಳದ ಕರಾವಳಿಯ ವಿವಿಧ ಪ್ರದೇಶಗಳಲ್ಲಿ ದಂಡೆಗಳಿಗೆ ಬಂದು ಬಿದ್ದಿವೆ. ಅವುಗಳ ಪೈಕಿ ಕೆಲವು ಕಂಟೇನರ್ಗಳಲ್ಲಿ ಬಟ್ಟೆಗಳು, ಚೀನಾದ ಚಹಾ ಪುಡಿ, ಗಾಜಿನ ವಸ್ತುಗಳು ಕಂಡುಬಂದಿವೆ ಎಂದು ಕೇರಳ ಸರ್ಕಾರ ಹೇಳಿದೆ. ಇನ್ನೂ ಕೆಲವು ಕಂಟೇನರ್ಗಳು ಖಾಲಿ ಆಗಿದ್ದು, ಅವುಗಳಲ್ಲಿ ತೈಲ ತುಂಬಿಸಲಾಗಿತ್ತೆ? ಅದು ಸೋರಿಕೆ ಆಗಿರಬಹುದೆ? ಎಂಬ ಶಂಕೆಯೂ ವ್ಯಕ್ತವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.