ರಾಜ್ ಠಾಕ್ರೆ
ಪಿಟಿಐ ಚಿತ್ರ
ಮುಂಬೈ: ತ್ರಿಭಾಷಾ ಸೂತ್ರವು ಮುಂಬೈ ನಗರವನ್ನು ರಾಜ್ಯದಿಂದ ಪ್ರತ್ಯೇಕಿಸಲು ರೂಪಿಸಿದ ಯೋಜನೆಯಾಗಿತ್ತು ಎಂದು ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಆರೋಪಿಸಿದ್ದಾರೆ.
ತಮ್ಮ ಸಂಬಂಧಿ, ಶಿವಸೇನಾ (ಯುಬಿಟಿ) ಮುಖಸ್ಥ ಉದ್ಧವ್ ಠಾಕ್ರೆ ಅವರೊಂದಿಗೆ 20 ವರ್ಷಗಳ ನಂತರ ರಾಜಕೀಯ ವೇದಿಕೆ ಹಂಚಿಕೊಂಡಿರುವ ರಾಜ್, ವೊರ್ಲಿಯಲ್ಲಿ ಆಯೋಜಿಸಿರುವ 'ವಿಜಯ ಯಾತ್ರೆ'ಯನ್ನುದ್ದೇಶಿಸಿ ಮಾತನಾಡಿದ್ದಾರೆ.
ತಮ್ಮನ್ನು ಹಾಗೂ ಉದ್ಧವ್ ಅವರನ್ನು ಒಂದುಗೂಡಿಸಲು ಬಾಳಾಸಾಹೇಬ್ ಠಾಕ್ರೆ ಅವರಿಗೂ ಸಾಧ್ಯವಾಗಿರಲಿಲ್ಲ. ಅದರಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಯಶಸ್ವಿಯಾಗಿದ್ದಾರೆ ಎಂದಿದ್ದಾರೆ. ಆ ಮೂಲಕ ಫಡಣವೀಸ್ ಅವರಿಗೆ ತಿವಿದಿದ್ದಾರೆ.
ರಾಜ್ಯದಲ್ಲಿ ತ್ರಿಭಾಷಾ ಸೂತ್ರ ಜಾರಿ ಹಾಗೂ ಹಿಂದಿ ಹೇರಿಕೆ ವಿರುದ್ಧ ಜಂಟಿಯಾಗಿ ಪ್ರತಿಭಟನೆ ನಡೆಸಲು ಉದ್ಧವ್ ಠಾಕ್ರೆ ಹಾಗೂ ರಾಜ್ ಠಾಕ್ರೆ ಪಕ್ಷಗಳು ಸಜ್ಜಾಗಿದ್ದವು. ಆದರೆ, ವ್ಯಾಪಕ ವಿರೋಧ ವ್ಯಕ್ತವಾದ ಕಾರಣ ರಾಜ್ಯ ಸರ್ಕಾರವು ತನ್ನ ಆದೇಶವನ್ನು ಹಿಂಪಡೆದಿದೆ. ಹೀಗಾಗಿ, ಶಿವಸೇನಾ (ಯುಬಿಟಿ) ಹಾಗೂ ಎಂಎನ್ಎಸ್ 'ಅವಾಜ್ ಮರಾಠಿಚಾ' ಎಂಬ ವಿಜಯ ಯಾತ್ರೆ ನಡೆಸುತ್ತಿವೆ.
ಇದರೊಂದಿಗೆ, ಉದ್ಧವ್ ಹಾಗೂ ರಾಜ್ ಅವರು ಬರೋಬ್ಬರಿ 2 ದಶಕಗಳ ಬಳಿಕ ಸಾರ್ವಜನಿಕವಾಗಿ ವೇದಿಕೆ ಹಂಚಿಕೊಂಡಿದ್ದಾರೆ.
'ಮರಾಠಿಗರು ತೋರಿದ ಒಗ್ಗಟ್ಟಿನ ಫಲವಾಗಿ ಮಹಾರಾಷ್ಟ್ರ ಸರ್ಕಾರವು ತ್ರಿಭಾಷಾ ಸೂತ್ರ ಜಾರಿ ನಿರ್ಧಾರವನ್ನು ಹಿಂಪಡೆದಿದೆ. ಇದು, ಮುಂಬೈ ನಗರವನ್ನು ಮಹಾರಾಷ್ಟ್ರದಿಂದ ಪ್ರತ್ಯೇಕಿಸುವ ಪೂರ್ವಭಾವಿ ಯೋಜನೆಯಾಗಿತ್ತು' ಎಂದು ರಾಜ್ ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.