ADVERTISEMENT

ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ: ಭಕ್ತರಿಗೆ ವಿಎಚ್‌ಪಿಯಿಂದ ಉಚಿತ ಚಹಾ ವಿತರಣೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜನವರಿ 2024, 6:11 IST
Last Updated 19 ಜನವರಿ 2024, 6:11 IST
<div class="paragraphs"><p>ಭಕ್ತರಿಗೆ ಚಹಾ ವಿತರಿಸುತ್ತಿರುವ&nbsp;ವಿಶ್ವ ಹಿಂದೂ ಪರಿಷತ್ ಸದಸ್ಯರು</p></div>

ಭಕ್ತರಿಗೆ ಚಹಾ ವಿತರಿಸುತ್ತಿರುವ ವಿಶ್ವ ಹಿಂದೂ ಪರಿಷತ್ ಸದಸ್ಯರು

   

ಲಖನೌ: ಅಯೋಧ್ಯೆಯಲ್ಲಿ ಜನವರಿ 22ರಂದು ನಡೆಯುವ ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ದಿನಗಣನೆ ಆರಂಭವಾಗಿದ್ದು, ವಿವಿಧ ರಾಜ್ಯಗಳಿಂದ ಭಕ್ತಾಧಿಗಳು ಅಯೋಧ್ಯೆಯತ್ತ ಹೆಜ್ಜೆ ಹಾಕುತ್ತಿದ್ದಾರೆ.

ಅಯೋಧ್ಯೆಗೆ ಬರುವ ಭಕ್ತರಿಗೆ ಉಚಿತವಾಗಿ ಚಹಾ ನೀಡಲು ವಿಶ್ವ ಹಿಂದೂ ಪರಿಷತ್ ಸದಸ್ಯರು ಟೀ ಸ್ಟಾಲ್‌ಗಳನ್ನು ತೆರೆದಿದ್ದಾರೆ ಎಂದು ಸುದ್ದಿಸಂಸ್ಥೆ ‘ಎಎನ್‌ಐ’ ವರದಿ ಮಾಡಿದೆ.

ADVERTISEMENT

ಲತಾ ಮಂಗೇಶ್ಕರ್ ಚೌಕದ ಬಳಿ ಭಕ್ತರಿಗಾಗಿ ಸ್ಥಾಪಿಸಲಾದ ಸೆಲ್ಫಿ ಪಾಯಿಂಟ್‌ಗಳನ್ನು ಪ್ರತಿಮೆಗಳು, ಪೋಸ್ಟರ್‌ಗಳು ಮತ್ತು ಬ್ಯಾನರ್‌ಗಳಿಂದ ಅಲಂಕರಿಸಲಾಗಿದೆ.

ಸಮಾರಂಭಕ್ಕೆ ದೇಶ, ವಿದೇಶಗಳಿಂದ ಗಣ್ಯರು ಆಗಮಿಸುತ್ತಿದ್ದು, ಅಯೋಧ್ಯೆ ನಗರದ ಪ್ರಮುಖ ಬೀದಿಗಳನ್ನು ತಳಿರು ತೋರಣಗಳಿಂದ ಸಿಂಗಾರಗೊಳಿಸಲಾಗುತ್ತಿದೆ.

ಅಯೋಧ್ಯೆಯಲ್ಲಿ ಈಗಾಗಲೇ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಿವೆ. ಪ್ರಾಣ ಪ್ರತಿಷ್ಠಾಪನೆ ಮಹೋತ್ಸವದ ಪೂರ್ವಭಾವಿ ಆಚರಣೆಗಳ ಭಾಗವಾಗಿ ಗುರುವಾರ ವೇದಘೋಷಗಳ ನಡುವೆ ರಾಮಮಂದಿರದ ಗರ್ಭಗುಡಿಯ ಪೀಠದ ಮೇಲೆ ರಾಮಲಲ್ಲಾ ವಿಗ್ರಹವನ್ನು ವಿರಾಜಮಾನ ಮಾಡಲಾಗಿದೆ.

ಇದಕ್ಕೂ ಮೊದಲು, ದೇಶದ ನದಿಗಳ ನೀರಿನಿಂದ ವಿಗ್ರಹಕ್ಕೆ ಪವಿತ್ರ ಸ್ನಾನ ಮಾಡಿಸಲಾಯಿತು. ಜೊತೆಗೆ, ಔಷಧೀಯ ಗುಣಗಳಿರುವ ಸಸ್ಯಗಳನ್ನು ನೆನೆಸಿರುವ ನೀರಿನಿಂದ ವಿಗ್ರಹವನ್ನು ಸ್ವಚ್ಛಗೊಳಿಸಲಾಯಿತು ಎಂದು ಮಂದಿರದ ಅರ್ಚಕರೊಬ್ಬರು ತಿಳಿಸಿದ್ದರು.

ಗುರುವಾರ ಬೆಳಿಗ್ಗೆಯೇ ರಾಮಮಂದಿರದ ಗರ್ಭಗುಡಿಯಲ್ಲಿ ‘ಗಣೇಶ ಪೂಜೆ’ ಮತ್ತು ‘ವರುಣ ಪೂಜೆ’ಯನ್ನೂ ನೆರವೇರಿಸಲಾಯಿತು. 150 ಕೆ.ಜಿ ತೂಕದ ಬಾಲರಾಮನ ವಿಗ್ರಹವನ್ನು ಟ್ರಕ್‌ ಮೂಲಕ ಬುಧವಾರ ರಾತ್ರಿಯೇ ಮಂದಿರಕ್ಕೆ ತರಲಾಗಿತ್ತು.

ಪೂರ್ವಭಾವಿ ವಿಧಿವಿಧಾನಗಳ ಭಾಗವಾಗಿ, ಪ್ರಮುಖ ತೀರ್ಥಕ್ಷೇತ್ರಗಳನ್ನು ಆರಾಧಿಸುವ ‘ತೀರ್ಥ ಪೂಜೆ’ಯನ್ನು ಅರ್ಚಕರು ನೆರವೇರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.