ADVERTISEMENT

ಯುದ್ಧವೆಂದರೆ ಪ್ರಣಯ, ಬಾಲಿವುಡ್ ಸಿನಿಮಾ ಅಲ್ಲ: ಸೇನೆಯ ನಿವೃತ್ತ ಮುಖ್ಯಸ್ಥ ನರವಣೆ

ಪಿಟಿಐ
Published 12 ಮೇ 2025, 11:04 IST
Last Updated 12 ಮೇ 2025, 11:04 IST
<div class="paragraphs"><p>ಸೇನಾಪಡೆಯ ನಿವೃತ್ತ ಮೇಜರ್‌ ಜನರಲ್‌ ಮನೋಜ್‌ ಮುಕುಂದ್ ನರವಣೆ</p></div>

ಸೇನಾಪಡೆಯ ನಿವೃತ್ತ ಮೇಜರ್‌ ಜನರಲ್‌ ಮನೋಜ್‌ ಮುಕುಂದ್ ನರವಣೆ

   

ಪಿಟಿಐ (ಸಂಗ್ರಹ ಚಿತ್ರ)

ಪುಣೆ: ಸೇನಾಪಡೆಯ ನಿವೃತ್ತ ಮೇಜರ್‌ ಜನರಲ್‌ ಮನೋಜ್‌ ಮುಕುಂದ್ ನರವಣೆ ಅವರು, ಭಾರತ ಮತ್ತು ಪಾಕಿಸ್ತಾನ ನಡುವೆ ಕದನ ವಿರಾಮ ಘೋಷಣೆಯಾಗಿರುವುದನ್ನು ಟೀಕಿಸುತ್ತಿರುವವರ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದ್ದಾರೆ. ಯುದ್ಧವೆಂದರೆ ಪ್ರಣಯವೂ ಅಲ್ಲ ಮತ್ತು ಬಾಲಿವುಡ್‌ ಸಿನಿಮಾ ಕೂಡ ಅಲ್ಲ ಎಂದು ಹೇಳಿದ್ದಾರೆ.

ADVERTISEMENT

ಪುಣೆಯಲ್ಲಿ 'ಇನ್‌ಸ್ಟಿಟ್ಯೂಟ್‌ ಆಫ್‌ ಕೋಸ್ಟ್‌ ಅಕೌಂಟಂಟ್ಸ್‌ ಆಫ್‌ ಇಂಡಿಯಾ' ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆದೇಶ ಬಂದರೆ ಯುದ್ಧಕ್ಕೆ ತೆರಳಲು ಸಿದ್ಧವಿದ್ದೇನೆ. ಆದಾಗ್ಯೂ, ರಾಜತಾಂತ್ರಿಕ ಮಾರ್ಗವೇ ತಮ್ಮ ಮೊದಲ ಆಯ್ಕೆ ಎಂದು ತಿಳಿಸಿದ್ದಾರೆ.

ಶೆಲ್‌ ದಾಳಿಗಳನ್ನು ಕಂಡು, ರಾತ್ರೋರಾತ್ರಿ ಆಶ್ರಯ ಶಿಬಿರಗಳಿಗೆ ಓಡಬೇಕಾದ ಸ್ಥಿತಿಯಲ್ಲಿರುವ ಮಹಿಳೆಯರು, ಮಕ್ಕಳು ಸೇರಿದಂತೆ ಗಡಿ ಪ್ರದೇಶಗಳ ನಿವಾಸಿಗಳಲ್ಲಿ ಆತಂಕವಿದೆ ಎಂದಿದ್ದಾರೆ.

'ಪ್ರೀತಿಪಾತ್ರರನ್ನು ಕಳೆದುಕೊಂಡವರೊಂದಿಗೆ ಆ ಆಘಾತವು ತಲೆಮಾರುಗಳವರೆಗೆ ಇರಲಿದೆ. ಅದನ್ನು ಪಿಟಿಎಸ್‌ಡಿ (Post Traumatic Stress Disorder) ಎಂದೂ ಹೇಳಲಾಗುತ್ತದೆ. ಅಂತಹ ಭೀಕರ ದೃಶ್ಯಗಳನ್ನು ಕಣ್ಣಾರೆ ಕಂಡವರು, 20 ವರ್ಷಗಳ ನಂತರವೂ ಬೆಚ್ಚಿ ಬೀಳುತ್ತಾರೆ. ಅಂತಹವರಿಗೆ ಮನೋವೈದ್ಯಕೀಯ ಚಿಕಿತ್ಸೆಯ ಅಗತ್ಯವಿದೆ' ಎಂದು ಹೇಳಿದ್ದಾರೆ.

'ಯುದ್ಧವೆಂದರೆ ಪ್ರಣಯವಲ್ಲ. ಅದು ನಿಮ್ಮ ಬಾಲಿವುಡ್‌ ಸಿನಿಮಾವೂ ಅಲ್ಲ. ಅದು ಅತ್ಯಂತ ಗಂಭೀರವಾದದ್ದು. ಯುದ್ಧ ಅಥವಾ ಗಲಭೆ ನಮ್ಮ ಕಟ್ಟಕಡೇ ಆಯ್ಕೆಯಾಗಿರಬೇಕು. ಹಾಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರು ಇದು ಯುದ್ಧದ ಕಾಲವಲ್ಲ ಎಂದಿರುವುದು. ಆದಾಗ್ಯೂ ಅವಿವೇಕಿಗಳು ಯುದ್ಧವನ್ನು ಹೇರಿದರೂ, ನಾವು ಹಾತೊರೆಯಬಾರದು' ಎಂದು ಪ್ರತಿಪಾದಿಸಿದ್ದಾರೆ.

'ಪೂರ್ಣಪ್ರಮಾಣದ ಯುದ್ಧಕ್ಕೆ ಮುಂದಾಗಲಿಲ್ಲವೇಕೆ ಎಂದು ಈಗಲೂ ಕೆಲವರು ಕೇಳುತ್ತಾರೆ. ಆದೇಶ ಬಂದರೆ, ಸೈನಿಕನಾಗಿ ನಾನು ಯುದ್ಧಕ್ಕೆ ತೆರಳುತ್ತೇನೆ. ಆದರೆ, ಅದು ನನ್ನ ಮೊದಲ ಆಯ್ಕೆಯಲ್ಲ' ಎಂದು ಸ್ಪಷ್ಟಪಡಿಸಿದ್ದಾರೆ.

ಮಾತುಕತೆ ಮೂಲಕ ಪರಿಹಾರಗಳನ್ನು ಕಂಡುಕೊಳ್ಳುವ ಹಾಗೂ ಶಸ್ತ್ರಾಸ್ತ್ರಗಳ ಸಂಘರ್ಷದ ಹಂತ ತಲುಪಲು ಅಕವಾಶ ನೀಡದ ರಾಜತಾಂತ್ರಿಕ ಮಾರ್ಗವೇ ತಮ್ಮ ಮೊದಲ ಆಯ್ಕೆ ಎಂದು ತಿಳಿಸಿದ್ದಾರೆ.

‌'ನಾವೆಲ್ಲರೂ ರಾಷ್ಟ್ರೀಯ ಭದ್ರತೆಯ ಸಮಾನ ಪಾಲುದಾರರು. ದೇಶಗಳ ನಡುವಿನ ಸಮಸ್ಯೆಗಳನ್ನಷ್ಟೇ ಅಲ್ಲ, ನಮ್ಮ ನಡುವಿನ ವ್ಯತ್ಯಾಸಗಳನ್ನೂ  ಮಾತುಕತೆಯ ಮೂಲಕವೇ ಪರಿಹರಿಸಿಕೊಳ್ಳಲು ಪ್ರಯತ್ನಿಸಬೇಕು. ಅದು ಕುಟುಂಬಗಳದ್ದಿರಲಿ, ರಾಜ್ಯಗಳದ್ದಿರಲಿ, ಧರ್ಮಗಳು ಮತ್ತು ಸಮುದಾಯಗಳ ನಡುವಿನದ್ದೇ ಆಗಿರಲಿ. ಹಿಂಸೆ ಯಾವುದಕ್ಕೂ ಉತ್ತರವಲ್ಲ' ಎಂದು ಒತ್ತಿ ಹೇಳಿದ್ದಾರೆ.

ಜಮ್ಮು ಮತ್ತು ಕಾಶ್ಮಿರದ ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಉಗ್ರರು ಏಪ್ರಿಲ್‌ 22ರಂದು ಗುಂಡಿನ ದಾಳಿ ನಡೆಸಿದ್ದರು.

ಅದಕ್ಕೆ ಪ್ರತಿಯಾಗಿ ಭಾರತೀಯ ಸೇನೆಯು ಉಗ್ರರ ನೆಲೆಗಳನ್ನು ಗುರಿಯಾಗಿಸಿ ಪಾಕಿಸ್ತಾನ ಹಾಗೂ ಪಾಕ್‌ ಆಕ್ರಮಿತ ಕಾಶ್ಮೀರ ಪ್ರದೇಶಗಳಲ್ಲಿ (ಮೇ 7ರಂದು) 'ಆಪರೇಷನ್‌ ಸಿಂಧೂರ' ಕಾರ್ಯಾಚರಣೆ ನಡೆಸಿದ್ದವು. ಇದರ ಬೆನ್ನಲ್ಲೇ, ಪಾಕಿಸ್ತಾನ ಪಡೆಗಳು ಭಾರತದ ನಾಗರಿಕರು ಮತ್ತು ಸೇನಾ ನೆಲೆಗಳನ್ನು ಗರಿಯಾಗಿಸಿ ಗಡಿಯುದ್ದಕ್ಕೂ ನಡೆಸಿದ್ದ ದಾಳಿಗಳನ್ನು ಭಾರತೀಯ ಸೇನೆ ಸಮರ್ಥವಾಗಿ ಹಿಮ್ಮೆಟ್ಟಿಸಿದ್ದವು.

ಸಂಘರ್ಷ ತೀವ್ರಗೊಂಡ ಬೆನ್ನಲ್ಲೇ, ಶನಿವಾರ (ಮೇ 10ರಂದು) ಕದನ ವಿರಾಮ ಒಪ್ಪಂದಕ್ಕೆ ಬರಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.