
ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್
ಪಿಟಿಐ ಚಿತ್ರ
ಚೆನ್ನೈ: ಹಿಂದಿ ವಿರೋಧಿ ಚಳವಳಿ ವೇಳೆ ಪ್ರಾಣ ತ್ಯಾಗ ಮಾಡಿದವರನ್ನು ಸ್ಮರಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು, 'ರಾಜ್ಯದಲ್ಲಿ ಹಿಂದಿ ಭಾಷೆಗೆ ಅಂದು, ಇಂದು ಹಾಗೂ ಎಂದೆಂದಿಗೂ ಜಾಗವಿಲ್ಲ' ಎಂದು ಭಾನುವಾರ ಪ್ರತಿಪಾದಿಸಿದ್ದಾರೆ.
ಭಾಷಾ ಹುತಾತ್ಮರ ದಿನದ ಹಿನ್ನೆಲೆಯಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, 1965ರ ಸಂದರ್ಭದಲ್ಲಿ ಉತ್ತುಂಗಕ್ಕೇರಿದ್ದ ಹಿಂದಿ ವಿರೋಧಿ ಚಳವಳಿ ಸಂದರ್ಭದ ವಿಡಿಯೊವನ್ನೂ ಹಂಚಿಕೊಂಡಿದ್ದಾರೆ. ಭಾಷೆಯ ವಿಚಾರವಾಗಿ ಡಿಎಂಕೆಯ ದಿಗ್ಗಜರಾದ ದಿವಂಗತ ಸಿ.ಎನ್. ಅಣ್ಣಾದುರೈ ಹಾಗೂ ಎಂ. ಕರುಣಾನಿಧಿ ಅವರ ಜೊತೆಗೆ ಮತ್ತಷ್ಟು ಹುತಾತ್ಮರ ಕೊಡುಗೆಯನ್ನು ವಿಡಿಯೊದಲ್ಲಿ ಸ್ಮರಿಸಲಾಗಿದೆ.
'ತನ್ನದೇ ಭಾಷೆಯನ್ನು ಪ್ರೀತಿಸುವ ರಾಜ್ಯವು, ಹಿಂದಿ ಹೇರಿಕೆ ವಿರುದ್ಧ ಒಟ್ಟಾಗಿ ಹೋರಾಟ ಮಾಡಿತ್ತು. ಪ್ರತಿ ಬಾರಿ ಹೇರಿಕೆಯಾದಾಗಲೂ ಅದೇ ಹುರುಪಿನಿಂದ ಹೋರಾಡುತ್ತಿದೆ. ಆ ಮೂಲಕ, ಉಪಖಂಡದಲ್ಲಿನ ವಿವಿಧ ಭಾಷೆಗಳ ಹಕ್ಕು ಮತ್ತು ಗುರುತನ್ನು ರಕ್ಷಿಸಿಕೊಳ್ಳುತ್ತಿದೆ' ಎಂದು ಸ್ಟಾಲಿನ್ ಉಲ್ಲೇಖಿಸಿದ್ದಾರೆ.
'ತಮಿಳಿಗಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರಿಗೆ ಗೌರವ ಸಲ್ಲಿಸುತ್ತೇನೆ. ಭಾಷಾ ಸಂಘರ್ಷದಲ್ಲಿ ಇನ್ನುಮುಂದೆ ಯಾವುದೇ ಪ್ರಾಣಹಾನಿಯಾಗುವುದಿಲ್ಲ, ತಮಿಳು ಭಾಷಾ ಪ್ರತಿಜ್ಞೆಯೂ ಅಳಿಯುವುದಿಲ್ಲ! ಹಿಂದಿ ಹೇರಿಕೆಯನ್ನು ಸದಾ ವಿರೋಧಿಸೋಣ' ಎಂದು ರಾಜ್ಯದ ಜನರಿಗೆ ಕರೆ ನೀಡಿದ್ದಾರೆ.
ತಮಿಳುನಾಡಿನಾದ್ಯಂತ 1964-65ರಲ್ಲಿ ನಡೆದ ಹಿಂದಿ ವಿರೋಧಿ ಚಳವಳಿ ವೇಳೆ ಹಲವರು ಮೃತಪಟ್ಟಿದ್ದರು. ಕೆಲವರು ಭಾಷೆಗಾಗಿ ಆತ್ಮಹತ್ಯೆಯನ್ನೂ ಮಾಡಿಕೊಂಡಿದ್ದರು. ಅವರನ್ನೆಲ್ಲ ಭಾಷಾ ಹುತಾತ್ಮರೆಂದು ಪರಿಗಣಿಸಲಾಗಿದೆ.
ಕೇಂದ್ರ ಸರ್ಕಾರವು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ – 2020 ಮೂಲಕ ಹಿಂದಿ ಹೇರಲು ಪ್ರಯತ್ನಿಸುತ್ತಿದೆ ಎಂದು ಆಡಳಿತಾರೂಢ ಡಿಎಂಕೆ ಸರ್ಕಾರ ಆರೋಪಿಸಿದೆ. ತಮಿಳುನಾಡಿನಲ್ಲಿ ಸದ್ಯ ದ್ವಿಭಾಷಾ (ತಮಿಳು ಹಾಗೂ ಇಂಗ್ಲಿಷ್) ಸೂತ್ರ ಅನುಸರಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.