ರಾಜ್ಯಸಭಾ ಕಲಾಪದಲ್ಲಿ ಪಿ.ಚಿದಂಬರಂ ಮಾತನಾಡಿದರು
ಪಿಟಿಐ ಚಿತ್ರ
ನವದೆಹಲಿ: ಭಾರತದ ಮೇಲೆ ಅಮೆರಿಕದ ಸುಂಕದ ಬರೆ, ಬ್ಯಾಂಕ್ಗಳಲ್ಲದ ಹಣಕಾಸು ಸಂಸ್ಥೆಗಳ ಮೇಲೆ ಕಠಿಣ ನಿಯಂತ್ರಣ ಮತ್ತು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಆರ್ಥಿಕ ನೆರವನ್ನು ₹10 ಸಾವಿರಕ್ಕೆ ಹೆಚ್ಚಿಸುವಂತೆ ವಿರೋಧಪಕ್ಷಗಳು ಸರ್ಕಾರವನ್ನು ಗುರುವಾರ ಒತ್ತಾಯಿಸಿದವು.
ಹಣಕಾಸು ಮಸೂದೆ 2025ರ ಕುರಿತು ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ಕಾಂಗ್ರೆಸ್ನ ಪಿ. ಚಿದಂಬರಂ, ‘ಭಾರತದ ಉತ್ಪನ್ನಗಳ ಮೇಲೆ ಅಮೆರಿಕ ಹೇರುತ್ತಿರುವ ಸುಂಕದ ಹೊರೆಗೆ ಸರ್ಕಾರದ ಪ್ರತಿಕ್ರಿಯೆ ಏನು? ಈ ವಿಷಯವನ್ನು ಸರ್ಕಾರ ಸದನದಲ್ಲೂ ಚರ್ಚಿಸಿಲ್ಲ ಹಾಗೂ ವಿರೋಧ ಪಕ್ಷಗಳೊಂದಿಗೂ ಸಮಾಲೋಚನೆ ನಡೆಸಿಲ್ಲ. ಇದು ನಿಜವಾಗಿಯೂ ಹೃದಯದಲ್ಲಿ ಆದ ಬದಲಾವಣೆಯೇ ಅಥವಾ ನೀತಿಯಲ್ಲಾದ ಬದಲಾವಣೆಯೇ? ಯಾವುದೂ ಅರ್ಥವಾಗುತ್ತಿಲ್ಲ. ಟ್ರಂಪ್ ಆಘಾತವು ಸರ್ಕಾರದ ಇಂಥ ಕರ್ತವ್ಯಗಳೇ ಕ್ಷೀಣಿಸುವಂತೆ ಮಾಡಿದೆ’ ಎಂದಿದ್ದಾರೆ.
ಆಮ್ ಆದ್ಮಿ ಪಕ್ಷದ ವಿಕ್ರಮ್ಜಿತ್ ಸಿಂಗ್ ಸಹಾನೇ ಅವರು ಮಾತನಾಡಿ, ‘ದೇಶವು ಅತಿ ವೇಗದ ಆರ್ಥಿಕತೆಯನ್ನು ಹೊಂದಿರಬಹುದು, ಹೀಗಿದ್ದರೂ ದೇಶದ ತಲಾದಾಯವು ಜಗತ್ತಿನಲ್ಲಿ 124ನೇ ರ್ಯಾಂಕ್ನಲ್ಲಿದೆ. ಇಂಥ ಸಂದರ್ಭದಲ್ಲಿ ನಾಗರಿಕರಿಗೆ ಉಚಿತವಾಗಿ ಪಡಿತರ ವಿತರಣೆ ಮತ್ತು ರೈತರಿಗೆ ನೀಡುತ್ತಿರುವ ನೆರವು ಹೆಚ್ಚಿಸಬೇಕು’ ಎಂದು ಆಗ್ರಹಿಸಿದ್ದಾರೆ.
‘ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಆರ್ಥಿಕ ನೆರವನ್ನು ಈಗಿರುವ ವಾರ್ಷಿಕ ₹6 ಸಾವಿರದಿಂದ ₹10 ಸಾವಿರಕ್ಕೆ ಹೆಚ್ಚಿಸಬೇಕು’ ಎಂದು ಒತ್ತಾಯಿಸಿದ್ದಾರೆ.
ಜಿಎಸ್ಟಿ ಬೆಲೆ ಏರಿಕೆ, ಮುಚ್ಚುತ್ತಿರುವ ಸ್ಟಾರ್ಟ್ಅಪ್ಗಳು ಹಾಗೂ ನಿರುದ್ಯೋಗ ಸಮಸ್ಯೆ ಕುರಿತೂ ವಿಪಕ್ಷಗಳು ಸರ್ಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.