ರವಿಶಂಕರ್ ಪ್ರಸಾ್, ಶಶಿ ತರೂರ್, ಕನಿಮೋಳಿ
ನವದೆಹಲಿ: ಪಹಲ್ಗಾಮ್ ದಾಳಿಗೆ ‘ಆಪರೇಷನ್ ಸಿಂಧೂರ’ ಮೂಲಕ ಪ್ರತೀಕಾರ ತೆಗೆದುಕೊಂಡಿರುವ ಭಾರತದ ಕ್ರಮ ಹಾಗೂ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮುಖವನ್ನು ವಿಶ್ವವೇದಿಕೆಯಲ್ಲಿ ಬಹಿರಂಗಪಡಿಸಲು ರಾಜತಾಂತ್ರಿಕ ಕಾರ್ಯಾಚರಣೆಯ ಭಾಗವಾಗಿ ವಿವಿಧ ಪಕ್ಷಗಳ ಏಳು ಸಂಸದರ ನೇತೃತ್ವದ ನಿಯೋಗಗಳನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದೆ.
ಈ ಕುರಿತಂತೆ ಸಂಸದೀಯ ವ್ಯವಹಾರಗಳ ಸಚಿವಾಲಯವು ಶನಿವಾರ ಹೇಳಿಕೆ ಬಿಡುಗಡೆ ಮಾಡಿದೆ.
‘ಭಾರತದ ರಾಷ್ಟ್ರೀಯ ಒಮ್ಮತ ಹಾಗೂ ಯಾವುದೇ ರೀತಿಯ ಭಯೋತ್ಪಾದನೆಯನ್ನು ನಿರ್ಮೂಲಗೊಳಿಸಲು ಭಾರತದ ದೃಢ ನಿರ್ಧಾರದ ಕುರಿತು ಈ ನಿಯೋಗ ಜಗತ್ತಿನ ಹಲವು ರಾಷ್ಟ್ರಗಳಿಗೆ ಮನವರಿಕೆ ಮಾಡಿಕೊಡಲಿದೆ. ಭಯೋತ್ಪಾದನೆ ಕುರಿತು ಭಾರತವು ಶೂನ್ಯ ಸಹಿಷ್ಣುತೆ ಹೊಂದಿದೆ ಎಂಬ ಸಂಗತಿಯನ್ನು ತಿಳಿಸಿಕೊಡಲಿದೆ’ ಎಂದು ಸಚಿವಾಲಯ ಹೇಳಿದೆ.
ಜಾಗತಿಕ ಮಟ್ಟದಲ್ಲಿ ಭಾರತದ ನಿಲುವನ್ನು ಸ್ಪಷ್ಟ ಧ್ವನಿಯಲ್ಲಿ ತಿಳಿಸುವ ಉದ್ದೇಶದೊಂದಿಗೆ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಮೀರಿ ನಿಯೋಗದಲ್ಲಿ ಯಾರಿರಬೇಕು ಎಂಬುದರ ಕುರಿತು ಅತ್ಯಂತ ಜಾಗರೂಕತೆಯಿಂದ ಸದಸ್ಯರನ್ನು ಸರ್ಕಾರ ಆಯ್ಕೆ ಮಾಡಿದೆ ಎಂದೆನ್ನಲಾಗಿದೆ.
ಬಿಜೆಪಿ ಸಂಸದ ರವಿಶಂಕರ ಪ್ರಸಾದ್ ಮತ್ತು ಬೈಜಯಂತ್ ಪಾಂಡಾ, ಕಾಂಗ್ರೆಸ್ ಸಂಸದ ಶಶಿ ತರೂರ್, ಜೆಡಿಯು ಸಂಸದ ಸಂಜಯ್ ಜಾ, ಡಿಎಂಕೆ ಸಂಸದೆ ಕನಿಮೋಳಿ, ಎನ್ಸಿಪಿ (ಎಸ್ಪಿ) ಸಂಸದೆ ಸುಪ್ರಿಯಾ ಸುಳೆ, ಶಿವಸೇನಾ ಸಂಸದ ಶ್ರೀಕಾಂತ್ ಶಿಂದೆ ಈ ನಿಯೋಗಗಳನ್ನು ಮುನ್ನಡೆಸಲಿದ್ದಾರೆ.
ಏಳು ಜನರಲ್ಲಿ ನಾಲ್ವರು ಸಂಸದರು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್ಡಿಎ) ಸೇರಿದವರು. ಮೂವರು ವಿರೋಧಪಕ್ಷಗಳ ಇಂಡಿಯಾ ಒಕ್ಕೂಟದವರು. ಪ್ರತಿ ನಿಯೋಗವು ತಲಾ ಐದು ರಾಷ್ಟ್ರಗಳಿಗೆ ಭೇಟಿ ನೀಡುವ ಸಾಧ್ಯತೆ ಇದೆ. ನಿಯೋಗದಲ್ಲಿ ಆಯಾ ರಾಷ್ಟ್ರಗಳಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಗಳೂ ಇರಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಮಾಹಿತಿ ನೀಡಿರುವ ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು, ‘ಆಪರೇಷನ್ ಸಿಂಧೂರ ಮತ್ತು ಗಡಿಯಲ್ಲಿನ ಭಯೋತ್ಪಾದನೆ ವಿರುದ್ಧದ ಭಾರತದ ಹೋರಾಟ ಕುರಿತು ಸರ್ವಪಕ್ಷಗಳ ಏಳು ನಿಯೋಗಗಳು ಪ್ರಮುಖ ಮಿತ್ರ ರಾಷ್ಟ್ರಗಳಿಗೆ ಭೇಟಿ ನೀಡಲಿವೆ. ಜತೆಗೆ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಸದಸ್ಯ ರಾಷ್ಟ್ರಗಳನ್ನೂ ಭೇಟಿ ಮಾಡಿ ಭಾರತದ ನಿಲುವನ್ನು ವಿವರಿಸಲಿವೆ’ ಎಂದಿದ್ದಾರೆ.
‘ಈ ಸಂದರ್ಭದಲ್ಲಿ ಭಾರತ ಒಗ್ಗಟ್ಟಿನಿಂದ ಹೋರಾಟ ನಡೆಸುತ್ತಿದೆ. ನಮ್ಮೆಲ್ಲರ ಭಿನ್ನಾಭಿಪ್ರಾಯ ಹಾಗೂ ರಾಜಕೀಯವನ್ನೂ ಮೀರಿ ರಾಷ್ಟ್ರೀಯ ಏಕತೆಯ ಪ್ರಬಲ ಪ್ರತಿಬಿಂಬ’ ಎಂದು ರಿಜಿಜು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.