ADVERTISEMENT

ಪೈಲಟ್‌ ಇಂಧನ ಬಂದ್‌ ಮಾಡಿದ್ದೇ AI-171 ವಿಮಾನ ಪತನಕ್ಕೆ ಕಾರಣ: ಕೊರಿಯರ್ ವರದಿ

ಏಜೆನ್ಸೀಸ್
Published 12 ಫೆಬ್ರುವರಿ 2026, 13:05 IST
Last Updated 12 ಫೆಬ್ರುವರಿ 2026, 13:05 IST
<div class="paragraphs"><p>ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡಿರುವ ದೃಶ್ಯ</p></div>

ಗುಜರಾತ್‌ನ ಅಹಮದಾಬಾದ್‌ನಲ್ಲಿ ಏರ್ ಇಂಡಿಯಾ ವಿಮಾನ ಪತನಗೊಂಡಿರುವ ದೃಶ್ಯ

   

ರೋಮ್‌: ಗುಜರಾತ್‌ನ ಅಹಮದಾಬಾದ್‌ನಿಂದ ಲಂಡನ್‌ಗೆ ಹೊರಟಿದ್ದ ಏರ್‌ ಇಂಡಿಯಾಗೆ ಸೇರಿದ್ದ ಬೋಯಿಂಗ್ 787 ಡ್ರೀಮ್‌ಲೈನರ್ ವಿಮಾನವು 2025ರ ಜೂನ್‌ 12ರಂದು ಪತನಗೊಂಡಿದ್ದರ ಹಿಂದೆ, ಉದ್ದೇಶಪೂರ್ವಕವಾಗಿ ಇಂಧನ ಗುಂಡಿಯನ್ನು ಬಂದ್ ಮಾಡಲಾಗಿತ್ತು ಎಂಬ ಆಘಾತಕಾರಿ ವರದಿಯೊಂದನ್ನು ಇಟಲಿಯ ಕೊರಿಯರ್‌ ಡೆಲ್ಲಾ ಸೆರಾ ಎಂಬ ಮಾಧ್ಯಮ ವರದಿ ಮಾಡಿದೆ.

ತೀವ್ರ ಚರ್ಚೆಯನ್ನು ಹುಟ್ಟುಹಾಕಿರುವ ಈ ವರದಿಯಲ್ಲಿ, ‘ಎಐ–171 ವಿಮಾನ ಪತನಕ್ಕೂ ಮೊದಲು ವಿಮಾನದಲ್ಲಿ ಯಾವುದೇ ತಾಂತ್ರಿಕ ದೋಷವಿರಲಿಲ್ಲ. ಬದಲಿಗೆ ಮಾನವ ಹಸ್ತಕ್ಷೇಪವಿತ್ತು. ಕ್ಯಾಪ್ಟನ್ ಸುಮೀತ್ ಸಬರವಾಲ್ ಅವರು ಉದ್ದೇಶಪೂರ್ವಕವಾಗಿ ಇಂಧನ ಗುಂಡಿಯನ್ನು ಬಂದ್ ಮಾಡಲಾಗಿತ್ತು. ಇದು ಬಹುತೇಕ ಖಚಿತ ಮಾಹಿತಿಯಾಗಿದ್ದು, ಪಾಶ್ಚಿಮಾತ್ಯ ವಿಮಾನಯಾನ ಸಂಸ್ಥೆಯ ಮೂಲ ಇದನ್ನು ಖಚಿತಪಡಿಸಿದೆ ಎಂದು ಅದು ವರದಿ ಮಾಡಿದೆ.

ADVERTISEMENT

ಆದರೆ ಈ ವಿಷಯದಲ್ಲಿ ಭಾರತೀಯ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ) ಈವರೆಗೂ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲ. 

ದುರಂತಕ್ಕೀಡಾದ ಎಐ–171 ವಿಮಾನದಲ್ಲಿ ಸಿಬ್ಬಂದಿ ಸಹಿತ 242 ಪ್ರಯಾಣಿಕರಿದ್ದರು. ಒಬ್ಬರು ಪವಾಡ ಸದೃಶ ರೀತಿಯಲ್ಲಿ ಪಾರಾದರು. ಪತನಗೊಂಡ ಸ್ಥಳದಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿಗಳನ್ನೂ ಒಳಗೊಂಡು 19 ಜನರು ಈ ದುರಂತದಲ್ಲಿ ಮೃತಪಟ್ಟಿದ್ದರು. 

ಎಎಐಬಿ ಪ್ರಾಥಮಿಕ ವರದಿಯ ಪ್ರಕಾರ, ಕಪ್ಪು ಪೆಟ್ಟಿಗೆಯಲ್ಲಿ ದಾಖಲಾದ ಧ್ವನಿಮುದ್ರಣದಲ್ಲಿ ಒಬ್ಬ ಪೈಲಟ್‌ ಮತ್ತೊಬ್ಬರಿಗೆ ಕೇಳುವ ಸಂಭಾಷಣೆ ಇದ್ದು, ‘ಇಂಧನ ಗುಂಡಿಯನ್ನು ಏಕೆ ಬಂದ್‌ ಮಾಡಿದೆ’ ಎಂದು ಕೇಳಿರುವುದು ಹಾಗೂ ‘ನಾನು ಹಾಗೆ ಮಾಡಿಲ್ಲ’ ಎಂಬುದನ್ನು ದಾಖಲಿಸಲಾಗಿತ್ತು. ಜತೆಗೆ ಘಟನೆ ನಡೆಯುವ ಒಂದು ತಿಂಗಳ ಹಿಂದಿನಿಂದಲೂ ಸುಮೀತ್ ಅವರು ಖಿನ್ನತೆಗೆ ಜಾರಿದ್ದರು ಎಂದೂ ಹೇಳಲಾಗಿದೆ.

ದುರಂತದ ತನಿಖೆ ಕೈಗೊಂಡ ಅಮೆರಿಕದ ತಜ್ಞರ ತಂಡವೂ, ಯಂತ್ರದಲ್ಲಿ ದೋಷವಿರಲಿಲ್ಲ ಮತ್ತು ಇದೊಂದು ಉದ್ದೇಶಪೂರ್ವಕವಾದ ಕೃತ್ಯ ಎಂದು ಹೇಳಿರುವುದನ್ನು ಇಟಲಿ ಮಾಧ್ಯಮ ವರದಿ ಮಾಡಿದೆ.

ಎಎಐಬಿ ಪ್ರಾಥಮಿಕ ಮಾಹಿತಿಯಲ್ಲಿ ಒಬ್ಬ ಪೈಲಟ್‌ ಅನ್ನು ದೂರಲಾಗಿತ್ತು. ಇದನ್ನು ವಿರೋಧಿಸಿ ಪೈಲಟ್‌ಗಳ ಸಂಘ ವ್ಯಾಪಕ ಪ್ರತಿಭಟನೆಯನ್ನೂ ನಡೆಸಿತ್ತು. ಮಗ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎಂಬುದನ್ನು ಸುಮೀತ್ ಅವರ ತಂದೆಯೂ ಸರಾಸಗಟಾಗಿ ತಿರಸ್ಕರಿಸಿದ್ದರು. 

ಅಮೆರಿಕದ ತಜ್ಞರ ವಾದದಂತೆ ಯಂತ್ರದಲ್ಲಿನ ದೋಷ ಇರಲಿಲ್ಲ ಮತ್ತು ಇದು ಉದ್ದೇಶಪೂರ್ವಕ ಕೃತ್ಯ ಎಂಬುದನ್ನು ಭಾರತದ ತನಿಖಾ ತಂಡವೂ ಒಪ್ಪಿಕೊಂಡಿದೆ ಎಂದು ಇಟಲಿಯ ಸುದ್ದಿ ಮಾಧ್ಯಮ ಕೊರಿಯರ್‌ ಡೆಲ್ಲಾ ಸೆರಾ ವರದಿ ಮಾಡಿದೆ.

ಆದರೆ ಯಾವುದೇ ತೀರ್ಮಾನ ಅಂತಿಮಗೊಳ್ಳುವ ಮೊದಲು ರಾಜಕೀಯ ಮೌಲ್ಯಮಾಪನಕ್ಕೆ ಇದು ಒಳಪಡುತ್ತದೆ ಮತ್ತು ಎಚ್ಚರಿಕೆಯ ಹೆಜ್ಜೆಗಳನ್ನಿಡುವ ಸಾಧ್ಯತೆ ಇದೆ ಎಂದೂ ಇದು ವರದಿ ಮಾಡಿದೆ.

ಈ ನಡುವೆ ಮತ್ತೊಂದು ವರದಿಯ ಪ್ರಕಾರ, ದುರಂತದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ನೀಡಲು ನಿರ್ಧರಿಸಿರುವ ವಿಮಾನಯಾನ ಸಂಸ್ಥೆಯು, ‘ವಿಮಾನಯಾನ ಸಂಸ್ಥೆ ಮತ್ತು ತಯಾರಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಿಲ್ಲ’ ಎಂಬ ಷರತ್ತು ವಿಧಿಸಿರುವುದಾಗಿಯೂ ಈ ವರದಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.