ADVERTISEMENT

ಪಂಜಾಬ್‌ ಮುಖ್ಯಮಂತ್ರಿಯೊಂದಿಗೆ ಇಂದು ಮಾತುಕತೆ: ಯಾವುದೇ ಚರ್ಚೆಗೆ ಸಿದ್ಧ ಎಂದ ಸಿಧು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 30 ಸೆಪ್ಟೆಂಬರ್ 2021, 7:29 IST
Last Updated 30 ಸೆಪ್ಟೆಂಬರ್ 2021, 7:29 IST
ನವಜೋತ್‌ ಸಿಂಗ್‌ ಸಿಧು
ನವಜೋತ್‌ ಸಿಂಗ್‌ ಸಿಧು    

ಹೊಸದಿಲ್ಲಿ: ಮಾತುಕತೆಗೆ ಆಹ್ವಾನಿಸಿರುವ ಪಂಜಾಬ್‌ ಮುಖ್ಯಮಂತ್ರಿಗೆ ನವಜೋತ್‌ ಸಿಂಗ್‌ ಸಿಧು ಟ್ವೀಟ್‌ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಗುರುವಾರ ಬೆಳಿಗ್ಗೆ ಟ್ವೀಟ್‌ ಮಾಡಿರುವ ಅವರು, 'ಮುಖ್ಯಮಂತ್ರಿಯವರು ನನ್ನನ್ನು ಮಾತುಕತೆಗೆ ಆಹ್ವಾನಿಸಿದ್ದಾರೆ. ಇಂದು(ಗುರುವಾರ) ಮಧ್ಯಾಹ್ನ 3 ಗಂಟೆಗೆ ಚಂಡೀಗಡದಲ್ಲಿರುವ ಪಂಜಾಬ್ ಭವನವನ್ನು ತಲುಪಲಿದ್ದೇನೆ. ಅವರ ನನ್ನ ಜೊತೆ ಯಾವುದೇ ರೀತಿಯ ಚರ್ಚೆಗೆ ಮುಂದಾದರೂ ಅದನ್ನು ನಾನು ಸ್ವಾಗತಿಸುತ್ತೇನೆ' ಎಂದು ಸಿಧು ತಿಳಿಸಿದ್ದಾರೆ.

ಇದೇ ವೇಳೆ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿ ನವಜೋತ್ ಸಿಧು ಪಕ್ಷವನ್ನು ಮುನ್ನಡೆಸಲಿದ್ದಾರೆ ಎಂದು ಅವರ ಆಪ್ತ ಸಲಹೆಗಾರ ಮೊಹಮ್ಮದ್ ಮುಸ್ತಫಾ ಎನ್‌ಡಿಟಿವಿಗೆ ತಿಳಿಸಿದ್ದಾರೆ.

ADVERTISEMENT

ಈ ಕುರಿತು ಗುರುವಾರ ಮಾತನಾಡಿರುವ ಅವರು, 'ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲಾಗುವುದು. ನವಜೋತ್ ಸಿದ್ದು ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥರಾಗಿ ಮುಂದುವರಿಯಲಿದ್ದಾರೆ' ಎಂದು ತಿಳಿಸಿದ್ದಾರೆ.

'ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವ ನವಜೋತ್ ಸಿಧುವನ್ನು ಅರ್ಥಮಾಡಿಕೊಂಡಿದೆ. ಸಿಧು ಸಹ ಕಾಂಗ್ರೆಸ್ ನಾಯಕತ್ವವನ್ನು ಮೀರಿ ನಡೆದುಕೊಂಡಿಲ್ಲ. ಅವರು ಅಮರಿಂದರ್ ಸಿಂಗ್‌ರಂತೆ ಅಲ್ಲ. ಕಾಂಗ್ರೆಸ್‌ನ ನಾಯಕತ್ವದ ಬಗ್ಗೆ ಅಮರಿಂದರ್‌ ಸಿಂಗ್‌ ಗೌರವವನ್ನೇ ಹೊಂದಿರಲಿಲ್ಲ' ಎಂದು ಮುಸ್ತಫಾ ಹೇಳಿದ್ದಾರೆ.

'ಸಿಧು ಕೆಲವೊಮ್ಮೆ ಭಾವನಾತ್ಮಕವಾಗಿ ವರ್ತಿಸುತ್ತಾರೆ. ಇದನ್ನು ಕಾಂಗ್ರೆಸ್ ನಾಯಕತ್ವವು ಅರ್ಥಮಾಡಿಕೊಂಡಿದೆ' ಎಂದೂ ಮುಸ್ತಫಾ ಸಮರ್ಥಿಸಿಕೊಂಡಿದ್ದಾರೆ.

ಅಮರಿಂದರ್‌ ಸಿಂಗ್‌ ಅವರನ್ನು ಮುಖ್ಯಮಂತ್ರಿ ಹುದ್ದೆಯಿಂದ ಸೆ. 18ರಂದು ಕೆಳಗಿಳಿಸಲು ಯಶಸ್ವಿಯಾದ ಸಿಧು, ರಾಜ್ಯ ಘಟಕದ ಅಧ್ಯಕ್ಷರಾಗಿ ನೇಮಕವಾಗಿ 71ನೇ ದಿನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಪರಿಣಾಮವಾಗಿ ಪಕ್ಷವು ಮತ್ತೆ ಬಿಕ್ಕಟ್ಟಿಗೆ ಸಿಲುಕಿದೆ. ತಮ್ಮ ಮಹತ್ವ ಕುಂದಿದೆ ಎಂಬ ವಿಚಾರವೂ ಸಿಧು ಅವರಿಗೆ ಸಿಟ್ಟು ತರಿಸಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.