
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ
ಕೃಪೆ: ಪಿಟಿಐ
ನವದೆಹಲಿ: ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ದೇಶದಲ್ಲಿ ಹಾಗೂ ವಿದೇಶಗಳಲ್ಲಿ ಸಂಚರಿಸುವ ಕುರಿತು ಮಾಹಿತಿ ನೀಡದೆ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂಬುದಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಗುರುವಾರ ಪತ್ರ ಬರೆದಿದೆ.
ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ 'ಮತಗಳ್ಳತನ'ಕ್ಕೆ ಸಂಬಂಧಿಸಿದ ಮತ್ತಷ್ಟು ದಾಖಲೆಗಳನ್ನು ಹಂಚಿಕೊಳ್ಳುವುದಾಗಿ ರಾಹುಲ್ ಹೇಳಿದ ಬಳಿಕ ಪತ್ರ ಬರೆದಿರುವುದೇಕೆ ಎಂದು ಪ್ರಶ್ನಿಸಿರುವ ಕಾಂಗ್ರೆಸ್, ರಾಹುಲ್ ಗಾಂಧಿ ಅವರನ್ನ ಬೆದರಿಸುವ ಪ್ರಯತ್ನ ಇದಾಗಿದೆ ಎಂದು ಟೀಕಿಸಿದೆ.
ರಾಹುಲ್ ಗಾಂಧಿ ಅವರಿಗೆ ಸಿಆರ್ಪಿಎಫ್ ವಿಐಪಿ ಭದ್ರತಾ ವಿಭಾಗವು 'ಝಡ್+' ಭದ್ರತೆಯನ್ನು ಒದಗಿಸುತ್ತಿದೆ. ಸುಮಾರು 10–12 ಸಶಸ್ತ್ರ ಕಮಾಂಡೊಗಳು ಅವರಿಗೆ ಬಿಗಿ ಭದ್ರತೆ ಒದಗಿಸುತ್ತಾರೆ.
ರಾಹುಲ್ ಗಾಂಧಿ ಅವರು ತಾವು ಭೇಟಿ ನೀಡುವ ಪ್ರದೇಶಗಳ ಕುರಿತು ಮುಂಚಿತವಾಗಿ ಮಾಹಿತಿ ನೀಡುವುದಿಲ್ಲ ಎಂದು ಖರ್ಗೆ ಅವರಿಗೆ ಸಿಆರ್ಪಿಎಫ್ ತಿಳಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಹಿಂದೆಯೂ ಇದೇ ರೀತಿ ಮಾಹಿತಿ ನೀಡಲಾಗಿತ್ತು ಎಂದಿರುವ ಅಧಿಕಾರಿಗಳು, ಪ್ರಯಾಣದ ಬಗ್ಗೆ ಮಾಹಿತಿ ಹಂಚಿಕೊಳ್ಳದಿರುವುದು ಅಪಾಯವನ್ನು ಹೆಚ್ಚಿಸುತ್ತದೆ. ರಾಹುಲ್ ಮತ್ತು ಅವರ ಸಿಬ್ಬಂದಿ, ನಿಗದಿತ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದೆ ಎಂದು ವಿವರಿಸಿದ್ದಾರೆ.
ಕಾಂಗ್ರೆಸ್ನ ಮಾಧ್ಯಮ ಮತ್ತು ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೆರಾ ಅವರು, 'ಸಿಆರ್ಪಿಎಫ್ ಪತ್ರ ಬರೆದಿರುವ ಸಮಯ ಮತ್ತು ತಕ್ಷಣವೇ ಸಾರ್ವಜನಿಕ ಹೇಳಿಕೆ ಬಿಡುಗಡೆ ಮಾಡಿರುವುದು ಪ್ರಶ್ನೆಗಳನ್ನು ಮೂಡಿಸುತ್ತದೆ. ಚುನಾವಣಾ ಆಯೋಗದ ಸಹಯೋಗದಲ್ಲಿ ಬಿಜೆಪಿ ಮತಗಳ್ಳತನ ಮಾಡಿದೆ ಎಂದು ರಾಹುಲ್ ಗಾಂಧಿ ಅವರು ಆರೋಪಿಸುತ್ತಿದ್ದಂತೆ ಈ ಬೆಳವಣಿಗೆಯಾಗಿದೆ' ಎಂದು ಹೇಳಿದ್ದಾರೆ.
'ಶೀಘ್ರದಲ್ಲೇ ಮತ್ತಷ್ಟು ಸಾಕ್ಷ್ಯ ಬಿಡುಗಡೆ ಮಾಡುವುದಾಗಿ ವಿರೋಧ ಪಕ್ಷದ ನಾಯಕ ಘೋಷಿಸಿದ್ದಾರೆ. ಇದು, ಸರ್ಕಾರವನ್ನು ಬೆದರಿಸುವ ಪ್ರಯತ್ನವೇ? ರಾಹುಲ್ ಬಹಿರಂಗಪಡಿಸಲಿರುವ ಸತ್ಯದ ಬಗ್ಗೆ ಸರ್ಕಾರದಲ್ಲಿ ಆತಂಕ ಸೃಷ್ಟಿಯಾಗಿದೆಯೇ?' ಎಂದು ಕೇಳಿದ್ದಾರೆ.
ಮಾಜಿ ಪ್ರಧಾನಿಗಳು ಮತ್ತು ಅವರ ಕುಟುಂಬದವರ ರಕ್ಷಣೆಗೆ ವಿಶೇಷ ಭದ್ರತಾ ಪಡೆ (ಎಸ್ಪಿಜಿ) ನಿಯೋಜನೆಯನ್ನು ರದ್ದುಪಡಿಸುವ ಮಸೂದೆಯನ್ನು ಕೇಂದ್ರ ಸರ್ಕಾರ ಮಂಡಿಸಿತ್ತು. ಅದರ ಬೆನ್ನಲ್ಲೇ, ರಾಹುಲ್ ಅವರಿಗೆ ನೀಡಿದ್ದ ಭದ್ರತೆಯ್ನು ಎಸ್ಪಿಜಿ ಹಿಂಪಡೆದಿತ್ತು.
ಈ ಕ್ರಮಕ್ಕೆ ಭಾರಿ ಟೀಕೆ ವ್ಯಕ್ತವಾಗಿತ್ತು. ಆದರೆ ಸರ್ಕಾರದ ಕ್ರಮ ಸಮರ್ಥಿಸಿಕೊಂಡು 2019ರ ನವೆಂಬರ್ನಲ್ಲಿ ಹೇಳಿಕೆ ಬಿಡುಗಡೆ ಮಾಡಿದ್ದ ಕೇಂದ್ರ ಗೃಹ ಸಚಿವಾಲಯ, 2015ರಿಂದ 2019ರ ಮೇ ಅವಧಿಯಲ್ಲಿ ರಾಹುಲ್ ಅವರು ದೆಹಲಿಯಲ್ಲಿ 1,892 ಸ್ಥಳಗಳಿಗೆ ಬುಲೆಟ್ಪ್ರೂಫ್ ವಾಹನವಿಲ್ಲದೆ ಹೋಗಿದ್ದಾರೆ. ಹಾಗೆಯೇ, ಜೂನ್ ವರೆಗೆ 247 ಬಾರಿ ದೆಹಲಿಯಿಂದ ಆಚೆಗೂ ಸಂಚರಿಸಿದ್ದಾರೆ ಎಂಬುದಾಗಿ ತಿಳಿಸಿತ್ತು.
2005–14ರ ಅವಧಿಯಲ್ಲಿ ಎಸ್ಪಿಜಿ ಅನುಮೋದನೆ ಇಲ್ಲದ ವಾಹನಗಳಲ್ಲಿ ದೇಶದ ವಿವಿಧ ಸ್ಥಳಗಳಿಗೆ 18 ಬಾರಿ ಭೇಟಿ ನೀಡಿದ್ದಾರೆ ಎಂದೂ ಆರೋಪಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.