ವೃಂದಾವನದಲ್ಲಿರುವ ಸಿಹಿತಿಂಡಿಗಳ ಅಂಗಡಿ
Credit: iStock Photo
ಮಥುರಾ (ಉತ್ತರ ಪ್ರದೇಶ): ಆಹಾರ ಸುರಕ್ಷತೆ ಹಾಗೂ ಔಷಧ ಆಡಳಿತ (ಎಫ್ಎಸ್ಡಿಎ) ವಿಭಾಗವು ಮಥುರಾ ಮತ್ತು ವೃಂದಾವನದ ದೇವಸ್ಥಾನಗಳಲ್ಲಿ ವಿತರಿಸುತ್ತಿದ್ದ ಪ್ರಸಾದ ಸೇರಿದಂತೆ ದೇವಸ್ಥಾನಗಳ ಬಳಿ ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ 43 ಪದಾರ್ಥಗಳ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಿದೆ ಎಂದು ವರದಿಯಾಗಿದೆ.
ಅಂಗಡಿಗಳಲ್ಲಿ ಮಾರಾಟ ಮಾಡುತ್ತಿದ್ದ ‘ಹಾಲು’, ‘ಪನೀರ್’, ‘ಪೇಡಾ’, ‘ಬರ್ಫಿ’, ‘ಮಿಲ್ಕ್ ಕೇಕ್’, ‘ರಸಗುಲ್ಲಾ’, ‘ಸೋನ್ ಪಾಪಡಿ’ ಸೇರಿದಂತೆ ಮಸಾಲೆಗಳಿಂದ ತಯಾರಿಸಿದ ಸಿಹಿತಿಂಡಿಗಳ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಎಫ್ಎಸ್ಡಿಎ ಸಹಾಯಕ ಆಯುಕ್ತ ಧೀರೇಂದ್ರ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.
43 ಪದಾರ್ಥಗಳ ಪೈಕಿ 42 ಪದಾರ್ಥಗಳು ಉತ್ತಮ ಗುಣಮಟ್ಟ ಹೊಂದಿವೆ. ಆದರೆ, ‘ಪೇಡಾ’ ಮಾದರಿಯನ್ನು ಮಾತ್ರ ಪರೀಕ್ಷೆಗಾಗಿ ಲಖನೌಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಕಲಬೆರಕೆ ‘ಖೋವಾ’ ಮಾರಾಟ; ಡಿಂಪಲ್ ಯಾದವ್ ಆರೋಪ
ತಿರುಪತಿಯಲ್ಲಿ ಲಾಡು ತಯಾರಿಸುವಾಗ ಪ್ರಾಣಿಗಳ ಕೊಬ್ಬು ಬಳಸಲಾಗಿದೆ ಎಂಬ ಆರೋಪ ಭುಗಿಲೆದ್ದ ಬೆನ್ನಲ್ಲೇ, ಮಥುರಾದಲ್ಲಿ ಕಲಬೆರಕೆಯುಕ್ತ ‘ಖೋವಾ’ ಮಾರುತ್ತಿದ್ದು, ತನಿಖೆ ನಡೆಸಬೇಕು’ ಎಂದು ಸಮಾಜವಾದಿ ಪಕ್ಷದ ಸಂಸದೆ ಡಿಂಪಲ್ ಯಾದವ್ ಆಗ್ರಹಿಸಿದ್ದಾರೆ.
‘ತಿರುಪತಿ ಲಾಡುಗಳ ತಯಾರಿಕೆ ವೇಳೆ ಕಲಬೆರಕೆಯುಕ್ತ ತುಪ್ಪ ಬಳಸಿರುವುದು ಅತ್ಯಂತ ಗಂಭೀರ ವಿಚಾರ. ಇದು ಜನರ ಧಾರ್ಮಿಕ ನಂಬಿಕೆಗೆ ನೋವುಂಟು ಮಾಡಿದೆ. ಆಹಾರ ಇಲಾಖೆಯ ವೈಫಲ್ಯದಿಂದ ಕಲಬೆರಕೆಯುಕ್ತ ಆಹಾರ, ತೈಲ ಬಳಕೆಯಿಂದ ಜನರು ಗಂಭೀರ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇಲಾಖೆಯೂ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದು, ಮೌನವಾಗಿದೆ’ ಎಂದಿದ್ದಾರೆ.
ಕೆಲವು ವರದಿಗಳ ಪ್ರಕಾರ, ಮಥುರಾದಲ್ಲಿ ಕಲಬೆರಕೆ ‘ಖೋವಾ’ ಮಾರಾಟ ಮಾಡುತ್ತಿದ್ದಾರೆ. ಬಿಜೆಪಿ ಸರ್ಕಾರವು ತಕ್ಷಣವೇ ಈ ಪ್ರಕರಣದ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದ್ದಾರೆ. ವರದಿಯ ಮೂಲ ತಿಳಿಸಲು ಅವರು ನಿರಾಕರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.