ADVERTISEMENT

ಸೆಪ್ಟೆಂಬರ್ 25ರಂದು ಸಂಯುಕ್ತ ಕಿಸಾನ್ ಮೋರ್ಚಾದಿಂದ 'ಭಾರತ್ ಬಂದ್‌'ಗೆ ಕರೆ

ಪಿಟಿಐ
Published 27 ಆಗಸ್ಟ್ 2021, 11:52 IST
Last Updated 27 ಆಗಸ್ಟ್ 2021, 11:52 IST
ರೈತರ ಪ್ರತಿಭಟನೆ (ಸಂಗ್ರಹ ಚಿತ್ರ)
ರೈತರ ಪ್ರತಿಭಟನೆ (ಸಂಗ್ರಹ ಚಿತ್ರ)   

ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ಮೂರು ನೂತನ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಗಳ ಒಕ್ಕೂಟ ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ಸೆಪ್ಟೆಂಬರ್ 25ರಂದು 'ಭಾರತ್ ಬಂದ್‌'ಗೆ ಕರೆ ನೀಡಿದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಆರಂಭವಾದ ಪ್ರತಿಭಟನೆ ದೇಶದಾದ್ಯಂತ ವಿಸ್ತರಿಸುವುದು ಹಾಗೂ ಅಂದೋಲನವನ್ನು ತೀವ್ರಗೊಳಿಸುವುದು ಇದರ ಹಿಂದಿನ ಗುರಿಯಾಗಿದೆ.

ದೆಹಲಿ ಸಿಂಘು ಗಡಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಸ್‌ಕೆಎಂ ಮುಖಂಡ ಆಶಿಶ್ ಮಿತ್ತಲ್, 'ನಾವು ಸೆಪ್ಟೆಂಬರ್ 25ರಂದು ಭಾರತ್ ಬಂದ್‌ಗೆ ಕರೆ ನೀಡಿದ್ದೇವೆ.ಕಳೆದ ವರ್ಷ ಇದೇ ದಿನಾಂಕದಂದು ಬಂದ್ ಆಯೋಜಿಸಿದ ನಂತರ ಇದು ನಡೆಯುತ್ತಿದೆ. ಕಳೆದ ವರ್ಷ ಕೊರೊನಾವೈರಸ್ ನಡುವೆ ನಡೆದ ಪ್ರತಿಭಟನೆಗಿಂತಲೂ ಹೆಚ್ಚಿನ ಯಶಸ್ಸು ಸಿಗಲಿದೆ' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಸಿಂಘು ಗಡಿ ಭಾಗದಲ್ಲಿ ರೈತರು ಹೋರಾಟ ಆರಂಭಿಸಿ ಒಂಬತ್ತು ತಿಂಗಳು ಪೂರ್ಣಗೊಂಡಿದೆ. ಇದರಂಗವಾಗಿ ವಿವಿಧ ರೈತ ಸಂಘಟನೆಗಳು ಪ್ರತಿಭಟನಾ ಸ್ಥಳದಲ್ಲೇ ಹಮ್ಮಿಕೊಂಡಿದ್ದ 'ರಾಷ್ಟ್ರೀಯ ಸಮಾವೇಶ' ಸಂಪೂರ್ಣ ಯಶಸ್ಸು ಕಂಡಿದೆ ಎಂದವರು ತಿಳಿಸಿದ್ದಾರೆ.

22 ರಾಜ್ಯಗಳ 300ರಷ್ಟು ರೈತ ಸಂಘದ ಮುಖಂಡರು ಸೇರಿದಂತೆ ಮಹಿಳೆ, ಯುವ, ಬುಡಕಟ್ಟು, ಕಾರ್ಮಿಕ ಸಂಘಟನೆಯ ಪ್ರತಿನಿಧಿಗಳು ಭಾಗವಹಿಸಿದ್ದರು. ಸರ್ಕಾರವು ಕಾರ್ಪೊರೇಟ್ ಪರ ಮತ್ತು ರೈತರ ವಿರುದ್ಧ ಹೇಗೆ ನೀತಿ ಜಾರಿಗೊಳಿಸುತ್ತಿದೆ ಎಂಬುದರ ಬಗ್ಗೆ ಚರ್ಚಿಸಲಾಯಿತು.

ಇದುವರೆಗೆ ಕೇಂದ್ರ ಸರ್ಕಾರದೊಂದಿಗೆ 10ಕ್ಕೂ ಹೆಚ್ಚು ಸುತ್ತಿನ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನವುಂಟಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.