ಎಸ್ಎಲ್ಬಿಸಿ ಸುರಂಗ
(ಪಿಟಿಐ ಚಿತ್ರ)
ನಾಗರಕರ್ನೂಲ್ (ತೆಲಂಗಾಣ): ಭಾಗಶಃ ಕುಸಿದಿರುವ ಶ್ರೀಶೈಲಂ ಎಡದಂಡೆ ಕಾಲುವೆಯ (ಎಸ್ಎಲ್ಬಿಸಿ) ಸುರಂಗದಡಿ ಸಿಲುಕಿರುವ 7 ಮಂದಿಯನ್ನು ಪತ್ತೆಹಚ್ಚುವ ಕಾರ್ಯಾಚರಣೆ 21ನೇ ದಿನವೂ ತ್ವರಿತ ಗತಿಯಲ್ಲಿ ಮುಂದುವರಿದಿದೆ.
ಕಾರ್ಯಾಚರಣೆಯಲ್ಲಿ ಭಾಗಿಯಾಗಿರುವ ವಿವಿಧ ಸಂಸ್ಥೆಗಳ ಸಿಬ್ಬಂದಿ, ಇಂದು (ಶುಕ್ರವಾರ) ಮುಂಜಾನೆ ಅಗತ್ಯ ಉಪಕರಣಗಳೊಂದಿಗೆ ಸುರಂಗದೊಳಗೆ ಹೋಗಿ ಶೋಧ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಿನದ 24 ತಾಸಿನಲ್ಲಿಯೂ ಶೋಧ ಕಾರ್ಯ ನಡೆಯುತ್ತಿದೆ.
ನಾಪತ್ತೆಯಾಗಿರುವ ವ್ಯಕ್ತಿಗಳು ಇರಬಹುದೆಂದು ಶಂಕಿಸಲಾದ ಸ್ಥಳಗಳಲ್ಲಿ ಸರ್ಕಾರಿ ಸ್ವಾಮ್ಯದ ಸಿಂಗರೇನಿ ಕೊಲಿಯೆರಿಸ್ ಕಂಪನಿಯ ರಕ್ಷಣಾ ಸಿಬ್ಬಂದಿ ಹಾಗೂ ರ್ಯಾಟ್ ಮೈನರ್ಗಳು ಅಗೆಯುವ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಕೇರಳ ಪೊಲೀಸರ ಶ್ವಾನ ದಳ (ಎಚ್ಆರ್ಡಿಡಿ) ಮತ್ತು ಹೈದರಾಬಾದ್ ಮೂಲದ ರೋಬೊಟಿಕ್ಸ್ ಕಂಪನಿಯ ತಂಡವೂ ರೋಬೊಗಳ ಸಹಾಯದಿಂದ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ.
ಎಸ್ಎಲ್ಬಿಸಿ ಸುರಂಗ
ಮನುಷ್ಯರಿಗೆ ತಲುಪಲು ಸಾಧ್ಯವಾಗದ ಸ್ಥಳಗಳಲ್ಲಿ 15 ಪಟ್ಟು ನಿಖರತೆಯೊಂದಿಗೆ ರೋಬೊಗಳು ಕೆಲಸ ಮಾಡಬಲ್ಲವು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸೇನೆ, ಎನ್ಡಿಆರ್ಎಫ್, ಎಸ್ಡಿಆರ್ಎಫ್, ಎಚ್ಆರ್ಡಿಡಿ, ಸಿಂಗರೇನಿ ಕೊಲಿಯೆರಿಸ್ ಮತ್ತು ಹೈದರಾಬಾದ್ನ ರೋಬೊಟಿಕ್ಸ್ ಕಂಪನಿಯು ರಕ್ಷಣಾ ಕಾರ್ಯಾಚರಣೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿವೆ.
ಫೆಬ್ರುವರಿ 22ರಂದು ನಡೆದ ಅವಘಡದಲ್ಲಿ ಎಂಜಿನಿಯರ್, ಕಾರ್ಮಿಕರು ಸೇರಿದಂತೆ ಎಂಟು ಮಂದಿ ಸಿಲುಕಿಕೊಂಡಿದ್ದರು. ಮಾರ್ಚ್ 9ರಂದು ಟಿಬಿಎಂ ಆಪರೇಟರ್ ಪಂಜಾಬ್ ಮೂಲದ ಗುರ್ಪ್ರೀತ್ ಸಿಂಗ್ ಅವರ ಮೃತದೇಹವನ್ನು ಪತ್ತೆ ಹಚ್ಚಲಾಗಿತ್ತು. ಬಳಿಕ ಅವರ ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಯಿತು.
ಎಸ್ಎಲ್ಬಿಸಿ ಸುರಂಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.